ಸುಳ್ಳು ಹೇಳೋದ್ರಲ್ಲಿ ಬಿಜೆಪಿಯವರು ನಿಸ್ಸೀಮರು: ರಾಮಲಿಂಗಾ ರೆಡ್ಡಿ
ಬೆಂಗಳೂರು, ಜನವರಿ 25: ಮಹದಾಯಿ ನೀರಿನ ವಿಷಯಕ್ಕಾಗಿ ಮಾಡಲಾಗುತ್ತಿರುವ ರಾಜ್ಯ ಬಂದ್, ಸರ್ಕಾರ ಪ್ರಾಯೋಜಿತ ಬಂದ್ ಎಂಬ ಬಿಜೆಪಿ ಟೀಕೆಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಟಾಂಗ್ ನೀಡಿದ್ದಾರೆ.
'ಕುಣಿಯಲು ಬಾರದವಳು ನೆಲ ಡೊಂಕು' ಅನ್ನುವ ರೀತಿ ಬಿಜೆಪಿಯವರು ಸುಮ್ಮನೆ ಆರೋಪ ಮಾಡುತ್ತಾರೆ ಆದರೆ ಅವರ ಆರೋಪಕ್ಕೆ ಆಧಾರ ಇರಬೇಕು, ಬಿಜೆಪಿ ಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಅವರು ಹೇಳಿದರು.
ಬಿಜೆಪಿ ಜೈಲ್ ಭರೋ ಬಗ್ಗೆ ಗೃಹ ಸಚಿವರು ಹೇಳಿದ್ದು ಹೀಗೆ
ನೆಲ, ಜಲ, ಭಾಷೆ ವಿಷಯ ಬಂದಾಗ ಸಂಘಟನೆಗಳು ಬಂದ್ಗಳು ಆಗಿವೆ, ಬಂದ್ ಮಾಡುತ್ತಿರುವುದು ಇದು ಮೊದಲಲ್ಲ, ಆದರೆ ಯಾರೂ ಕೂಡ ಬಲವಂತವಾಗಿ ಬಂದ್ ಆಚರಿಸುವಂತೆ ಒತ್ತಡ ಹೇರಬಾರದು ಎಂದು ಅವರು ಹೇಳಿದರು.
ಪರಿವರ್ತನಾ ಯಾತ್ರೆಗೆ ಹೋಗಲು ಬಸ್ ವ್ಯವಸ್ಥೆ ಇಲ್ಲ ಎಂಬುದರ ಬಗ್ಗೆ ಮಾತನಾಡಿದ ಅವರು ಅದು ಅಲ್ಲಿನ ಕೆಎಸ್ಆರ್ಟಿಸಿ ನೌಕರರ ಸಂಘದ ನಿರ್ಧಾರ, ಸಿಬ್ಬಂದಿ ಇಲ್ಲವೆಂದರೆ ಎಂಜಿನಿಯರ್ಗಳು, ಎಂ.ಡಿಗಳು ಬಸ್ ಓಡಿಸಲು ಆಗುತ್ತದೆಯೇ ಎಂದು ಅವರು ಪ್ರಶ್ನೆ ಮಾಡಿದರು.
ಬಿಜೆಪಿಯವರು ಸಮಾವೇಶ ನಡೆಸಲು ಸ್ವತಂತ್ರ್ಯರು, ಬಂದ್ ಮಾಡಲೂ ಕೂಡ ಸಂಘಟನೆಗಳಿಗೆ ಸ್ವತಂತ್ರ್ಯ ಇದೆ, ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇದೆ ಎಷ್ಟು ಬೇಕಾದರೂ ಸಮಾವೇಶಗಳನ್ನು ಬಿಜೆಪಿ ಅವರು ಮಾಡಿಕೊಳ್ಳಲಿ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.