ಸಿದ್ದರಾಮಯ್ಯಗೆ ಕೈ ಕೊಟ್ಟು ಮುಂಬೈಗೆ ವಿಮಾನ ಹತ್ತಿದ ಎಂಟಿಬಿ ನಾಗರಾಜು
ಬೆಂಗಳೂರು, ಜುಲೈ 14: ನಿನ್ನೆ ಸಿದ್ದರಾಮಯ್ಯ, ಕುಮಾರಸ್ವಾಮಿ ಸಂಧಾನದ ಬಳಿಕ ರಾಜೀನಾಮೆ ವಾಪಸ್ ಪಡೆಯುತ್ತೇನೆ ಎಂದಿದ್ದ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು ಅವರು ಇಂದು ಮನಸ್ಸು ಬದಲಿಸಿದ್ದಾರೆ.
ನಿನ್ನೆ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿಕೆ ಶಿವಕುಮಾರ್, ಜಮೀರ್ ಅಹ್ಮದ್, ಕೃಷ್ಣಬೈರೇಗೌಡ ಇನ್ನೂ ಹಲವು ನಾಯಕರು ಸಂಧಾನ ಮಾಡಿದ ಬಳಿಕ ತಾವು ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯುವುದಾಗಿ ಹೇಳಿದ್ದ ಶಾಸಕ ಎಂಟಿಬಿ ನಾಗರಾಜು ಅವರು ಇಂದು ಏಕಾಏಕಿ ಮುಂಬೈಗೆ ತೆರಳಿದ್ದಾರೆ.
ಅಡ್ಡಗೋಡೆ ಮೇಲೆ ದೀಪವಿಟ್ಟ ಸಿದ್ದರಾಮಯ್ಯ ಆಪ್ತ ಎಂ.ಟಿ.ಬಿ.ನಾಗರಾಜ್
ಇಂದು ಬೆಳಿಗ್ಗೆ 10:30 ಎಚ್ಎಎಲ್ ವಿಮಾನ ನಿಲ್ದಾಣದಿಂದ ಎಂಟಿಬಿ ನಾಗರಾಜು ಅವರು ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ. ಎಂಟಿಬಿ ನಾಗರಾಜು ಅವರನ್ನು ಬಿಜೆಪಿ ಮುಖಂಡ ಆರ್.ಅಶೋಕ್ ಅವರೇ ವಿಮಾನ ಹತ್ತಿಸಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಾಕ್ಷ್ಯ ಒದಗಿಸುವ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ.
ರಾಜೀನಾಮೆ ವಾಪಸ್ ಪಡೆಯುತ್ತೇನೆ ಎಂದಿದ್ದ ಎಂಟಿಬಿ
ನಿನ್ನೆ ಕಾಂಗ್ರೆಸ್ ನಾಯಕರ ಸಂಧಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಎಂಟಿಬಿ ನಾಗರಾಜು ನಾನು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆಯುತ್ತೇನೆ ಎಂದು ಮೊದಲಿಗೆ ಹೇಳಿದ್ದರು, ಆ ನಂತರ ಮತ್ತೆ ಮಾತನಾಡಿ ಸುಧಾಕರ್ ಅವರು ರಾಜೀನಾಮೆ ವಾಪಸ್ ಪಡೆದರೆ ನಾನೂ ವಾಪಸ್ ಪಡೆಯುತ್ತೇನೆ ಎಂದಿದ್ದರು.
ಕಾಂಗ್ರೆಸ್ಗೆ ಆಘಾತ ನೀಡಿದ ಎಂಟಿಬಿ ನಾಗರಾಜು
ಒಬ್ಬ ಶಾಸಕರು ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಮಾಡಿದೆವು ಎಂಬ ಸಂತೋಶದಲ್ಲಿದ್ದ ಕಾಂಗ್ರೆಸ್ಗೆ ಎಂಟಿಬಿ ನಾಗರಾಜು ಆಘಾತ ಉಂಟಾಗುವಂತೆ ಮಾಡಿದ್ದು, ಈಗ ಮುಂಬೈಗೆ ತೆರಳುವ ಮೂಲಕ ತಾವು ಸಂಧಾನಕ್ಕೆ ಒಪ್ಪಿಲ್ಲವೆಂಬುದನ್ನು ಸೂಚ್ಯಗೊಳಿಸಿದ್ದಾರೆ.
ಸಿದ್ದರಾಮಯ್ಯ ಕಿಂಗ್: ಎಂಟಿಬಿ ನಾಗರಾಜ್, ಸುಧಾಕರ್ ರಾಜೀನಾಮೆ ವಾಪಸ್
ಎಂಟಿಬಿ ನಾಗರಾಜು ಅವರ ಬೀಳ್ಕೊಟ್ಟ ಆರ್.ಅಶೋಕ್
ಮುಂಬೈಗೆ ತೆರಳಿರುವ ಎಂಟಿಬಿ ನಾಗರಾಜು ಅವರು ಅಲ್ಲಿ ಅತೃಪ್ತರು ತಂಗಿರುವ ಪಂಚತಾರಾ ಹೊಟೆಲ್ಗೆ ಹೋಗಲಿದ್ದಾರೆ. ಆರ್.ಅಶೋಕ್ ಅವರು ಎಂಬಿಟಿ ನಾಗರಾಜು ಅವರನ್ನು ವಿಮಾನ ಹತ್ತಿಸಿ ಅವರು ಅವರೂ ಸಹ ನಾಗರಾಜು ಅವರ ಜೊತೆಯಲ್ಲಿಯೇ ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ಗಾಗಿ ಹುಡುಕಾಟ
ಈ ನಡುವೆ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರನ್ನು ಸಂಪರ್ಕ ಮಾಡಲು ಕಾಂಗ್ರೆಸ್ ನಾಯಕರು ಪ್ರಯತ್ನ ಪಡುತ್ತಿದ್ದು, ಸುಧಾಕರ್ ಅವರು ಈಗಾಗಲೇ ದೆಹಲಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ ಸುಧಾಕರ್ ಅವರು ಸಹ ಮುಂಬೈನ ಖಾಸಗಿ ಹೊಟೆಲ್ಗೆ ಆಗಮಿಸುತ್ತಿದ್ದು ಅಲ್ಲಿ ಎಂಟಿಬಿ ನಾಗರಾಜು ಅವರನ್ನು ಸುಧಾಕರ್ ಸೇರಿಕೊಳ್ಳಲಿದ್ದಾರೆ.