ಐಐಎಂಬಿ: ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಕೋರ್ಸ್ ಆರಂಭ
ಬೆಂಗಳೂರು, ಜು.1: ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಮ್ಯಾನೇಜ್ಮೆಂಟ್ ಬೆಂಗಳೂರಿನಲ್ಲಿ (ಐಐಎಂಬಿ) 'ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಕೋರ್ಸ್' ಆರಂಭವಾಗುವ ಮೂಲಕ ನನ್ನ ಕನಸು ನನಸಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಶುಕ್ರವಾರ ಐಐಎಂಬಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹೊಸ ದಾಗಿ ಆರಂಭಿಸಲಾದ ʼಹಾಸ್ಪಿಟಲ್ ಮ್ಯಾನೇಜ್ಮೆಂಟ್ ಕೋರ್ಸ್ಗೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳನ್ನು ನಿರ್ವಹಣೆ ಮಾಡುವುದರ ಜೊತೆಗೆ, ಇಡೀ ಆಸ್ಪತ್ರೆಯ ಆಡಳಿತದ ನಿರ್ವಹಣೆ ಮಾಡುವ ನಾಯಕತ್ವ ಹೊಂದಿರಬೇಕು ಎಂಬುದು ನನ್ನ ಕನಸಾಗಿತ್ತು. ಆ ಕನಸು ಈ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಕೋರ್ಸ್ ಆರಂಭದ ಮೂಲಕ ಸಾಕಾರಗೊಂಡಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಹಿತ ಕಾಯ್ದ ಐಐಎಂಬಿ, ಇಂಗ್ಲೀಷ್ ನಲ್ಲೇ ಪ್ರಮಾಣ ಪತ್ರ!
ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಗೆ ತಪಾಸಣೆ ಮಾಡುತ್ತಾರೆ. ನಂತರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಆದರೆ ಆಸ್ಪತ್ರೆಯ ಸ್ವಚ್ಛತೆಯ ನಿರ್ವಹಣೆ, ಔಷಧಿ ಪೂರೈಕೆಗಳು, ಯಂತ್ರೋಪಕರಣಗಳ ಸುಸ್ಥಿತಿ ಕಾಪಾಡುವುದು, ಸಿಬ್ಬಂದಿ ನಿರ್ವಹಿಸಬೇಕಾಗುತ್ತದೆ. ಇಂತಹ ಹಲವಾರು ಕಾರ್ಯಗಳಿಗೆ ಆಡಳಿತದ ಅನುಭವ ಅತಿ ಅಗತ್ಯ ಎಂದರು.
ಆಸ್ಪತ್ರೆ ನಿರ್ವಹಣೆಗೆ ನಾಯಕತ್ವ ವಹಿಸಿ:
ರೋಗಿಗಳಿಗೆ ಚಿಕಿತ್ಸೆ ಸೇವೆ ಜತೆಗೆ ಆಸ್ಪತ್ರೆಯೊಂದರ ಸಮಗ್ರ ಪ್ರಗತಿಗೆ ವೈದ್ಯರೇ ಮುಂದಾಳತ್ವ ವಹಿಸಿ ನಿರ್ವಹಣೆ ಮಾಡುವುದು ಮುಖ್ಯವಾಗಿರುತ್ತದೆ. ಇದಕ್ಕಾಗಿ ಒಂದು ವೃತ್ತಿಪರ ಕೋರ್ಸ್ ಆರಂಭಿಸಬೇಕೆಂಬುದು ಬಹು ದಿನಗಳ ಕನಸಾಗಿತ್ತು. ಈ ಸಂಬಂಧ ಐಐಎಂಬಿಯ ನಿರ್ದೇಶಕ ಪ್ರೊ. ರಿಷಿಕೇಶ ಟಿ.ಕೃಷ್ಣನ್ ಹಾಗೂ ಡಾ.ದೇವಿ ಶೆಟ್ಟಿ ಅವರೊಂದಿಗೆ ಈ ಹಿಂದೆಯೇ ಚರ್ಚೆ ನಡೆಸಲಾಗಿತ್ತು. ಸರ್ಕಾರದಿಂದ ಅಗತ್ಯ ಸಹಕಾರ ಕೊಡುವುದಾಗಿಯು ಮಾತನಾಡಿದ್ದೇವು. ಆದರೆ ಕಾರಣಾಂತರಗಳಿಂದ ಆಗದ ಕೆಲಸ ಇಂದು ನೆರವೇರಿದೆ ಎಂದರು.
ಕೌಶಲ್ಯ ತರಬೇತಿ ಪಡೆಯುವುದು ಅಗತ್ಯ:
ವೈದ್ಯರು ಸೇರಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಎಲ್ಲರೂ ಆಡಳಿತ ನಿರ್ವಹಣಾ ಕೌಶಲ್ಯ ಪಡೆಯಬೇಕು. ಮುಖ್ಯವಾಗಿ ಸರ್ಕಾರಿ ಆರೋಗ್ಯ ಕ್ಷೇತ್ರ ಪರಿಣಾಮಕಾರಿಯಾಗಿ ಕೆಲಸ ಮಾಡಲು ಈ ಕೌಶಲ್ಯ ತರಬೇತಿ ಪಡೆಯುವುದು ಅಗತ್ಯ. ಇಲ್ಲವಾದರೆ ಆಸ್ಪತ್ರೆ ವ್ಯವಸ್ಥೆಯಲ್ಲಿ ಸುಸ್ಥಿರತೆ ಇಲ್ಲದಾಗುತ್ತದೆ. ಕೇವಲ ದೈನಿಕ ಸೇವೆಗೆ ಮಾತ್ರ ವೈದ್ಯರ ಕಾರ್ಯ ಮುಡಿಪಾಗುತ್ತದೆ. ಹೊರತು ಸರ್ಕಾರಿ ಆಸ್ಪತ್ರೆಗಳಲ್ಲಿ ಸುಧಾರಣೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ಐಐಎಂಬಿಯಲ್ಲಿ ಹೊಸದಾಗಿ ಕೋರ್ಸ್ ಆರಂಭವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಪರಿಣಿತರಿಂದ ಕೋರ್ಸ್ ಬಗ್ಗೆ ತರಬೇತಿ:
ಐಐಎಂಬಿಯಲ್ಲಿರುವ ಪರಿಣತ ಉಪನ್ಯಾಸಕರು, ಅಧ್ಯಾಪಕರು ʼಹಾಸ್ಪಿಟಲ್ ಮ್ಯಾನೇಜ್ಮೆಂಟ್ ಕೋರ್ಸ್' ನಡೆಸಿಕೊಡಲಿದ್ದಾರೆ. ಇದರಡಿ ವೈದ್ಯರಿಗೆ ಸೂಕ್ತ ತರಬೇತಿ ನೀಡಿ ಅವರನ್ನು ಆಡಳಿತ ಪರಿಣಿತಿಗೆ ಸಜ್ಜುಗೊಳಿಸಲಿದ್ದಾರೆ. ಇದು ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಉತ್ತಮ ಆಡಳಿತ ನಿರ್ವಹಣೆಗೆ ನೆರವಾಗುತ್ತದೆ ಎಂದು ಕೋರ್ಸ್ ಕುರಿತು ಸಚಿವರು ವಿವರಿಸಿದರು.
ರೋಗಿಗಳ ಮೇಲೆ ದುಷ್ಪರಿಣಾಮ:
ಆಸ್ಪತ್ರೆಗಳಲ್ಲಿ ಉತ್ತಮ ಆಡಳಿತ ಇರದೇ ದೋಷಪೂರಿತ ಆಡಳಿತ ಇದ್ದರೆ ಅದು ರೋಗಿಗಳ ಚಿಕಿತ್ಸೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕಾರ್ಪೊರೇಟ್ ಆಸ್ಪತ್ರೆಗಳು ಉತ್ತಮ ಆಡಳಿತ ವ್ಯವಸ್ಥೆಯನ್ನು ಹೊಂದಿವೆ. ಖಾಸಗಿಗೆ ಹೋಲಿಸಿದರೆ, ಸರ್ಕಾರ ತನ್ನ ಆಸ್ಪತ್ರೆಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತದೆ. ಆದರೆ ವೈದ್ಯರಿಗೆ ಆಡಳಿತದ ನಿರ್ವಹಣೆಯ ಕೊರತೆ ಇದೆ.
ಈ ಎಲ್ಲ ಕಾರಣಗಳಿಂದಾಗಿ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಕೋರ್ಸ್ ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಾಗಿತ್ತು. ಈ ಕೋರ್ಸ್ ನಿಂದ ರಾಜ್ಯದ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಿಗೆ ಮಾತ್ರವಲ್ಲದೇ, ಇಡೀ ದೇಶದ ವೈದ್ಯರಿಗೆ ನೆರವಾಗಲಿದೆ. ಮುಖ್ಯವಾಗಿ ರಾಜ್ಯದ ಸರ್ಕಾರಿ ಆರೋಗ್ಯ ವಲಯ ಬೃಹತ್ ಮಟ್ಟದಲ್ಲಿ ಸುಧಾರಣೆ ಆಗಲು ಕೋರ್ಸ್ ನೆರವಾಗಲಿದೆ ಎಂದು ಸಚಿವ ಡಾ.ಕೆ.ಸುಧಾಕರ್ ವಿಶ್ವಾಸ ವ್ಯ್ಕತಪಡಿಸಿದರು.
Recommended Video