ಹೊಸಕೋಟೆ:ಕೆ.ಸಿ ವ್ಯಾಲಿ ಯೋಜನೆಯಿಂದ ಸಾರ್ವಜನಿಕರಿಗೆ ಪ್ರತಿನಿತ್ಯ ನರಕಯಾತನೆ
ಹೊಸಕೋಟೆ, ಜುಲೈ.22: ನಮ್ಮ ಜನರಿಗೆ ಏನಾದ್ರು ಆರೋಗ್ಯದಲ್ಲಿ ಏರುಪೇರಾದ್ರೆ ತಕ್ಷಣ ಹೋಗೋದು ಆಸ್ವತ್ರೆಗೆ. ಅಲ್ಲಿಗೆ ಹೋದ್ರೆ ಗುಣಮುಖವಾಗುತ್ತೆ ಅನ್ನೋ ನಂಬಿಕೆಯಲ್ಲೆ ಜನರು ಆಸ್ಪತ್ರೆಗೆ ಹೋಗ್ತಾರೆ.
ಆದರೆ ಈ ರೀತಿ ಆಸ್ಪತ್ರೆಗೆ ಬರುವ ರೋಗಿಗೆ ಮತ್ತೊಂದು ಕಾಯಿಲೆ ಉಚಿತವಾಗಿ ಆ ಆಸ್ಪತ್ರೆ ನೀಡಿದ್ರೆ ಏನು ಕಥೆ.. ಅದೇ ರೀತಿ ಇಲ್ಲೊಂದು ಆಸ್ಪತ್ರೆ ಅಲ್ಲಿಗೆ ಬರುವ ರೋಗಿಗಳಿಗೆ, ಹೊಸ ರೋಗ ತರುತ್ತಿದೆ. ಯಾವುದೂ ಆ ಆಸ್ಪತ್ರೆ ಅಂತಿರಾ...ಈ ಸ್ಟೋರಿ ನೋಡಿ..
ಕೆ.ಸಿ.ವ್ಯಾಲಿ ಎಂಬ ಭೂತ ಕೋಲಾರಕ್ಕೆ ಬಿಟ್ಟವರೆಲ್ಲ ಎಲ್ಲಿ ಹೋದರು?
ಕೆರೆ ಕುಂಟೆಗಳಂತೆ ಹೆದ್ದಾರಿ ಬದಿ ರಸ್ತೆಯ ಹಳ್ಳಗಳಲ್ಲಿ ತುಂಬಿಕೊಂಡಿರುವ ನೀರು. ರಾಷ್ಟ್ರಿಯ ಹೆದ್ದಾರಿ 75 ರಲ್ಲಿ ಹರಸಾಹಸ ಪಟ್ಟು ಸಂಚರಿಸುತ್ತಿರುವ ವಾಹನ ಸವಾರರು. ಮತ್ತೊಂದೆಡೆ ಖಾಯಿಲೆ ವಾಸಿ ಮಾಡಿಕೊಳ್ಳೋಣ ಅಂತ ಬಂದು ಧೂಳಿನಿಂದ ಪರದಾಡುತ್ತಿರುವ ಸರ್ಕಾರಿ ಆಸ್ವತ್ರೆಯ ರೋಗಿಗಳು.
ಈ ದೃಶ್ಯಗಳೆಲ್ಲ ನಮಗೆ ಕಂಡು ಬರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದಲ್ಲಿ. ಅಂದಹಾಗೆ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿರೋದು ಮೊನ್ನೆ ತಾನೆ ಕಾಮಗಾರಿ ಕಂಪ್ಲೀಟ್ ಆಗಿ ಬಯಲು ಸೀಮೆಯ ಕೆರೆಗಳಿಗೆ ನೀರು ಹರಿಸುತ್ತಿರುವ ಕೆಸಿ ವ್ಯಾಲಿ ಯೋಜನೆ.
ವರ್ತೂರು ಕೆರೆಯಿಂದ ಹೊಸಕೋಟೆ ಮುಖಾಂತರ ಕೋಲಾರಕ್ಕೆ ಸಂಸ್ಕರಿಸಿದ ನೀರು ತರಲು ನಗರದ ರಸ್ತೆಗಳನ್ನು ಮೂರು ತಿಂಗಳಿಂದ ಅಗೆದು ಅದಕ್ಕೆ ದೊಡ್ಡ ದೊಡ್ಡ ಪೈಪ್ ಗಳನ್ನು ಹಾಕಿ ಮುಚ್ಚಲಾಗಿದೆ. ಈ ಕಾಮಗಾರಿ ಪೂರ್ಣವಾಗಿದ್ರೂ ರಸ್ತೆಯನ್ನು ಮಾತ್ರ ಗುತ್ತಿಗೆದಾರರು ಸರಿಪಡಿಸಿಲ್ಲ.
ಹೀಗಾಗಿ ಹೊಸಕೋಟೆ ನಗರದ ಸಂತೇ ಗೇಟ್ ಬಳಿ ರಸ್ತೆ ಸಂಪೂರ್ಣವಾಗಿ ಮಣ್ಣು ಮತ್ತು ಹಳ್ಳ ಕೊಳ್ಳಗಳಿಂದ ತುಂಬಿ ಥೇಟ್ ಕೆರೆಯಂತಾಗಿದೆ. ಜತೆಗೆ ರಸ್ತೆ ಪಕ್ಕದಲ್ಲೇ ಹಲವು ಮನೆಗಳು ಮತ್ತು ಸರ್ಕಾರಿ ಆಸ್ಪತ್ರೆಯಿದ್ದು, ಆಸ್ವತ್ರೆಗೆ ಬರೋದಿಕ್ಕೆ ರೋಗಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಆಸ್ಪತ್ರೆಗೆ ರೋಗ ವಾಸಿ ಮಾಡಿಕೊಳ್ಳೋಣ ಅಂತ ಬಂದರೆ ಮತ್ತೊಂದು ರೋಗ ಈ ಕೆರೆಯಂತಾಗಿರುವ ರಸ್ತೆಯಿಂದ ಉಚಿತವಾಗಿ ಸಿಗುತ್ತಿದೆ. ಈ ರಸ್ತೆಯ ಅವಾಂತರದ ವಿರುದ್ದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುವುದರ ಜೊತೆಯಲ್ಲಿ ಗುತ್ತಿಗೆದಾರರಿಗೆ ಇಡೀ ಶಾಪ ಹಾಕುತ್ತಿದ್ದಾರೆ..
ಮಾಲೂರು, ಚಿಂತಾಮಣಿ, ಕೋಲಾರ ಸೇರಿದಂತೆ ನೆರೆಯ ಆಂಧ್ರ ಪ್ರದೇಶದ ಕಡೆಯಿಂದ ಹೊಸಕೋಟೆ ಮುಖಾಂತರ ಬೆಂಗಳೂರಿಗೆ ಬರುವ ವಾಹನ ಸವಾರರಿಗೆ ಇದೇ ರಸ್ತೆಯೇ ಪ್ರಮುಖ ರಸ್ತೆಯಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲೇ ಸಂಚರಿಸುತ್ತಿವೆ.
ಸಂಪೂರ್ಣ ರಸ್ತೆ ಧೂಳು ಮತ್ತು ಕೆಸರಿನಿಂದ ತುಂಬಿ ಹೋಗಿದ್ದು, ಈ ಸುಸ್ಥಿತಿಯಿಂದ ರಸ್ತೆ ಬದಿಯಲ್ಲಿನ ವ್ಯಾಪರಸ್ಥರು ಮತ್ತು ನಿವಾಸಿಗಳಿಗೂ ರೋಗಗಳು ಬರುವ ಸಾಧ್ಯತೆ ಇದೆ. ಇದರಿಂದ ಅಲ್ಲಿನ ಸ್ಥಳೀಯ ನಿವಾಸಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ನಗರದ ಒಳ ಭಾಗದ ಕೆಲ ರಸ್ತೆಗಳು ಅಲ್ಪ ಸ್ವಲ್ಪ ಮಣ್ಣಿನಿಂದ ಮುಚ್ಚಿ ಡಾಂಬಾರು ಹಾಕಿದ್ದು, ಇತ್ತೀಚೆಗೆ ಸುರಿಯುತ್ತಿರುವ ನಿರಂತರ ಮಳೆಯಿಂದ ರಸ್ತೆ ಎಲ್ಲೆಂದರಲ್ಲಿ ಕುಸಿದು, ವಾಹನ ಸವಾರರು ಕೆಳಗೆ ಬಿದ್ದಿರುವ ಉದಾಹರಣೆಗಳು ಇವೆ. ಇದರಿಂದ ಆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಆತಂಕಕೊಳಗಾಗಿದ್ದಾರೆ.
ಇನ್ನು ಕಳೆದ ಮೂರು ತಿಂಗಳ ಹಿಂದೆಯೇ ಕೆಸಿ ವ್ಯಾಲಿ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಮುಗಿದಿದ್ದು, ಮೊನ್ನೆಯಷ್ಟೇ ಕೋಲಾರಕ್ಕೆ ಇದೇ ರಸ್ತೆಯ ಪೈಪ್ ಲೈನ್ ನಲ್ಲಿ ನೀರು ಸಹ ಹರಿದು ಹೋಗಿದೆ. ಆದ್ರು ಗುತ್ತಿಗೆದಾರರು ಮಾತ್ರ ರಸ್ತೆ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ.
ಇದರಿಂದ ಗುತ್ತಿಗೆದಾರರು ಮತ್ತು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಬಯಲು ಸೀಮೆ ಜಿಲ್ಲೆಯ ಕೆರೆಗಳಿಗೆ ನೀರು ಹರಿಯಲಿ, ಎಲ್ಲರಿಗೂ ನೀರು ಸಿಗಲಿ ಅನ್ನೋ ಕಾರಣಕ್ಕೆ ಪೈಪ್ ಲೈನ್ ಅಳವಡಿಕೆ ಕಾಮಗಾರಿಗೆ ಜಾಗ ನೀಡಿ ಸ್ಪಂದಿಸಿದ ಹೊಸಕೋಟೆ ನಗರದ ಜನತೆಗೆ ಇದೀಗ ಅದೇ ಕಾಮಗಾರಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ರಸ್ತೆ ಸರಿಪಡಿಸುವ ಮುಖಾಂತರ ರೋಗಿಗಳು ಮತ್ತು ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ತಪ್ಪಿಸಲಿ ಅನ್ನೋದೆ ನಮ್ಮೆಲ್ಲರ ಆಶಯ.