ಹಣದ ಬದಲಿಗೆ ಸ್ವಾಭಿಮಾನಕ್ಕೆ ಮತ ನೀಡಿದ ಹೊಸಕೋಟೆ ಮತದಾರರು
ಹೊಸಕೋಟೆ, ಡಿಸೆಂಬರ್ 09: ಹೊಸಕೋಟೆಯ ಮತದಾರರು ಹಣದ ಬದಲಿಗೆ ಸ್ವಾಭಿಮಾನಕ್ಕೆ ಬೆಲೆ ನೀಡಿದ್ದಾರೆ. ಸ್ವಾಭಿಮಾನದ ಹೆಸರಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದ ಶರತ್ ಬಚ್ಚೇಗೌಡ ಅವರಿಗೆ ಹೊಸಕೋಟೆಯ ಮತದಾರರು ಆಶೀರ್ವದಿಸಿದ್ದಾರೆ.
ಕಳೆದ ಬಾರಿ ಬಿಜೆಪಿ ಯಿಂದ ಸ್ಪರ್ಧಿಸಿ ಸಾವಿರ ಕೋಟಿ ಒಡೆಯ ಎಂಟಿಬಿ ನಾಗರಾಜ್ ವಿರುದ್ಧ ಅಲ್ಪ ಮತದಲ್ಲಿ ಸೋತಿದ್ದ ಶರತ್ ಬಚ್ಚೇಗೌಡ. ಉಪಚುನಾವಣೆಯಲ್ಲಿ ಪಕ್ಷದ ಚಿಹ್ನೆಯ ಬಲವಿಲ್ಲದೆ ಸ್ವ ಪ್ರಭಾವವನ್ನೇ ಬಳಸಿ ಗೆಲುವು ಸಾಧಿಸಿದ್ದಾರೆ.
LIVE:ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ
ಎಂಟಿಬಿ ನಾಗರಾಜು ಈ ಉಪಚುನಾವಣೆಯಲ್ಲಿ ಗೆದ್ದೇ ತೀರಬೇಕೆಂದು ಶತಾಯಗತಾಯ ಪ್ರಯತ್ನ ಪಟ್ಟಿದ್ದರು. ಸಾವಿರ ಕೋಟಿಗಳ ಒಡೆಯ ನಾಗರಾಜ್, ತನ್ನ ಆಸ್ತಿಯ ಕೆಲವು ಭಾಗವನ್ನು ಕಳೆದಾದರೂ ಚುನಾವಣೆಯಲ್ಲಿ ಗೆಲುವು ಪಡೆಯಬೇಕೆಂದು ನಿಶ್ಚಿಯಿಸಿ ಹಣ ಚೆಲ್ಲಿದ್ದರು.
ಚಿನ್ನದುಂಗುರಗಳು, ನಗದು, ಪಂಚಾಯಿತಿ ಸದಸ್ಯರು, ಪುರಸಭೆ ಸದಸ್ಯರು ಜಾತಿ ಮುಖಂಡರುಗಳಿಗೆ ಕಾರುಗಳು, ಬುಲೆಟ್ ಬೈಕ್ಗಳನ್ನು ಉಡುಗೊರೆಯಾಗಿ ನೀಡಿ ಖರೀದಿಸಲಾಗಿತ್ತು. ಎದುರಾಳಿ ಎಷ್ಟೆಲ್ಲಾ ಹಣ ಚೆಲ್ಲಿದರೂ ಸಹ ಶರತ್ ಸ್ವಾಭಿಮಾನಿ ಹೋರಾಟಕ್ಕೆ ಅಂತಿಮ ಜಯ ದೊರೆತಿದೆ.
ಅಕಾರಣ ರಾಜೀನಾಮೆ ನೀಡಿದ್ದಕ್ಕೆ ತಕ್ಕ ಶಾಸ್ತಿ
ಮೈತ್ರಿ ಸರ್ಕಾರದಲ್ಲಿ ಮಂತ್ರಿ ಆಗಿದ್ದ ಎಂಟಿಬಿ ನಾಗರಾಜು, ಸಕಾರಣವೇ ಇಲ್ಲದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹುಚ್ಚು ನಿರ್ಧಾರಕ್ಕೆ ಹೊಸಕೋಟೆಯ ಜನ ಸರಿಯಾಗಿ ಶಿಕ್ಷೆ ನೀಡಿದ್ದಾರೆ. ಶರತ್ ಬಚ್ಚೇಗೌಡ 'ಸ್ವಾಭಿಮಾನಿ ಹೋರಾಟ'ಕ್ಕೆ ಹೊಸಕೋಟೆಯ ಜನ ಬೆಂಬಲಿಸಿದ್ದಾರೆ.
ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ
ಕಳೆದ ಬಾರಿ ಬಿಜೆಪಿ ಇಂದ ಶರತ್ ಬಚ್ಚೇಗೌಡ ಅವರು ಎಂಟಿಬಿ ನಾಗರಾಜ್ ಅವರನ್ನು ಎದುರಿಸಿ ಅಲ್ಪ ಮತದಿಂದ ಸೋತಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಎಂಟಿಬಿ ನಾಗರಾಜ್ ಗೆ ಬಿಜೆಪಿ ಟಿಕೆಟ್ ನೀಡಿದ ಕಾರಣ ಪ್ರತಿಭಟಿಸಿದ ಶರತ್ ಬಚ್ಚೇಗೌಡ, ಪಕ್ಷೇತರವಾಗಿ ಸ್ಪರ್ಧೆಗೆ ಇಳಿದಿದ್ದರು. ಅವರಿಗೆ ಜೆಡಿಎಸ್ ಬೆಂಬಲ ನೀಡಿತ್ತು.
11 ಸಾವಿರಕ್ಕೂ ಹೆಚ್ಚು ಮತಗಳ ಜಯ
ಎಂಟಿಬಿ ನಾಗರಾಜ್ ವಿರುದ್ಧ 11 ಸಾವಿರಕ್ಕೂ ಹೆಚ್ಚು ಮತಗಳಿಂದ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಸೋಲಿಗೆ ಒಂದೂವರೆ ವರ್ಷದಲ್ಲಿಯೇ ಪ್ರತೀಕಾರ ತೀರಿಸಿಕೊಂಡಿದ್ದಾರೆ.
ಹೊಸಕೋಟೆ ಮೇಲೆ ಮತ್ತೆ ಬೆಂಡಿಗಾನಹಳ್ಳಿ ಹಿಡಿತ
ಶರತ್ ಬಚ್ಚೇಗೌಡ ಗೆಲ್ಲುವ ಮೂಲಕ ಹೊಸಕೋಟೆ ಕ್ಷೇತ್ರದ ಮೇಲೆ ಬೆಂಡಿಗಾನಹಳ್ಳಿ ಕುಟುಂಬ ಮತ್ತೆ ಹಿಡಿತ ಸಾಧಿಸಿದಂತಾಗಿದೆ. ದಶಕಗಳ ಕಾಲ ಹೊಸಕೋಟೆ ಆಡಳಿತ ಚುಕ್ಕಾಣಿ ಹಿಡಿದಿದ್ದ ಬೆಂಡಿಗಾನಹಳ್ಳಿ ಬಚ್ಚೇಗೌಡರ ಕುಟುಂಬಕ್ಕೆ ಕಳೆದ ಎರಡು ಚುನಾವಣೆಯಲ್ಲಿ ಸತತ ಸೋಲಾಗಿತ್ತು. ಆದರೆ ಈ ಬಾರಿ ಮತ್ತೆ ಅದೃಷ್ಟ ಖುಲಾಯಿಸಿದ್ದು, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿ.ಎನ್.ಬಚ್ಚೇಗೌಡ ಬಿಜೆಪಿ ಯಿಂದ ಸಂಸದರಾಗಿ ಆಯ್ಕೆ ಆಗಿದ್ದರೆ. ಇದೀಗ ಪುತ್ರ ಶರತ್ ಬಚ್ಚೇಗೌಡ ಶಾಸಕರಾಗಿ ಆಯ್ಕೆ ಆಗಿದ್ದಾರೆ.