ಬೇಸಿಗೆಯ ತಾಪ ತಣಿಸಲು ಬೆಂಗಳೂರಿನಲ್ಲಿ ಕಲ್ಲಂಗಡಿ ,ದಾಕ್ಷಿ ಮೇಳ
ಬೆಂಗಳೂರು, ಫೆಬ್ರವರಿ 15: ಉದ್ಯಾನನಗರಿ ಬೆಂಗಳೂರಿನಲ್ಲಿ ಬೇಸಿಗೆಯ ತಾಪಮಾನ ಏರುತ್ತಿರುವ ಹೊತ್ತಿನಲ್ಲಿ ಇಲ್ಲಿನ ಹಾಪ್ ಕಾಮ್ಸ್ ಗಳು 2 ತಿಂಗಳ ಕಾಲ ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳವನ್ನು ಆರಂಬಿಸಿ, ಶೆ. 10ರಷ್ಟು ರಿಯಾಯಿತಿ ದರದಲ್ಲಿ ಹಣ್ಣುಗಳನ್ನು ಮಾರಾಟ ಮಾಡಲು ಮುಂದಾಗಿದೆ.
ಬೆಂಗಳೂರಿನ ತೋಟಗಾರಿಕಾ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ(ಹಾಪ್ ಕಾಮ್ಸ್) ಎಲ್ಲ ಮಳಿಗೆಗಳಲ್ಲಿ 4 ವಿವಿಧ ತಳಿಗಳ ಕಲ್ಲಂಗಡಿ ಮತ್ತು 15 ವಿವಿಧ ಮಾದರಿಯ ದ್ರಾಕ್ಷಿಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದೆ.[ಫೆಬ್ರವರಿ 6ರಿಂದ ನಿಮ್ಮ ಮನೆಬಾಗಿಲಿಗೆ ಹಾಪ್ಕಾಮ್ಸ್ ಹಣ್ಣು, ತರಕಾರಿ]
ಕಲ್ಲಂಗಡಿಯಲ್ಲಿ ನಾಮಧಾರಿ, ಕಿರಣ್, ನಾಮಧಾರಿ ಖರ್ಬೂಜ ಸೇರಿದಂತೆ 5 ವಿವಿಧ ಬಗೆಯ ಕಲ್ಲಂಗಡಿ ಹಣ್ಣುಗಳು ಹಾಗೂ ದ್ರಾಕ್ಷಿಯಲ್ಲಿ ದಿಲ್ ಕುಷ್, ಸೋನಾಕ, ಬೆಂಗಳೂರು ನೀಲಿ, ಕೃಷ್ಣ ಶರದ್, ಸೋನಾಕ ಸೂಪರ್, ಇಂಡಿಯನ್ ರೆಡ್ ಗ್ಲೋಬ್, ಇಂಡಿಯನ್ ಬ್ಲಾಕ್, ವಾಷಿಂಗ್ ಟನ್ ರೆಡ್ ಗ್ರೋಬ್ ಸೇರಿದಂತೆ 15 ಬಗೆಬಗೆಯ ದ್ರಾಕ್ಷಿ ಹಣ್ಣುಗಳು ಮಾರಾಟಕ್ಕೆ ಇಡಲಾಗಿದೆ.
ರೈತರಿಂದ ನೇರವಾಗಿ ಖರೀದಿ ಮಾಡಿ ಗ್ರಾಹಕರಿಗೆ ಹಣ್ಣುಗಳನ್ನು ವಿತರಣೆ ಮಾಡುತ್ತಿರುವುದು ಮೇಳದ ಉದ್ದೇಶವಾಗಿದ್ದು, ಬೇಸಿಗೆಯಲ್ಲಿ ದೇಹದ ತಾಪಮಾನವನ್ನು ಇಳಿಸಿಕೊಳ್ಳಲು ಪೆಪ್ಸಿ,ಕೋಲಾಗಳಿಗೆ ಮೊರೆ ಹೋಗುವ ಬದಲು ದೇಶಿ ಆರೋಗ್ಯಕರ ಹಣ್ಣುಗಳಿಗೆ ಮನಸೋತರೆ ವಿವಿಧ ಮಾದರಿ ಪೇಯವನ್ನು ತಯಾರಿಸಿ ಸವಿಯಬಹುದು, ಏನಂತೀರಾ..!