ಕಬ್ಬನ್ ಪಾರ್ಕಿನಲ್ಲಿ ಹೆಚ್ಚಿದ ಮಾಲಿನ್ಯ, ನಾಲ್ಕು ಮಾರ್ಗ ಬಂದ್?
ಒಟ್ಟು 7 ಕಡೆಗಳಲ್ಲಿ ಕಬ್ಬನ್ ಉದ್ಯಾನಕ್ಕೆ ಪ್ರವೇಶವಿದ್ದು ಇವುಗಳಲ್ಲಿ ನಾಲ್ಕನ್ನು ಮುಚ್ಚುವಂತೆ ಕೋರಿ ತೋಟಗಾರಿಕಾ ಇಲಾಖೆ ಪ್ರಸ್ತಾವನೆಯನ್ನು ಮುಂದಿಟ್ಟಿದೆ.
ಬೆಂಗಳೂರು, ಮೇ 24: ಬೆಂಗಳೂರಿನ ಪ್ರಮುಖ ಉದ್ಯಾನ ಕಬ್ಬನ್ಪಾರ್ಕ್ನಲ್ಲಿ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಇಲ್ಲಿ ಸಂಚರಿಸುತ್ತಿರುವ ವಾಹನಗಳು. ಇದಕ್ಕೀಗ ಕೊನೆ ಹಾಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ಒಟ್ಟು 7 ಕಡೆಗಳಲ್ಲಿ ಕಬ್ಬನ್ ಉದ್ಯಾನಕ್ಕೆ ಪ್ರವೇಶವಿದ್ದು ಇವುಗಳಲ್ಲಿ ನಾಲ್ಕನ್ನು ಮುಚ್ಚುವಂತೆ ಕೋರಿ ತೋಟಗಾರಿಕಾ ಇಲಾಖೆ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಒಂದೊಮ್ಮೆ ಇಲಾಖೆಯ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದರೆ ಹಡ್ಸನ್ ವೃತ್ತ, ಕೆ.ಆರ್ ವೃತ್ತ ಹಾಗೂ ಬಾಲಭವನ ಕಡೆಯಿಂದ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
'ಉದ್ಯಾನದೊಳಗೆ ವಾಹನಗಳ ಸಂಖ್ಯೆ ವಿಪರೀತ ಹೆಚ್ಚಾಗುತ್ತಿದೆ. ಇದರಿಂದಾಗಿ ಉದ್ಯಾನದ ಪರಿಸರಕ್ಕೇ ಧಕ್ಕೆ ಉಂಟಾಗುತ್ತಿದೆ. ವಾಹನ ಸಂಚಾರ ಕೊನೆಗೊಂಡರೆ ಆ ಭಾಗದಲ್ಲಿ ಉದ್ಯಾನವನ್ನು ಮತ್ತಷ್ಟು ಸುಂದರವಾಗಿ ರೂಪಿಸಬಹುದು,' ಎಂಬ ಯೋಜನೆ ಮುಂದಿಟ್ಟುಕೊಂಡು ಈ ಪ್ರಸ್ತಾವನೆಯನ್ನು ಸಲ್ಲಿಸಿದೆ ತೋಟಗಾರಿಕೆ ಇಲಾಖೆ.
'ನೃಪತುಂಗ ರಸ್ತೆಯ ಕಾಂಕ್ರೀಟ್ ಕಾಮಗಾರಿಯ ಕಾರಣಕ್ಕೆ ಪಾರ್ಕಿನಲ್ಲಿ ವಾಹನಗಳ ಓಡಾಟಕ್ಕೆ 3 ತಿಂಗಳು ಅವಕಾಶ ನೀಡಲಾಗಿತ್ತು ಆದರೆ ಇದರಿಂದ ವಾಯು ಮಾಲಿನ್ಯ ಶಬ್ದ ಮಾಲಿನ್ಯ ಹೆಚ್ಚಾಗಿದೆ. ಇಲ್ಲಿನ ಮಾಲಿನ್ಯ ತಡೆದುಕೊಳ್ಳಲಾದೆ ಕೆಲವೊಂದಿಷ್ಟು ಪಕ್ಷಗಳು ಜೀವ ಕಳೆದುಕೊಂಡಿವೆ,' ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ಇದಿನ್ನೂ ಪ್ರಸ್ತಾವನೆ ಹಂತದಲ್ಲಿದೆ. ಒಮ್ಮೆ ಇಲಾಖೆಯಿಂದ ಮನ್ನಣೆ ಸಿಕ್ಕಿದ ನಂತರ ಪೊಲೀಸ್ ಇಲಾಖೆಗೆ ಕಡತ ಹೋಗಲಿದೆ. ನಂತರವಷ್ಟೇ ಅಂತಿಮ ತೀರ್ಮಾನ ಹೊರ ಬೀಳಲಿದೆ.
ಆದರೆ ಸದ್ಯ ಎರಡು ರಸ್ತೆಗಳನ್ನು ಮುಚ್ಚಲು ತೋಟಗಾರಿಕೆ ಇಲಾಖೆ ಮುಂದಾಗಿಲ್ಲ. ಹೈಕೋರ್ಟಿನಿಂದ ಯು.ಬಿ. ಸಿಟಿ ಸಂಪರ್ಕಿಸುವ ಹಾಗೂ ಯು.ಬಿ. ಸಿಟಿಯಿಂದ ಎಂ.ಎಸ್. ಬಿಲ್ಡಿಂಗ್ ಕಡೆ ಪ್ರಯಾಣಿಸುವ ರಸ್ತೆಗಳನ್ನು ಪ್ರಸ್ತಾವನೆಯಿಂದ ಹೊರಗಿಡಲಾಗಿದೆ.