ಬುದ್ಧಿ ಮಾಂಧ್ಯ ಬಾಲಕ ನಾಪತ್ತೆ, ಹನಿ ಟ್ರ್ಯಾಪ್ ಮಾಡಿದ್ದ ಗ್ಯಾಂಗ್ ಅರೆಸ್ಟ್: ಕ್ರೈ ರೌಂಡಪ್
ಬೆಂಗಳೂರು, ಆ. 13: ಚಿಕಿತ್ಸೆಗಾಗಿ ಕರೆ ತಂದಿದ್ದ ಬುದ್ಧಿ ಮಾಂಧ್ಯ ಬಾಲಕ ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಪೋಷಕರು ಬೀದಿ ಬೀದಿ ಅಲೆಯುತ್ತಿದ್ದಾರೆ.
ಒರಿಸ್ಸಾ ಮೂಲದ ಪ್ರಸನ್ಜೀತ್ ದಾಸ್ (12 ) ನಾಪತ್ತೆಯಾದ ಬಾಲಕ. ಮಗನಿಗಾಗಿ ಪೋಷಕರು ಅಲೆಯುತ್ತಿದ್ದಾರೆ. ಮಾನಸಿಕ ರೋಗಕ್ಕೆ ಒಳಗಾಗಿದ್ದ ಪ್ರಸನ್ಜೀತ್ ದಾಸ್ಗೆ ಚಿಕಿತ್ಸೆ ಕೊಡಿಸಲು ಒರಿಸ್ಸಾದಿಂದ ಬೆಂಗಳೂರಿನ ನಿಮ್ಹಾನ್ಸ್ಗೆ ಕರೆತರಲಾಗಿತ್ತು. ಆ. 09 ರಂದು ಪೋಷಕರು ಬೆಂಗಳೂರಿಗೆ ಬಂದಿದ್ದರು. ಸಿದ್ಧಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಜ್ ನಲ್ಲಿ ರೂಮ್ ಪಡೆದು ತಂಗಿದ್ದರು.
ಗುರುವಾರ ರಾತ್ರಿ ಊಟ ಮುಗಿಸಿ ಲಾಡ್ಜ್ ನಲ್ಲಿ ಮಲಗಿದ್ದ ವೇಳೆ ಬಾಲಕ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಗನಿಗಾಗಿ ಪೋಷಕರು ಶೋಧ ನಡೆಸುತ್ತಿದ್ದು, ಕಂಡು ಬಂದಲ್ಲಿ ಸಂಪರ್ಕ (ಅಬ್ದುಲ್: 8792559232) ಮಾಡುವಂತೆ ಮನವಿ ಮಾಡಲಾಗಿದೆ.
ಉದ್ಯಮಿಗೆ ಹನಿಟ್ರ್ಯಾಪ್ ಮಾಡಿದ್ದ ಐವರ ಸೆರೆ:
ಇಬ್ಬರು ಯುವತಿಯರನ್ನು ಬಿಟ್ಟು ಉದ್ಯಮಿಗೆ ಹನಿ ಟ್ರಾಪ್ ಮಾಡಿದ ಆರೋಪದ ಮೇಲೆ ಯುವ ಉದ್ಯಮಿ ಕಂ ನಟನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ಜೆಪಿನಗರ ನಿವಾಸಿ ಯುವರಾಜ್ ಬಂಧಿತ ಆರೋಪಿ. ಮಿಸ್ಟರ್ ಭೀಮರಾವ್ ಎಂಬ ಸಿನಿಮಾ ಮಾಡುವುದಾಗಿ ಯುವರಾಜ್ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹಾಕಿದ್ದ. ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿ ಜತೆ ಯುವತಿಯರ ಹೆಸರಿನಲ್ಲಿ ಸಂದೇಶ ಕಳುಹಿಸಿ ಸಂವಹನ ಮಾಡಿದ್ದ.
ಕವನ ಹಾಗೂ ನಿಧಿ ಹೆಸರು ಬಳಿಸಿ ಉದ್ಯಮಿ ಜತೆ ಅಶ್ಲೀಲವಾಗಿ ಚಾಟ್ ಮಾಡಿದ್ದ ಯುವರಾಜ್, ಆ ಬಳಿಕ ತಾನು ಕ್ರೈಮ್ ಬ್ರಾಂಚ್ ಪೊಲೀಸ್ ಎಂದು ಹೇಳಿ ಹೆದರಿಸಿದ್ದ. ಯುವತಿಯರ ಜೊತೆಗೆ ಅಶ್ಲೀಲ ಚಾಟ್ ಬಗ್ಗೆ ನಿಮ್ಮ ಮೇಲೆ ಕೇಸ್ ದಾಖಲಾಗಿದೆ ಎಂದು ಹೇಳಿ ಹಣ ಪೀಕಿದ್ದ. ಮೊದಲಿಗೆ ಐವತ್ತು ಸಾವಿರ ಪಡೆದಿದ್ದ ಯುವರಾಜ್ ಆ ಬಳಿಕ ಹಂತ ಹಂತವಾಗಿ ಮೂರು ಲಕ್ಷ ರೂ. ಸುಲಿಗೆ ಮಾಡಿದ್ದ. ಒಟ್ಟು ಹದಿನಾಲ್ಕು ಲಕ್ಷ ರೂ. ಸುಲಿಗೆ ಮಾಡಿದ್ದ. ಈ ಬಗ್ಗೆ ಅರಿವಿಗೆ ಬಂದ ನಂತರ ಉದ್ಯಮಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಉದ್ಯಮಿ ನೀಡಿದ ದೂರಿನ ಮೇರೆಗೆ ಯುವರಾಜ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ಗೆ ಕ್ಯಾಂಟರ್ ಡಿಕ್ಕಿ: ಸವಾರ ಸಾವು:
ಬೈಕ್ಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನಾಗರಭಾವಿ ರಿಂಗ್ ರಸ್ತೆಯಲ್ಲಿ ನಡೆದಿದೆ. ಅತಿ ವೇಗವಾಗಿ ಬಂದ ಕ್ಯಾಂಟರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ತಲೆಗೆ ತೀವ್ರ ಪೆಟ್ಟಾಗಿ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ್ದಾನೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ತಲೆ ಮರೆಸಿಕೊಂಡಿರುವ ಕ್ಯಾಂಟರ್ ಗಾಗಿ ಶೋಧ ನಡೆಸುತ್ತಿದ್ದಾರೆ.