ಪಕ್ಷೇತರ ಶಾಸಕ ಶರತ್ ಬಚ್ಚೇಗೌಡಗೆ ಯಡಿಯೂರಪ್ಪ ಉಡುಗೊರೆ
Recommended Video
ಬೆಂಗಳೂರು, ಜನವರಿ 14: 'ನಾನು ಬದುಕಿರುವವರೆಗೂ ಶರತ್ ಬಚ್ಚೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ' ಎಂದಿದ್ದ ಯಡಿಯೂರಪ್ಪ ಅವರಿಗೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮೇಲೆ ಮುನಿಸು ಕಡಿಮೆ ಆದ ಹಾಗೆ ಇದೆ.
ಯಡಿಯೂರಪ್ಪ ಹೊಸ ಆಪ್ತ ಬಿಜೆಪಿ ಅಭ್ಯರ್ಥಿಯಾಗಿದ್ದ ಎಂಟಿಬಿ ನಾಗರಾಜ್ ವಿರುದ್ಧ ಯಡಿಯೂರಪ್ಪ ಆಜ್ಞೆ ಮೀರಿ ಸ್ಪರ್ಧಿಸಿ ವಿಜಯ ಕಂಡಿರುವ ಶರತ್ ಬಚ್ಚೇಗೌಡ ಯಡಿಯೂರಪ್ಪ ಅವರಿಗೆ ಬಹುತೇಕ ದೂರವಾಗಿದ್ದರು. ಶರತ್ ಬಚ್ಚೇಗೌಡ ಗೆದ್ದಾಗ ಸರ್ಕಾರ ವಿರೋಧ ಕಟ್ಟಿಕೊಂಡ ಶರತ್ ಗೆ ಕ್ಷೇತ್ರದ ಅಭಿವೃದ್ಧಿ ಕಷ್ಟ ಎಂಬ ಮಾತು ಹರಿದಾಡಿತ್ತು.
ಶರತ್ ಬಚ್ಚೇಗೌಡ ಪ್ರತಿನಿಧಿಸುವ ಹೊಸಕೋಟೆ ಪಟ್ಟಣಕ್ಕೆ ರಾಜ್ಯ ಸರ್ಕಾರವು ಸಂಚಾರಿ ಪೊಲೀಸ್ ಠಾಣೆಯನ್ನು ಮಂಜೂರು ಮಾಡಿದೆ. ಇದಕ್ಕೆ ಶರತ್ ಬಚ್ಚೇಗೌಡ ಗೃಹ ಸಚಿವರಿಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ.
ಗೃಹ ಇಲಾಖೆಯಿಂದ ಮಂಜೂರು, ಧನ್ಯವಾದ ಹೇಳಿದ ಶರತ್
ಮಂಜೂರಾಗಿರುವುದು ಗೃಹ ಇಲಾಖೆಯಿಂದಲೇ ಆದರೂ ಸಿಎಂ ಅವರ ಗಮನಕ್ಕೆ ಬಾರದೆ ಹೊಸಕೋಟೆಗೆ ಏನೂ ಮಂಜೂರಾಗುವುದಿಲ್ಲ ಎನ್ನಲಾಗುತ್ತಿದ್ದು, ಹೊಸಕೋಟೆ ಪಟ್ಟಣಕ್ಕೆ ಸಂಚಾರಿ ಪೊಲೀಸ್ ಠಾಣೆ ಮಂಜೂರಾಗಿರುವುದು ಯಡಿಯೂರಪ್ಪ ಅವರು ಶರತ್ ಬಚ್ಚೇಗೌಡ ಮೇಲೆ ಮೃದು ಧೋರಣೆ ತಳೆದಿದ್ದಾರೆ ಎಂಬುದಕ್ಕೆ ಸಾಕ್ಷಿ ಎನ್ನುತ್ತಿದ್ದಾರೆ ಕ್ಷೇತ್ರದ ಬಿಜೆಪಿ ಮಂದಿ.
ವರ್ಷಕ್ಕೆ ಸರಾಸರಿ 374 ಅಪಘಾತಗಳು ಆಗುತ್ತಿವೆ
ಹೊಸಕೋಟೆ ಉಪವಿಭಾಗ ವ್ಯಾಪ್ತಿಯ ಆವಲಹಳ್ಳಿ, ನಂದಗುಡಿ, ಹೊಸಕೋಟೆ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುವ ಕಾರಣ ಸಂಚಾರಿ ಪೊಲೀಸ್ ಠಾಣೆ ಮಂಜೂರು ಮಾಡಲಾಗಿದೆ. ವರ್ಷಕ್ಕೆ ಸರಾಸರಿ 374 ಅಪಘಾತಗಳು ಹೊಸಕೋಟೆ ವ್ಯಾಪ್ತಿಯಲ್ಲಿ ನಡೆಯುತ್ತಿವೆ ಇವುಗಳ ನಿಯಂತ್ರಣಕ್ಕಾಗಿ ಈ ಸಂಚಾರ ಪೊಲೀಸ್ ಠಾಣೆ ನೀಡಲಾಗಿದೆ.
ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ವಿವರ
ಮಂಜೂರಾಗಿರುವ ಸಂಚಾರಿ ಪೊಲೀಸ್ ಠಾಣೆಗೆ 4 ಪಿಎಸ್ಐ, 6 ಎಎಸ್ಐ, 18 ಹೆಡ್ ಕಾನ್ಸ್ಟೇಬಲ್, 36 ಕಾನ್ಸ್ಟೇಬಲ್ ಸೇರಿ ಒಟ್ಟು 64 ಸಿಬ್ಬಂದಿಗಳನ್ನು ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 75 ಮತ್ತು ಹೊಸಕೋಟೆ ಪಟ್ಟಣದಲ್ಲಿ ಸಂಚಾರ ನಿಯಂತ್ರಿಸಲು ಈ ಸಂಚಾರಿ ಪೊಲೀಸ್ ಠಾಣೆ ನೀಡಲಾಗಿದೆ.
ಯಾವ ಕಾರ್ಯಗಳನ್ನು ಪೊಲೀಸರು ಮಾಡಲಿದ್ದಾರೆ?
ಅಪಘಾತ ನಿಯಂತ್ರಣ, ಸಂಚಾರ ನಿಯಂತ್ರಣದ ಜೊತೆಗೆ ಎಸ್ಕಾರ್ಟ್, ವಿಐಪಿ ಎಸ್ಕಾರ್ಟ್, ಪೈಲೆಟ್ ಸೇವೆಗಳನ್ನೂ ಸಂಚಾರಿ ಪೊಲೀಸರು ಮಾಡಲಿದ್ದಾರೆ.