ರೌಡಿಗಳೊಂದಿಗೆ ಗುರುತಿಸಿಕೊಳ್ಳುವ ಪೊಲೀಸರ ಮೇಲೆ ಶಿಸ್ತು ಕ್ರಮ ಎಚ್ಚರಿಕೆ ಕೊಟ್ಟ ಗೃಹ ಸಚಿವರು
ಬೆಂಗಳೂರು.ಸೆ. 30: "ರಾಜಧಾನಿ ರೌಡಿ ಮುಕ್ತ ನಗರವಾಗಬೇಕು. ರೌಡಿಗಳೊಂದಿಗೆ ಪೊಲೀಸರು ಗುರುತಿಸಿಕೊಳ್ಳಬಾರದು. ನಕಲಿ ದಾಖಲೆ ಸೃಷ್ಟಿಸಿ ರೌಡಿಗಳ ಮೂಲಕ ಹೆದರಿಸುವ ಲ್ಯಾಂಡ್ ಮಾಫಿಯಾಗೆ ಮೊದಲು ಕಡಿವಾಣ ಬೀಳಬೇಕು''
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬೆಂಗಳೂರು ಪೊಲೀಸರಿಗೆ ಗುರುವಾರ ಪ್ರಗತಿ ಪರಿಶೀಲನಾ ಸಭೆ ಬಳಿಕ ರವಾನಿಸಿದ ಖಡಕ್ ಸಂದೇಶ. ಗನ್ ಲೈಸನ್ಸ್ ಆನ್ಲೈನ್ನಲ್ಲಿ ಪಡೆಯುವ ಯೋಜನೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಬೆಂಗಳೂರು ಕಮೀಷನರ್ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಮಾಡಲಾಗಿದೆ. ಗನ್ ಲೈಸೆನ್ಸ್ ಆನ್ಲೈನ್ನಲ್ಲಿ ನೀಡುವ ಯೋಜನೆಯನ್ನು ನಗರ ಪೊಲೀಸರು ವ್ಯಾಪ್ತಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯವ್ಯಾಪ್ತಿಯಲ್ಲಿ ವಿಸ್ತರಿಸುವ ಚಿಂತನೆ ನಡೆದಿದೆ ಎಂದರು.
ಜನಸ್ನೇಹಿ ಪೊಲೀಸ್ ನಿರ್ಮಾಣಕ್ಕೆ ಬೀಟ್ ವ್ಯವಸ್ಥೆ ಬಲಗೊಳಿಸಬೇಕು. ಬೆಂಗಳೂರು ನಗರ ರೌಡಿಮುಕ್ತ ನಗರವಾಗಬೇಕು. ನಕಲಿ ದಾಖಲೆ ಸೃಷ್ಟಿಸಿ ರೌಡಿ ಮುಖಾಂತರ ಬೆದರಿಕೆ ಕೆಲಸವಾಗುತ್ತಿದೆ. ಪೊಲೀಸರು ರೌಡಿಗಳೊಂದಿಗೆ ಗುರುತಿಸಿಕೊಳ್ಳಬಾರದು ಎಂದು ಪೊಲೀಸರಿಗೆ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದ್ದಾರೆ.
ಅಕ್ರಮ ವಿದೇಶಿಯರ ಬಗ್ಗೆ ನಿಗಾ: ಅಕ್ರಮವಾಗಿ ನೆಲೆಯೂರುವ ವಿದೇಶಿಯರ ಬಗ್ಗೆ ನಿಗಾವಹಿಸಬೇಕು. ಬಾಂಗ್ಲಾ, ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಿಂದ ಬರುವ ನುಸುಳುಕೋರರನ್ನು ಬಂಧಿಸಬೇಕು. ವಿದೇಶಿಯರಿಗೆ ಆಧಾರ್ ಕಾರ್ಡ್, ವೋಟರ್ ಐಡಿ ನೀಡುವ ಜಾಲವೇ ನಗರದಲ್ಲಿ ಬೇರೂರಿದೆ. ಇದಕ್ಕೆ ಕಡಿವಾಣ ಹಾಕಲಿಕ್ಕೆ ಪೊಲೀಸರಿಗೆ ಸೂಚಿಸಿದ್ದೇನೆ. ರೌಡಿ ಚಟುವಟಿಕೆ ಹಾಗೂ ಅಪರಾಧ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಬೆಟ್ಟಿಂಗ್ ಮಾಡುವುದನ್ನು ಸಂಪೂರ್ಣ ನಿಷೇಧ ಮಾಡಲಾಗಿದ್ದು, ಕಟ್ಟುನೆಟ್ಟಾಗಿ ಕಾನೂನು ಜಾರಿಗೆ ತರಬೇಕು ಎಂದು ಸೂಚನೆ ನೀಡಿದ್ದಾರೆ.
ಸಮಾಜ ವಿರೋಧಿಗಳಿಗೆ ಪೊಲೀಸರು ಟೆರರ್ ಆಗಿರಬೇಕು ಅಂತ ಸೂಚನೆ ನೀಡಲಾಗಿದೆ. ಇಸ್ಪೀಟ್ ಜೂಜಾಟದ ಅಡ್ಡೆಗಳ ಮೇಲೆ ನಿಗಾ ಇಡಲು ಸೂಚನೆ ನೀಡಿದ್ದೇನೆ. ರಾಜ್ಯಕ್ಕೆ ಬರುವ ಪ್ರತಿಯೊಬ್ಬ ವಿದೇಶಿ ಪ್ರಜೆಯನ್ನು ತಪಾಸಣೆ ಮಾಡಬೇಕು. ಪಾಸ್ ಪೋರ್ಟ್, ವೀಸಾ ಎಲ್ಲಾ ಮಾಹಿತಿ ಪಡೆಯಬೇಕು. ವಿಶೇಷವಾಗಿ ಬಾಂಗ್ಲಾ ಮತ್ತು ಪಾಕಿಸ್ತಾನಿ ಹಾಗೂ ಆಫ್ರಿಕನ್ ಪ್ರಜೆಗಳ ಮೇಲೆ ನಿಗಾ ಇಡಬೇಕು. ದೇಶ ದ್ರೋಹಿ ಶಕ್ತಿಗಳನ್ನು ಬಂಧಿಸಬೇಕು. ವಿದೇಶಿಗರ ವೀಸಾ ಎಲ್ಲಾ ಮಾಹಿತಿ ಪ್ರತಿ ಠಾಣೆಯಲ್ಲೂ ಇರಬೇಕು. ವಿದೇಶಿಗರಿಗೆ ಆಧಾರ್ ಸೇರಿ ಅಗತ್ಯ ದಾಖಲೆ ನೀಡುವ ದೊಡ್ಡ ಜಾಲವಿದೆ. ಈ ಜಾಲದ ಎಡೆಮುರಿ ಕಟ್ಟಲು ಸೂಚಿಸಿದ್ದೇನೆ ಇಂತಹ ಜಾಲಗಳನ್ನ ಹೆಡೆ ಮುರಿಕಟ್ಟಲು ಸೂಚಿಸಲಾಗಿದೆ ಎಂದರು.
ಗೃಹ ಸಚಿವರ ಮಾತು ಕೇಳುವರೇ?: ರಾಜಧಾನಿಯಲ್ಲಿ ರಿಯಲ್ ಎಸ್ಟೇಟ್ ಜತೆ ನಿಕಟ ಸಂಪರ್ಕ ಹೊಂದಿದೆ. ಅಮಾಯಕರ ಆಸ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ರೌಡಿಗಳಿಂದ ಹೆದರಿಸುವ ದೊಡ್ಡ ಜಾಲ ತಳವೂರಿದೆ. ಈ ರೌಡಿಗಳ ಜತೆಗೆ ಪೊಲೀಸರು ಕೂಡ ಶಾಮೀಲಾಗಿರುವ ಅರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ. ಪೊಲೀಸರು ಸಿವಿಲ್ ವ್ಯಾಜ್ಯಗಳನ್ನು ಠಾಣೆಗಳಲ್ಲಿಇತ್ಯರ್ಥ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಕೀಲರ ಸಂಘದ ಅಧ್ಯಕ್ಷ ರಂಗನಾಥ್ ಅವರೇ ದೂರು ನೀಡಿದ್ದರು. ಅನೇಕ ಪ್ರಕರಣಗಳಲ್ಲಿ ಪೊಲೀಸರು ಸಿವಿಲ್ ವ್ಯಾಜ್ಯಗಳಲ್ಲಿ ಇತ್ಯರ್ಥ ಮಾಡಿ ವಿವಾದಕ್ಕೆ ಸಿಲುಕಿದ್ದರು. ಇದೀಗ ಗೃಹ ಸಚಿವರೇ ನೇರವಾಗಿ ವಾರ್ನಿಂಗ್ ಮಾಡಿದ್ದಾರೆ. ರೌಡಿ ಚಟುವಟಿಕೆ ನಿಗ್ರಹಕ್ಕೆ ಸೂಚನೆ ನೀಡಿದ್ದು, ಎಷ್ಟರ ಮಟ್ಟಿಗೆ ಕಾರ್ಯಗತವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Recommended Video
ಆನ್ಲೈನ್ನಲ್ಲೇ ಗನ್ ಲೈಸನ್ಸ್: ಜನ ಸಾಮಾನ್ಯರು ಗನ್ ಪರವಾನಗಿ ಪಡೆಯಬೇಕಾದರೆ ಮೊದಲು ಪೊಲೀಸ್ ಇಲಾಖೆಯಿಂದ ತರಬೇತಿ ಪೂರೈಸಬೇಕು. ತರಬೇತಿ ಬಳಿಕ ಗನ್ ಪಡೆಯಲು ಪರವಾನಗಿ ನೀಡಲಾಗುತ್ತಿತ್ತು. ಕೆಲವರು ಅನ್ಯ ಮಾರ್ಗದ ಮೂಲಕವೇ ಪರವಾನಗಿ ಪಡೆಯುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಆನ್ಲೈನ್ ಮೂಲಕ ಗನ್ ಪರವಾನಗಿ ನೀಡಲು ಬೆಂಗಳೂರು ಪೊಲೀಸರು ಮೊದಲ ಬಾರಿಗೆ ಹೊಸ ಪ್ರಯತ್ನ ಮಾಡಿದ್ದಾರೆ. ಇದರಿಂದ ಪಾರದರ್ಶಕ ಗನ್ ಪರವಾನಗಿ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ.