ಗಲಭೆ ಹಿಂದೆ ಎಸ್ಡಿಪಿಐ ಪಾತ್ರ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಬೆಂಗಳೂರು, ಆ. 13: ಕೆ.ಜೆ. ಹಳ್ಳಿ ಹಾಗೂ ಡಿ.ಜಿ ಹಳ್ಳಿ ವ್ಯಾಪ್ತಿಯಲ್ಲಿ ಗಲಭೆ ಕುರಿತಂತೆ ಮಹತ್ವದ ಮಾಹಿತಿಯನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೊಟ್ಟಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಹೇಳಿಕೆ ಕೊಟ್ಟಿರುವ ಅವರು, ಮುಖ್ಯವಾಗಿ ಎಸ್ಡಿಪಿಐ ಪಾತ್ರ ಈ ಗಲಭೆ ಹಿಂದೆ ಇದೆ ಎಂಬುದು ಬೆಳಕಿಗೆ ಬರುತ್ತಿದೆ ಎಂದಿದ್ದಾರೆ. ಮೊನ್ನೆ ನಡೆದ ಗಲಭೆ, ನಂತರ ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಮೂರು ಜನ ಅಸುನೀಗಿದ್ದರು. ನಿನ್ನೆ ಇಡೀ ದಿನ ಕೆ.ಜೆ. ಹಳ್ಳಿ, ಡಿ.ಜಿ. ಹಳ್ಳಿ ಪರಿಶೀಲನೆ ನಡೆಸಿದ್ದೇನೆ. ಈ ಸಂದರ್ಭದಲ್ಲಿ ಹಲವು ಹೊಸ ಹೊಸ ವಿಚಾರ ಬೆಳಕಿಗೆ ಬರುತ್ತಿವೆ. ಎಲ್ಲವನ್ನೂ ಮಾದ್ಯಮಗಳ ಮುಂದೆ ಹೇಳಲು ಬರಲ್ಲ. ಮುಂದೆ ಒಂದು ದಿನ ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾರೆ.
ಹೀಗಾಗಿ ಮಂಗಳೂರು ಮೈಸೂರು ಸೇರಿ ಎಲ್ಲಾ ಕಡೆಗಳ ಪ್ರಕರಣಗಳಲ್ಲಿನ ಎಸ್ಡಿಪಿಐ ಪಾತ್ರದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಸಮಗ್ರ ಮಾಹಿತಿ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲು ನಾವು ಸಿದ್ಧವಾಗಿದ್ದೇವೆ. ಈಗಾಗಲೇ ಎಸ್ಡಿಪಿಐನ ಕೆಲವು ಪದಾಧಿಕಾರಿಗಳನ್ನು ಬಂಧಿಸಿದ್ದೇವೆ. ಅವರ ಪಾತ್ರ ಸಂಪೂರ್ಣವಾಗಿ ತನಿಖೆ ಮಾಡುತ್ತಿದ್ದೇವೆ. ಈ ಪ್ರಕರಣದ ಜೊತೆ ಹಿಂದೆ ನಡೆದಿರುವ ಘಟನೆಗಳ ಸಂಬಂಧಗಳನ್ನು ಕೂಡಾ ತನಿಖೆ ನಡೆಸುತ್ತೇವೆ.
ಕೆಲವು ವಿಡಿಯೋಗಳಲ್ಲಿ ಅಕ್ಕಪಕ್ಕದ ಪ್ರದೇಶಗಳಿಂದ ಎಸ್ಡಿಪಿಐ ಕಾರ್ಯಕರ್ತರು ಬಂದಿರುವುದು ಬೆಳಕಿಗೆ ಬಂದಿದೆ. ಪೊಲೀಸರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ರಾಜ್ಯದ ಇತರ ಕಡೆ ಶಾಂತಿ ಕಾಪಾಡಬೇಕು ಜನ ಸಹಕರಿಸಬೇಕು ಎಂದು ಬಸವರಾಜ್ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ.
ಕೂಡಲೇ ಎಲ್ಲಾ ಕ್ರಮ ಜರುಗಿಸಲು ಸನ್ನದ್ದರಾಗಿದ್ದೇವೆ. ಇಡೀ ಘಟನೆ ಹಿಂದೆ ಏನೆಲ್ಲಾ ರಾಜಕೀಯ ನಡೆದಿದೆ? ಯಾರ ಕೈವಾಡ ಇದೆ? ಯಾವ ಸಂಘಟನೆ ಕೈವಾಡ? ಕೆಲ ಮುಖಂಡರ ನಡುವಿನ ವೈಮನಸ್ಸು ಇದೆ? ಎಲ್ಲದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಗಲಭೆಗೆ ಕಾರಣ ಆದವರು ಯಾರೇ ಆಗಲಿ ಕ್ರಮ ಜರುಗಿಸುತ್ತೇವೆ. ರಾಜ್ಯದ ಜನರಲ್ಲಿ ಆತಂಕ ಬೇಡ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ.