ಹೊಸಕೋಟೆ; ಸ್ವಾಭಿಮಾನ ಪಣಕ್ಕಿಟ್ಟು ಗೆದ್ದ ಶರತ್ ಬಚ್ಚೇಗೌಡ
ಬೆಂಗಳೂರು, ಡಿಸೆಂಬರ್ 9 : 15 ವಿಧಾನಸಭಾ ಕ್ಷೇತ್ರಗಳ ಪೈಕಿ ಕುತೂಹಲ ಕೆರಳಿಸಿದ್ದ ಕ್ಷೇತ್ರ ಹೊಸಕೋಟೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಶರತ್ ಬಚ್ಚೇಗೌಡ 81671 ಮತಗಳನ್ನು ಪಡೆದು ಬಿಜೆಪಿಯ ಎಂಟಿಬಿ ನಾಗರಾಜ್ ಸೋಲಿಸಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಮುಖಭಂಗ ಅನುಭವಿಸುವಂತೆ ಮಾಡಿದರು.
ಡಿಸೆಂಬರ್ 5ರಂದು ನಡೆದ ಉಪ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ 90.90ರಷ್ಟು ದಾಖಲೆಯ ಮತದಾನವಾಗಿತ್ತು. ಸೋಮವಾರ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶರತ್ ಬಚ್ಚೇಗೌಡ ಜಯಭೇರಿ ಬಾರಿಸಿದ್ದಾರೆ.
ಬಿಜೆಪಿಗೆ ಸೆಡ್ಡು ಹೊಡೆದು ಹಣ ಬಲವನ್ನು ಮಣಿಸಿದ ಶರತ್ ಬಚ್ಚೇಗೌಡ ಯಾರು?
ಬಿಜೆಪಿ ಮತ್ತು ಶರತ್ ಬಚ್ಚೇಗೌಡ ನಡುವಿನ ಅಸಮಾಧಾನದ ಲಾಭದ ಅಲೆಯಲ್ಲಿ ಗೆದ್ದು ಬರುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮಾವತಿ ಸುರೇಶ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಎಂಟಿಬಿ ನಾಗರಾಜ್ ಸೋಲಿಸಬೇಕು ಎಂಬ ಸಿದ್ದರಾಮಯ್ಯ ಪಣ ಫಲಕೊಟ್ಟಿದೆ. ಆದರೆ, ಕಾಂಗ್ರೆಸ್ ಅಭ್ಯರ್ಥಿಯಿಂದ ಸೋಲಿಸಲು ಸಾಧ್ಯವಾಗಿಲ್ಲ. ಪದ್ಮಾವತಿ ಸುರೇಶ್ 41,443 ಮತಗಳನ್ನು ಮಾತ್ರ ಪಡೆದರು.
2018ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಎಂಟಿಬಿ ನಾಗರಾಜ್ ಗೆಲುವು ಸಾಧಿಸಿದ್ದರು. ಬಿಜೆಪಿಯಿಂದ ಕಣಕ್ಕಿಳಿದ್ದ ಶರತ್ ಬಚ್ಚೇಗೌಡ ಸೋತಿದ್ದರು. ಈ ಉಪ ಚುನಾವಣೆಯಲ್ಲಿ ಪುನಃ ಇಬ್ಬರು ಮುಖಾಮುಖಿಯಾಗಿದ್ದರು. ಆದರೆ, ಎಂಟಿಬಿ ನಾಗರಾಜ್ ಬಿಜೆಪಿಯಿಂದ ಕಣಕ್ಕಿಳಿದು ಸೋತಿದ್ದಾರೆ.
ಸ್ವಾಭಿಮಾನವನ್ನು ಪಣಕ್ಕಿಟ್ಟು, ಕುಟುಂಬದವರನ್ನು ಎದರು ಹಾಕಿಕೊಂಡಿದ್ದ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪಕ್ಷೇತರ ಶಾಸಕರಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಶರತ್ ಬಚ್ಚೇಗೌಡ ತಂದೆ ಬಿ. ಎನ್. ಬಚ್ಚೇಗೌಡ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದರು.
ದುರಂತ ಸೋಲು; ಶತಕೋಟಿ ಒಡೆಯ ಎಂಟಿಬಿ ಹೇಳಿದ್ದೇನು?
ಹೊಸಕೋಟೆ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಮತ
* ಶರತ್ ಬಚ್ಚೇಗೌಡ (ಪಕ್ಷೇತರ) : 81,671
* ಎಂಟಿಬಿ ನಾಗರಾಜ್ (ಬಿಜೆಪಿ) : 70185
* ಪದ್ಮಾವತಿ ಸುರೇಶ್ (ಕಾಂಗ್ರೆಸ್) : 41,443