ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಸ್ವಚ್ಛತೆ ಪರಿಶೀಲಿಸಿದ ಆರಗ ಜ್ಞಾನೇಂದ್ರ
ಬೆಂಗಳೂರು, ಆ. 28: ನೀವು ನೋಡಿದ್ರೆ ಇನ್ನೂ ಯುವಕರಾಗಿದ್ದೀರ. ಅಪರಾಧ ಚುವಟಿಕೆಯಿಂದ ದೂರವಾಗಿ. ಒಳ್ಳೆಯ ಬದುಕನ್ನು ಕಟ್ಟಿಕೊಂಡು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಬಾಳಲು ಪ್ರಯತ್ನಿಸಿ !
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಾಡಿದ ಮನವಿ. ಮೈಸೂರಿನಲ್ಲಿ ಯುವತಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯದ ಜನರ ಕ್ಷಮೆ ಯಾಚಿಸಿದ್ದರು. ನನ್ನ ಮಾತಿನಿಂದ ನೋವಾಗಿದ್ದರೆ ವಿಷಾಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.
ಇದೀಗ ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ತಾರ್ಕಿಕ ಅಂತ್ಯ ಕಾಣಿಸಿದ ಬೆನ್ನಲ್ಲೇ ಗೃಹ ಸಚಿವರು ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದರು.
ಕಾರಾಗೃಹ ಇಲಾಖೆ ಮತ್ತು ಸುಧಾರಣಾ ಸೇವೆ ಇಲಾಖೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಏರ್ಪಡಿಸಿದ್ದ ಮಾನಸಿಕ ಹಾಗೂ ಶಾರೀರಿಕ ಸಾಮರ್ಥ್ಯ ಅಭಿವೃದ್ಧಿ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರವನ್ನು ಉದ್ಘಾಟನೆಗೆ ಬಂದ ಸಚಿವರು ಏಕಾಏಕಿ ಜೈಲಿನ ಸೆಲ್ ಗಳನ್ನು ವೀಕ್ಷಿಸಿದರು.
ಆ ಬಳಿಕ ಜೈಲಿನಲ್ಲಿರುವ ಸ್ವಚ್ಛತೆ, ಆಹಾರ ತಯಾರಿಕೆ ಕೇಂದ್ರಗಳನ್ನು ಪರಿಶೀಲಿಸಿದರು. ಕೈದಿಗಳನ್ನು ನಿಕೃಷ್ಟವಾಗಿ ಕಾಣಬಾರದು. ಅವರಿಗೆ ಶುಚಿಯಾದ ಆಹಾರ ನೀಡಬೇಕು. ಕೈದಿಗಳು ಇರುವ ಸೆಲ್ ಗಳು ಸೇರಿದಂತೆ ಜೈಲನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ಗೃಹ ಸಚಿವರು, ಕೊಲೆಯಂತಹ ಅಪರಾಧ ಕೃತ್ಯಗಳನ್ನು ಯಾರು ಮಾಡಬಾರದು. ಜೀವನ ದೊಡ್ಡದು ಎಂಬುದನ್ನು ಮನಗಾನಬೇಕು. ಅಪರಾಧ ಕೃತ್ಯ ಎಸಗಿ ಜೀವನ ಪರ್ಯಂತ ಜೈಲಿನಲ್ಲಿ ಇರುವ ಹಾಗೆ ಬದುಕನ್ನು ಹಾಳು ಮಾಡಿಕೊಳ್ಳಬಾರದು. ಕೋಪದ ಕೈಗೆ ಬುದ್ಧಿ ಕೊಡಬಾರದು. ಸಮಾಜದಲ್ಲಿ ಗೌರವಯುತ ಜೀವನ ಮಾಡುವತ್ತ ಪರಿವರ್ತನೆಯಾಗಬೇಕು ಎಂದು ಜೈಲಿನ ಕೈದಿಗಳಿಗೆ ಕಿವಿಮಾತು ಹೇಳಿದರು.
ಕಠಿಣ ಕ್ರಮ ಎಚ್ಚರಿಕೆ: ರಾಜ್ಯದ ಕಾರಾಗೃಹಳೇ ಅಪರಾಧ ಕೃತ್ಯಗಳ ಕೇಂದ್ರಗಳಾಗಬಾರದು. ಜೈಲಿನಲ್ಲಿದ್ದುಕೊಂಡೇ ಕೈದಿಗಳು ಅಪರಾಧ ಕೃತ್ಯಗಳನ್ನು ಎಸಗುವ ಬಗ್ಗೆ ಸಂಚು ರೂಪಿಸಿ ಒಳಗಿನಿಂದಲೇ ಕಾರ್ಯಕತ ಗೊಳಿಸುವ ಬಗ್ಗೆ ದೂರುಗಳಿವೆ. ಇನ್ನು ಜೈಲಿನೊಳಗೆ ಅಕ್ರಮವಾಗಿ ಮಾದಕ ವಸ್ತು, ಹಣ ಸಾಗಣೆಗೆ ಅವಕಾಶ ಕೊಡದಂತೆ ಬಿಗಿ ಭದ್ರತೆ ಕ್ರಮ ತೆಗೆದುಕೊಳ್ಳಬೇಕು.ಯಾವುದೋ ಅಪರಾಧದಿಂದ ಜೈಲಿಗೆ ಬರುವರು ಮನ ಪರಿವರ್ತನೆಯೊಂದಿಗೆ ಹೋಗಬೇಕು.
ಅದನ್ನು ಬಿಟ್ಟು ಪರಿಪೂರ್ಣ ಕ್ರಿಮಿನಲ್ ಅಗಿ ಪರಿವರ್ತನೆಯಾಗಬಾರದು. ಈ ನಿಟ್ಟಿನಟ್ಟಿ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಎಂದು ಗೃಹ ಸಚಿವರು ಕಾರಾಗೃಹ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಆರ್ಟ್ ಆಫ್ ಲಿವಿಂಗ್ ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಜಂಟಿಯಾಗಿ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಶಿಬಿರವನ್ನು ಕೈದಿಗಳಿಗೆ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಕೈದಿಗಳ ಮನೋಸ್ಥೈರ್ಯ ಹೆಚ್ಚಿಸುವ ಹಾಗೂ ದೈಹಿಕ ಚುವಟಿಕೆಯ ಅಗತ್ಯತೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಕಾರಾಗೃಹ ಇಲಾಖೆಯ ಪೊಲೀಸ್ ವರಿಷ್ಠರಾದ ಅಲೋಕ್ ಮೋಹನ್ , ಜೈಲು ಮುಖ್ಯ ಅಧೀಕ್ಷಕ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು.
ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅಪರಾಧ ಕೃತ್ಯಗಳನ್ನು ಎಸಗುವ ಬಗ್ಗೆ ಸಂಚು ರೂಪಿಸಿ ಕಾರ್ಯಗತಗೊಳಿಸಿದ್ದರು. ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಕಾರಾಗೃಹದಲ್ಲಿ ಚಾಕು ಚೂರಿ, ಬ್ಲೇಡ್ ಮತ್ತಿತರ ವಸ್ತುಗಳು ಸಿಕ್ಕಿದ್ದವು. ಈ ಬಳಿಕ ಜೈಲಿನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಇಷ್ಟಾಗಿಯೂ ಅಲ್ಲಿನ ರೌಡಿ ಶೀಟರ್ ಸೇರಿದಂತೆ ಅನೇಕರು ಮೊಬೈಲ್ ಬಳಕೆ ಮಾಡುತ್ತಿರುವ ಸಂಗತಿ ಹೊರ ಬಂದಿತ್ತು. ಆ ಬಳಿಕ ಬೆಂಗಳೂರು ಕಾರಾಗೃಹದಲ್ಲಿದ್ದ ಹದಿನೆಂಟು ಕೈದಿಗಳನ್ನು ಬೇರೆ ಜೈಲುಗಳಿಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಗೃಹ ಸಚಿವರು ದಿಢೀರ್ ಭೇಟಿ ನೀಡಿ ಜೈಲಿನ ಚಟುವಟಿಕೆ ಬಗ್ಗೆ ಮಾಹಿತಿ ಪಡೆದು ಹಲವು ನಿರ್ದೇಶನ ನೀಡಿದ್ದಾರೆ.