ಉಪಚುನಾವಣೆ ಸೋಲು; ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರಿದ ಎಂಟಿಬಿ
ಬೆಂಗಳೂರು, ಡಿಸೆಂಬರ್ 10: ಉಪ ಚುನಾವಣೆಯಲ್ಲಿ ಹೊಸಕೋಟೆಯಿಂದ ಸ್ಪರ್ಧಿಸಿದ್ದ ಎಂ.ಟಿ.ಬಿ.ನಾಗರಾಜ್ , ಸಿದ್ದರಾಮಯ್ಯ ವಿರುದ್ದ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಅವರು ನಾಗರಾಜ್ ಅವರಿಗೆ ಸೋಲಿನ ರುಚಿ ತೋರಿಸಿದ್ದರು.
ಸೋಲಿನ ಬಳಿಕ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ವಿರುದ್ದ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿದೆ ಮಾತನಾಡಿದ ಅವರು, 'ಚುನಾವಣೆಯಲ್ಲಿ ನಾನು ಸೋತಿದ್ದೇನೆ. ನಿಜ. ಇದರಿಂದ ನನ್ನ ಒಂದು ಕಣ್ಣು ಹೋಗಿರಬಹುದು. ಆದರೆ, ಕುತಂತ್ರಿ ಸಿದ್ದರಾಮಯ್ಯ ಅವರ ಎರಡೂ ಕಣ್ಣು ಹೋಗಿವೆ. ಚುನಾವಣೆಯಲ್ಲಿ ಏನೆಲ್ಲಾ ಮಾತನಾಡಿದ್ದರು. ಕೇವಲ ಎರಡು ಸ್ಥಾನಗಳನ್ನು ಪಡೆದು, ಈಗ ರಾಜ್ಯದ ಜನರ ಮುಂದೆ ತಾವೊಬ್ಬ ಕೈಲಾಗಲಾರದವನು ಎಂಬುದನ್ನು ಸಾಬೀತು ಪಡಿಸಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ. ಅವರ ಬಗ್ಗೆ ಹೆಚ್ಚೇನೂ ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಎಂಟಿಬಿ ನಾಗರಾಜ್ ಹೇಳಿದ್ದೇನು?
ಉಪ ಚುನಾವಣೆಯಲ್ಲಿ ಹೊಸಕೋಟೆ ರಾಜ್ಯದ ಗಮನ ಸೆಳೆದಿತ್ತು. ಶತಕೋಟಿ ಒಡೆಯರಾದ ಎಂಟಿಬಿ ಹಾಗೂ ತಮ್ಮ ಹಿಂದಿನ ಎದುರಾಳಿ ಶರತ್ ನನ್ನು ಪಕ್ಷೇತರವಾಗಿ ಎದುರಿಸಲು ಆಗದೇ ಬಿದ್ದು ಹೋಗಿದ್ದಾರೆ. ಅವರು 11 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಶರತ್ ಬಚ್ಚೇಗೌಡ ಅವರು ಸ್ವಾಭಿಮಾನಿ ಅಸ್ತ್ರ ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಎಂಟಿಬಿ ನಾಗರಾಜ ಅವರ ಮುಂದಿನ ನಡೆ ಇನ್ನೂ ನಿರ್ಧಾರವಾಗಿಲ್ಲ. ಮತದಾರರ ತೀರ್ಪು ಒಪ್ಪಿಕೊಂಡಿದ್ದು, ಬಿಜೆಪಿಯಲ್ಲಿ ನನ್ನ ಮುಂದಿನ ಭವಿಷ್ಯವನ್ನು ಕಾಯ್ದು ನೋಡುವುದಾಗಿ ಹೇಳಿದ್ದಾರೆ.