ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ಐಪಿಎಸ್ ಅಧಿಕಾರಿ ಹಲರಂಕರ್ !
ಬೆಂಗಳೂರು, ಜನವರಿ 03: ಐಪಿಎಸ್ ಅಧಿಕಾರಿಯಾಗಿ ಸೇವೆಗೆ ಸೇರಿ ಹನ್ನೆರಡು ವರ್ಷದ ನಂತರ ಒಂದು ಫ್ರಿಡ್ಜ್ ಖರೀದಿಸಿದ್ದರು! ಇದು ಅವರ ಪ್ರಾಮಾಣಿಕತೆ. ಬೆಂಗಳೂರಿನ ಭೂಗತ ಲೋಕವನ್ನು ಹುಟ್ಟಡಗಿಸಿದ್ದ ದಕ್ಷ ಅಧಿಕಾರಿ. ಸಾವಿನ ಬಳಿಕವೂ ತನ್ನ ದೇಹವನ್ನು ಆಸ್ಪತ್ರೆಗೆ ದಾನ ಮಾಡಿದ್ದು ಅವರ ತ್ಯಾಗ. ವಯೋ ಸಹಜ ಕಾಯಿಲೆಯಿಂದ ಶನಿವಾರ ದೈವಾಧೀನರಾದ ಹಿರಿಯ ಐಪಿಎಸ್ ಅಧಿಕಾರಿ ಹಲರಂಕರ್ ಅವರ ಮಾದರಿ ಬದುಕಿನ ಮುನ್ನಡಿ.
ವಹೋ ಸಹಜ ಕಾಯಿಲೆಯಿಂದ ಬಳತ್ತಿದ್ದ ಕೇಂದ್ರ ಶಸಸ್ತ್ರ ಮೀಸಲು ಪಡೆಯ ಡಿಜಿ, ಬೆಂಗಳೂರು ಕಂಡ ಅತಿ ಪ್ರಾಮಾಣಿಕ, ದಕ್ಷ ಅಧಿಕಾರಿ ಹಲರಂಕರ್ ಶನಿವಾರ ಸಂಜೆ ನಿಧನರಾಗಿದ್ದಾರೆ. ಐದು ವರ್ಷದ ಹಿಂದೆ ಅವರು ಬರೆದಿಟ್ಟಿದ್ದ ರಹಸ್ಯ ವಿಲ್ ನಂತೆ ಅವರ ಮೃತ ದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ.
ಕೆಲ ವರ್ಷದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಕೋಮಾ ಸ್ಥಿತಿಗೆ ಹೋಗಿದ್ದು ಅವರನ್ನು ವಿಕ್ರಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಕಂಬನಿ ಮಿಡಿದಿರುವ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ , ಬೆಂಗಳೂರು ಕಂಡ ದಕ್ಷ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ ಎಂದು ನೋವು ತೋಡಿಕೊಂಡಿದ್ದಾರೆ.
ಹಲರಂಕರ್ ಮಾದರಿ ಅಧಿಕಾರಿ. ಅವರ ಪ್ರಾಮಾಣಿಕತೆ ನಮಗೆಲ್ಲೂ ಸ್ಫೂರ್ತಿ. ಅವರ ಮಾರ್ಗದರ್ಶನವೇ ನನಗೆ ಕೀರ್ತಿ ತಂದು ಕೊಟ್ಡಿದ್ದು. ಅವರಿಂದಲೇ ನಾನು ರಾಷ್ಟ್ರಪತಿ ಗ್ಯಾಲೆಂಟರಿ ಪದಕ ಪಡೆದಿದ್ದು. ಸಾವಿನಲ್ಲೂ ಅವರು ಮೃತ ದೇಹ ಆಸ್ಪತ್ರೆಗೆ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ ಎಂದು ನಿವೃತ್ತ ಎಸಿಪಿ ಬಿ. ಬಿ. ಅಶೋಕ್ ಕುಮಾರ್ ಕಂಬನಿ ಮಿಡಿದಿದ್ದಾರೆ.
ಅತೀ ಪ್ರಾಮಾಣಿಕ: ಬೆಂಗಳೂರು ಕಮೀಷನರ್ ಗಳ ಪೈಕಿ ಅತಿ ದಕ್ಷ ಅಧಿಕಾರಿ ಯಾರು ಎಂದು ಹುಡುಕಿದರೆ ಅಗ್ರಗಣ್ಯ ಹೆಸರು ಸಿಗೋದು ಹಲರಂಕರ್. ಪ್ರಾಮಾಣಿಕತೆ ಮತ್ತು ದಕ್ಷತೆಗೆ ಮಾದರಿಯಾಗಿದ್ದರು. ಐಪಿಎಸ್ ಅಧಿಕಾರಿಗಳು ಅಂದರೆ ಹೀಗೆ ಬದುಕಬೇಕು ಎಂದು ದಾರಿ ತೋರಿದವರು ಎಂದು ಹಲರಂಕರ್ ಅವರನ್ನು ಸ್ಮರಿಸುತ್ತಾರೆ ಹಿರಿಯ ಪೊಲೀಸ್ ಅಧಿಕಾರಿ.
ಮಹಾರಾಷ್ಟ್ರ ಮೂಲದ ಹಲರಂಕರಗ ಐಪಿಎಸ್ ಮಾಡಿ ಸೇವೆಗೆ ಸೇರಿದ ಹನ್ನೆರಡು ವರ್ಷದ ನಂತರ ಫ್ರಿಡ್ಜ್ ಖರೀದಿಸಿದ್ದರಂತೆ. ಇದೊಂದೆ ಸಾಕು ಅವರ ಪ್ರಾಮಾಣಿಕತೆ ಅಳೆಯಲು. ಸೇವಾ ಪೂರ್ತಿ ಪ್ರಾಮಾಣಿಕತೆಯನ್ನು ಉಸಿರಾಗಿಸಿಕೊಂಡಿದ್ದರು ಎಂದು ಅವರ ನಿಕಟ ವರ್ತಿಯಾಗಿ ಕೊನ ವರೆಗೂ ಇದ್ದ ಬಿ.ಬಿ. ಅಶೋಕ್ ಕುಮಾರ್ ಹಳೇ ನೆನಪು ಸ್ಮರಿಸಿದರು.
ರೌಡಿಸಂ ಫಿನಿಷ್: ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಯಾಗಿದ್ದರು. ಬೆಂಗಳೂರಿನಲ್ಲಿ ಪಾತಕ ಲೋಕ ಪರಾಕಾಷ್ಠೆ ತಲುಪಿತ್ತು. ಕೊತ್ವಾಲ್ ರಾಮಚಂದ್ರ, ಜಯರಾಜ್ ಅವರ ರೌಡಿಸಂ ಕಾಲ. 1986 ರಿಂದ 1988 ರವರೆಗೆ ಎರಡು ವರ್ಷ ಬೆಂಗಳೂರು ಪೊಲೀಸ್ ಕಮೀಷನರ್ ಆಗಿ ಸೇವೆ ಸಲ್ಲಿಸಿದ್ದರು. ರೌಡಿಗಳ ಸದ್ದಡಗಿಸಲು ವಿಶೇಷ ತಂಡ ರಚಿಸಿದ್ದರು. ಬಿ.ಕೆ. ಶಿವರಾಂ, ಅಶೋಕ್ ಕುಮಾರ್, ಸಂಗ್ರಾಮ್ ಸಿಂಗ್ ಮತ್ತಿತರ ಅಧಿಕಾರಿಗಳು ಹೆಸರು ಮಾಡಿದ್ದೇ ಇದೇ ಕಾಲದಲ್ಲಿ. ಪೊಲೀಸ್ ಅಧಿಕಾರಿಗಳ ಪಾಲಿಗೆ ಸ್ಫೂರ್ತಿಯ ಸೆಲೆಯಾಗಿದ್ದರು.
ಆಪರೇಷನ್ ಟೈಗರ್: ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿತ್ತು. ಆಪರೇಷನ್ ಟೈಗರ್ ಹೆಸರಿನಲ್ಲಿ ಸರಗಳ್ಳರನ್ನು ಮಟ್ಟ ಹಾಕಿದ್ದು ಹಲರಂಕರ್ ಎಂದರೆ ತಪ್ಪಾಗಲಾರದು.
ಕೇಂದ್ರ ಸೇವೆಗೆ ಮರಳಿದರು: ಬೆಂಗಳೂರು ಪೊಲೀಸ್ ಆಯುಕ್ರರಾಗಿದ್ದ ಹಲರಂಕರ್ ಕಾರ್ಯ ನಿರ್ವಹಿಸುತ್ತಿದ್ದರು. ಪತ್ರಿಕೆಯೊಂದು ಅನ್ಯ ಧರ್ಮದ ಬಗ್ಗೆ ಒಂದು ವಿವಾದಾತ್ಮಕ ಲೇಖನ ಪ್ರಕಟಿಸಿತ್ತು. ಅದು ಹಿಂಸಾಚಾರಕ್ಕೆ ನಾಂದಿ ಹಾಡಿತ್ತು. ಈ ವೇಳೆ ಶೂಟ್ ಅಂಡ್ ಸೈಟ್ ಅರ್ಡರ್ ಮಾಡಿ ಕೋಮು ಹಿಂಸಾಚಾರ ತಡೆದಿದ್ದರು. ಈ ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದರು. ಇದೇ ಕಾರಣಕ್ಕೆ ಅವರನ್ನು ಬೆಂಗಳೂರು ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಿದ್ದರು. ಮರು ಮಾತನಾಎದೇ ಹಲರಂಕರ್ ಕೇಂದ್ರ ಸೇವೆಗೆ ಮರಳಿದರು. ಸಿಅರ್ ಪಿಎಫ್ ಡಿಜಿ ಹುದ್ದೆ ಅಲಂಕರಿಸಿದ್ದರು. ಇಂತಹ ದಕ್ಷ ಅಧಿಕಾರಿ ಬೆಂಗಳೂರು ಕಮೀಷನರ್ ಆಗಿ ಸೇವೆ ಮಾಡಿದ್ದು ಕನ್ನಡಿಗರ ಹೆಮ್ಮೆ ಅಲ್ಲವೇ.
ಅವರ ಆತ್ಮಕ್ಕೆ ಶಾಂತಿ ಸಿಗಲಿ. ಹಲರಂಕರ್ ಪೊಲೀಸ್ ಅಧಿಕಾರಿಗಳಿಗೆ ಸದಾ ಮಾದರಿಯಾಗಿ ಎಲ್ಲರ ಹೃದಯಗಳಲ್ಲಿ ಬೆಳಗುತ್ತಿರಲಿ ಎಂದು ಒನ್ ಇಂಡಿಯಾ ಕನ್ನಡ ಹಾರೈಸುತ್ತದೆ.