ಈ ಬಜೆಟ್ ಬಿಬಿಎಂಪಿಯದ್ದಾ, ಕರ್ನಾಟಕದ್ದಾ?: ಸದನದಲ್ಲಿ ಹೀಗೊಂದು ಪ್ರಶ್ನೆ
ಬೆಂಗಳೂರು, ಜು 12: ರಾಜ್ಯ ಒಟ್ಟಾರೆ ಬಜೆಟ್ನಲ್ಲಿ ಶೇ.82ರಷ್ಟು ಸಂಪನ್ಮೂಲವನ್ನು ಬೆಂಗಳೂರಿಗೇ ಮೀಸಲಿಡಲಾಗಿದೆ. ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರು ಪ್ರಸಕ್ತ ವರ್ಷದ ಬಜೆಟ್ನ್ನು ಕರ್ನಾಟಕಕ್ಕೆ ಮಂಡಿಸಿದ್ದಾರೋ ಅಥವಾ ಬಿಬಿಎಂಪಿಗೆ ಮಂಡಿಸಿದ್ದಾರೋ ಎಂಬ ಸಂಶಯ ವ್ಯಕ್ತವಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಎಚ್ಕೆ ಪಾಟೀಲ್ ತಮ್ಮದೇ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸರ್ಕಾರವೆಂದರೆ ಇಡೀ ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಬೇಕು. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡಿಸಿರುವ ಬಜೆಟ್ನಲ್ಲಿ ಮುಂಬೈ ಕರ್ನಾಟಕಕ್ಕೆ ಶೇ 2ರಷ್ಟು, ಹೈದರಾಬಾದ್ ಕರ್ನಾಟಕಕ್ಕೆ ಶೇ.7ರಷ್ಟು ಹಾಗೂ ಬೆಂಗಳೂರಿಗೆ ಶೇ.82ರಷ್ಟು ಅನುದಾನವನ್ನು ಮೀಸಲಿಟ್ಟಿದ್ದಾರೆ.
ವಿಧಾನಮಂಡಲ ಕಲಾಪ ಶುಕ್ರವಾರಕ್ಕೆ ವಿಸ್ತರಣೆ
ಇದರಿಂದ ಪ್ರಾದೇಶಿಕ ಅಸಮಾನತೆಯ ಕೂಗು ಬಲವಾಗುತ್ತಿದೆ, ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದೆ. ಸರ್ಕಾರ ಎಚ್ಚರಿಕೆವಹಿಸದಿದ್ದರೆ ಪ್ರತ್ಯೇಕತೆಯನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಶಕ್ತಿಯಾದ ಅಲ್ಪಸಂಕ್ಯಾತ ಸಮುದಾಯವನ್ನು ಬಜೆಟ್ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಬಡವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರುಮತ ಹಾಕಿದ್ದರಿಂದಲೇ 79 ಸೀಟುಗಳನ್ನು ಗೆಲ್ಲಲು ಸಾಧ್ಯವಾಗಿದೆ.
ಹಿಂದಿನ ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರಿಗೆ ಸಾಕಷ್ಟು ಅನುದಾನವನ್ನು ತೆಗೆದಿರಿಸಿತ್ತು ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೊಸ ಬಜೆಟ್ ಮಂಡಿಸುವಾಗ ಅಲ್ಪಸಂಖ್ಯಾತರಿಗೆ ಹೊಸ ಯೋಜನೆಯನ್ನು ರೂಪಿಸಬೇಕಿತ್ತು.
ಈ ತಾರತಮ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದರು. ಅಲ್ಲದೆ ಆಗಿರುವ ತಾರತಮ್ಯವನ್ನು ಸರಿಪಡಿಸಲು ನಮ್ಮ ನಾಯಕರಾದ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಂತ್ರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು. ಹಿರಿಯ ನಾಯಕ ಎಚ್ಕೆ ಪಾಟೀಲ್ ಆಡಿರುವ ಈ ಮಾತುಗಳು ಸರ್ಕಾರವನ್ನು ತೀವ್ರ ಭೀತಿಗೆ ಸಿಲುಕಿಸಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಚರ್ಚೆಗೆ ಕಾರಣವಾಗಿದೆ.