ವಿಶೇಷ ಕ್ಷಣ; ಟಗರು ಭೇಟಿಯಾದ ಹುಲಿಯ!
ಬೆಂಗಳೂರು, ಡಿಸೆಂಬರ್ 16: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಚುನಾವಣೆಯ ಪ್ರಚಾರ ಭಾಷಣದ ವೇಳೆ ವೈರಲ್ ಆಗಿದ್ದ 'ಹೌದ್ ಹುಲಿಯ' ಡೈಲಾಗ್ ನ ಜನಕ ಕಾಗವಾಡದ ಪೀರಪ್ಪ ಕಟ್ಟಿಮನಿ ಹಾಗೂ 'ಹೌದ್ ಹುಲಿಯ' ಡೈಲಾಗ್ ಗೆ ಕಾರಣರಾದ ಸಿದ್ದರಾಮಯ್ಯರ ಅಪರೂಪದ ಸಮಾಗಮವಾಗಿದೆ.
ಸಕತ್ ವೈರಲ್ ಆಗ್ತಿದೆ 'ಹೌದ್ ಹುಲಿಯ'......!
ಹೌದು, ಸಿದ್ದರಾಮಯ್ಯ ಅವರು ಹೃದಯದ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಿನ್ನೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಮನೆ ಸೇರಿದ್ದಾರೆ. 'ಹೌದ್ ಹುಲಿಯ' ಡೈಲಾಗ್ ಜನಕ ಪೀರಪ್ಪ ಅವರು ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯರನ್ನು ಇಂದು ಬೆಂಗಳೂರಿನ ಅವರ ಮನೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾನೆ. ಈ ವೇಳೆ ಸಿದ್ದರಾಮಯ್ಯರನ್ನು ಕಂಡು ಅತೀವ ಆನಂದ ವ್ಯಕ್ತಪಡಿಸಿದ ಪೀರಪ್ಪ, ಸಿದ್ದರಾಮಯ್ಯ ಅವರ ಕಾಲಿಗೆ ಎರಗಿ ಆಶಿರ್ವಾದ ಪಡೆದು ಅಭಿಮಾನ ವ್ಯಕ್ತಪಡಿಸಿದ್ದಾನೆ. ಅಲ್ಲದೇ ಸಿದ್ದರಾಮಯ್ಯ ಜೊತೆ ಫೋಟೊ ತೆಗೆಸಿಕೊಂಡು ಸಂತಸ ವ್ಯಕ್ತಪಡಿಸಿದ. ಸ್ಥಳದಲ್ಲಿದ್ದ ಅನೇಕ ರಾಜಕೀಯ ಮುಖಂಡರು ಇದೊಂದು ಅಪರೂಪದ ಸಂಗಮ, ಹೌದ್ ಹೌದ್ ಹುಲಿಯ ಎಂದು ಸಿದ್ದರಾಮಯ್ಯ ಹಾಗೂ ಪೀರಪ್ಪಗೆ ಹುರಿದುಂಬಿಸಿದರು.
ಪೀರಪ್ಪ ಹಾಗೂ ಸಿದ್ದರಾಮಯ್ಯ ಭೇಟಿಯಾಗಿದ್ದನ್ನು ಸ್ವತಃ ಸಿದ್ದರಾಮಯ್ಯ ಅವರು ತಮ್ಮ ಟ್ವೀಟರ್ ನಲ್ಲಿ ಹಾಕಿಕೊಂಡಿದ್ದು, 'ಕಾಗವಾಡದ ನನ್ನ ಭಾಷಣದ ವೇಳೆ ಹೌದ್ ಹುಲಿಯಾ ಎಂದು ಅವನದೇ ಶೈಲಿಯಲ್ಲಿ ಕೂಗಿದ್ದ ಈ ಪೀರಪ್ಪ ಕಟ್ಟಿಮನಿ, ಅಷ್ಟೇ ಪ್ರೀತಿಯಿಂದ ಇಂದು ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾನೆ. ಇಂತಹ ನಿಷ್ಕಲ್ಮಷ ಪ್ರೀತಿ ತುಂಬಿದ ಈತನೇ ನಿಜವಾದ ಹುಲಿಯ' ಎಂದು ಫೋಟೊ ಒಕ್ಕಣಿಕೆ ಬರೆದು ಹೃದಯ ಶ್ರೀಮಂತಿಕೆ ತೋರಿಸಿದ್ದಾರೆ.
ಕಾಗವಾಡದಲ್ಲಿ ನನ್ನ ಭಾಷಣದ ವೇಳೆ "ಹೌದೋ ಹುಲಿಯಾ" ಅಂತ ಅವನದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಈ ಪೀರಪ್ಪ ಕಟ್ಟೀಮನಿ.
— Siddaramaiah (@siddaramaiah) December 16, 2019
ಅಷ್ಟೇ ಪ್ರೀತಿಯಿಂದ ಇಂದು ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾನೆ.
ಇಂಥ ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಈತನೇ ನಿಜವಾದ 'ಹುಲಿಯಾ'. pic.twitter.com/rgTLG469Jv
ಕಾಗವಾಡದ ಉಪ ಚುನಾವಣೆಯಲ್ಲಿ ಪೀರಪ್ಪ ಸಹಜವಾಗಿ ಅಂದು ಸಿದ್ದರಾಮಯ್ಯ ಅವರನ್ನು ಹುರಿದುಂಬಿಸಲು ಹೌದ್ ಹುಲಿಯ ಎಂದು ಭಾಷಣದ ನಡುವೆ ಕೂಗಿದ್ದ. ಆದರೆ, ಆ ಕ್ಷಣದಲ್ಲಿ ಸಿದ್ದರಾಮಯ್ಯ ಅವರು ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದಾನೆ ಎಂದು ಪೊಲೀಸರಿಗೆ ಪೀರಪ್ಪನನ್ನು ಹೊರಗೆ ಕಳುಹಿಸಲು ಆದೇಶಿಸಿದ್ದರು. ಈ ಸನ್ನಿವೇಶ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿ, ಪೀರಪ್ಪನಿಗೆ ಖ್ಯಾತಿ ತಂದು ಕೊಟ್ಟಿದ್ದಲ್ಲದೇ 'ಹೌದ್ ಹುಲಿಯ' ಡೈಲಾಗ್ ಸಾಕಷ್ಟು ವೈರಲ್ ಕೂಡ ಆಯಿತು.