ಲಾಕ್ ಡೌನ್ ಸಡಿಲಿಕೆ: ಕಟು ಶಬ್ದಗಳಿಂದ ಟೀಕಿಸಿದ ಎಚ್.ಕೆ.ಪಾಟೀಲ್
ಬೆಂಗಳೂರು: ಲಾಕ್ ಡೌನ್ ಸಡಿಲಿಕೆಯಂತಹ ನಿರ್ಣಯ ಶ್ರೀಮಂತ ವರ್ಗದ ಪರವೇ ಹೊರತು ಆರ್ಥಿಕ ದುಸ್ಥಿತಿಯಿಂದ ಬಳಲಿರುವ ಬಡವರ ಪರವಾಗುವುದೇ ಇಲ್ಲ. ಇಂತಹ ನಿರ್ಣಯಗಳಿಂದ ಕರ್ನಾಟಕಕ್ಕೆ ತಾವು ದುರಂತಮಯ ಸನ್ನಿವೇಶ ತಂದೊಡ್ಡಿದ ಅಪಕೀರ್ತಿಗೆ ಪಾತ್ರರಾಗುತ್ತೀರಿ. ತಕ್ಷಣ ಲಾಕ್ ಡೌನ್ ಸಡಿಲಿಕೆಯಂತಹ ದುರಂತವನ್ನು ಆಹ್ವಾನಿಸುವ ನಿರ್ಣಯವನ್ನು ಕೈಬಿಡಬೇಕೆಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಒತ್ತಾಯಿಸಿದ್ದಾರೆ.
ಇಂದು ಹಳಿತಪ್ಪಿರುವ ಅರ್ಥವ್ಯವಸ್ಥೆಯನ್ನು ಮರಳಿ ಅಭಿವೃದ್ಧಿಪಥದತ್ತ ಚಲಿಸುವಂತೆ ಮಾಡಲು ಕೇವಲ ಲಾಕ್ ಡೌನ್ ಸಡಿಲಿಕೆ ಉಪಾಯವಾಗುವುದಿಲ್ಲ. ಅದಕ್ಕೆ ಸಮಗ್ರವಾದ ಆರ್ಥಿಕ ಚೈತನ್ಯ ತುಂಬುವ ಭ್ರಷ್ಟಾಚಾರ ಮುಕ್ತ, ಪ್ರಾಮಾಣಿಕ, ನೈತಿಕ ಮನಸ್ಥಿತಿಯ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಜನತೆ ತಮ್ಮ ತಮ್ಮ ಉದ್ಯೋಗಗಳಲ್ಲಿ ಮರಳಿ ತೊಡಗಿ, ಎಂದಿನಂತೆ ತಮ್ಮ ಆದಾಯವನ್ನು ಕ್ರೋಢೀಕರಿಸಿಕೊಳ್ಳುವುದು ಕೇವಲ ಈ ಸಡಿಲಿಕೆಯಿಂದ ಸಾಧ್ಯವಾಗುವುದಿಲ್ಲ ಎಂದು ಎಚ್.ಕೆ.ಪಾಟೀಲ್ ತಮ್ಮ ವಿವರವಾದ ಪತ್ರದಲ್ಲಿ ಕಟುವಾದ ಶಬ್ದಗಳಿಂದ ಟೀಕಿಸಿದ್ದಾರೆ.
ಲಾಕ್ ಡೌನ್ ರಿಲೀಫ್: ಯಾವೆಲ್ಲ ಅಂಗಡಿಗಳು ಇಂದಿನಿಂದ ಓಪನ್.?
ಸುಳ್ಳು ಸಮರ್ಥನೆ
''ರಾಷ್ಟ್ರದ ಇತರೆಡೆ ಮತ್ತು ಪ್ರಪಂಚದ ಬೇರೆ ಬೇರೆ ಕಡೆ ಲಾಕ್ ಡೌನ್ ಇರುವುದರಿಂದ ನಮ್ಮ ಈ ಸಣ್ಣ ಕ್ರಮದಿಂದ ಆರ್ಥಿಕತೆಗೆ ಚೈತನ್ಯ ಸಿಗುತ್ತದೆ ಎಂಬುದು ಒಂದು ಸುಳ್ಳು ಸಮರ್ಥನೆಯಾದೀತು. ಬಿಡಿಎ ಸೈಟ್ ಗಳನ್ನು ಹರಾಜು ಮಾಡುವ ಮೂಲಕ, ಅಕ್ರಮ-ಸಕ್ರಮಗಳನ್ನು ಘೋಷಿಸುವ ಮೂಲಕ ಮತ್ತು ರಿಯಲ್ ಎಸ್ಟೇಟ್ ಚಟುವಟಿಕೆಗೆ ಅವಕಾಶ ನೀಡುವ ಮೂಲಕ ಸರ್ಕಾರಕ್ಕೆ, ಸಂಪನ್ಮೂಲ ಕ್ರೋಢೀಕರಣಕ್ಕೆ ತಾವು ಮುಂದಾಗಿದ್ದೀರಿ ಎಂದು ಪತ್ರಿಕೆಗಳಲ್ಲಿ ಓದಿದೆ. ಇಂತಹ ನಿರ್ಣಯ ಶ್ರೀಮಂತ ವರ್ಗದ ಪರವೇ ಹೊರತು, ಆರ್ಥಿಕ ದುಸ್ಥಿತಿಯಿಂದ ಬಳಲಿರುವ ಬಡವನಪರವಾಗುವುದೇ ಇಲ್ಲ. ನೀವು ಆರ್ಥಿಕ ಚೈತನ್ಯ ತುಂಬಬೇಕಾಗಿರುವುದು ಗಣಿಧಣಿಗಳಿಗಲ್ಲ, ರಿಯಲ್ ಎಸ್ಟೇಟ್ ಮಧ್ಯವರ್ತಿ ವ್ಯಾಪಾರಿಗಳಲ್ಲ, ರಾಜಕಾರಣಿಗಳು ಹೊಂದಿರುವ ಕಟ್ಟಡ ಸಂಕೀರ್ಣಗಳ ಬಾಡಿಗೆ ಬರಬೇಕೆಂಬ ಉದ್ದೇಶದಿಂದ ಐಟಿ-ಬಿಟಿ ಕಂಪನಿಗಳಿಗೆ ಲಾಕ್ ಡೌನ್ ಸಡಿಲಗೊಳಿಸುವ ನಿರ್ಧಾರ ಮೇಲ್ಮಧ್ಯಮ ವರ್ಗದವರಿಗೆ ಮತ್ತು ಸಿರಿವಂತರಿಗೆ ಮಾತ್ರ ಸಹಾಯವಾದೀತು. ಇಂತಹ ನಿರ್ಣಯಗಳಿಂದ ಇತಿಹಾಸದ ಪುಟದಲ್ಲಿ ಕರ್ನಾಟಕಕ್ಕೆ ತಾವು ದುರಂತಮಯ ಸನ್ನಿವೇಶ ತಂದೊಡ್ಡಿದ ಅಪಕೀರ್ತಿಗೆ ಪಾತ್ರರಾಗುತ್ತೀರಿ'' ಎಂದು ಎಚ್ಚರಿಸಿದ್ದಾರೆ.
ಸೋಂಕಿತರ ಪ್ರಕರಣಗಳ ಸಂಖ್ಯೆ ಜಾಸ್ತಿ ಆಗುತ್ತಿದೆ
ರಾಜ್ಯದಲ್ಲಿ ಲಾಕ್ ಡೌನ್ ಅನ್ನು ಮೇ 3, 2020ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ಪ್ರಕಟಿಸಿತು. ಆದರೆ, ಏಕಾಏಕಿ 22ನೇ ತಾರೀಖು ರಾತ್ರಿ ಈ ಲಾಕ್ ಡೌನ್ ಅನ್ನು ಸಡಿಲಗೊಳಿಸಲಾಗಿದೆ ಎಂದು ಘೋಷಣೆ ಮಾಡಲಾಯಿತು. ರಾಜ್ಯದಲ್ಲಿ ಈ ಲಾಕ್ ಡೌನ್ ಸಡಿಲಿಕೆ ನಂತರ ಬೆಂಗಳೂರು ಮತ್ತು ಇತರೆ ಕಡೆಗಳಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಾ ಹೋಗಿದೆ. ಈ ಸಾರಿ ಫಲಿತಾಂಶ ಪ್ರಕಟವಾಗಿ ಕೋವಿಡ್-19 ಪತ್ತೆಯಾದ ಪ್ರಕರಣಗಳಲ್ಲಿ ನಮ್ಮ ರಾಜ್ಯದಲ್ಲಿ ಸಾಮುದಾಯಿಕ ಹರಡುವಿಕೆ ಪ್ರಾರಂಭವಾಗಿದೆ ಎಂಬ ಭಾವನೆ ಗಟ್ಟಿಗೊಳ್ಳುತ್ತಿದೆ.
ಬೇಸರದ ಸುದ್ದಿ: ಛೇ.. ಮೊದಲ ಹಂತದಲ್ಲೇ ಕೊರೊನಾ ಔಷಧಿ ಫೇಲ್.!
ವಾಹನ ಸಂಚಾರಕ್ಕೆ ಅನುಮತಿ ಏಕೆ.?
ಲಾಕ್ ಡೌನ್ ಸಡಿಲಿಕೆ ಅಂತ ತೀರ್ಮಾನ ಜನತೆಯ ಸರ್ವಾಂಗೀಣ ಹಿತವನ್ನೂ ಸಂಪೂರ್ಣವಾಗಿ ಪರಿಗಣಿಸಿ ಸರ್ವಸಮ್ಮತವಾಗುವ ರೀತಿಯಲ್ಲಿ ನಿರ್ಣಯ ಕೈಗೊಳ್ಳಬೇಕಾದುದ್ದು ಸರ್ಕಾರದ ಕರ್ತವ್ಯವಾಗಿತ್ತು. ಆದರೆ ಸಂಪೂರ್ಣ ಲಾಕ್ ಡೌನ್ ಅನ್ನು ಸಡಿಲಗೊಳಿಸಿ ಬೆಂಗಳೂರಿನಂಥ ರೆಡ್ ಅಲರ್ಟ್ ಪ್ರದೇಶದಲ್ಲಿಯೇ ಹತ್ತಾರು ಲಕ್ಷ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಇಂದು ಬೆಂಗಳೂರಿನಲ್ಲಿ ಒಂದು ಗಂಟೆಗೆ 60-70 ಸಾವಿರ ವಾಹನಗಳು ಚಲಿಸುತ್ತಿವೆ ಎಂದು ನನಗೆ ಖಚಿತವಾದ ಮಾಹಿತಿ ಇದೆ. ಐದು ಲಕ್ಷ ಬೈಕ್ ಗಳು ರೋಡಿಗಿಳಿದಿವೆ ಎಂದು ಮಾಹಿತಿ ಇದೆ. ನಮ್ಮ ಬೆಂಗಳೂರು ನಗರ ಪೊಲೀಸರೇ ಎರಡು ದಿನಗಳಿಂದ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಿದ್ದಾರೆಂದು ತಿಳಿದಿದೆ.
ಸುಳ್ಳು ಸಮರ್ಥನೆ
ರಾಜ್ಯದಲ್ಲಿ ಇಲ್ಲಿಯವರೆಗೆ 22 ಏಪ್ರಿಲ್ 2020ಕ್ಕೆ 29,512 ಜನರನ್ನು ಪರೀಕ್ಷೆ ಮಾಡಲಾಗಿದೆ. 23 ಮತ್ತು 24ರಂದು ಕೈಗೊಂಡಿರುವ ಒಟ್ಟು ಪರೀಕ್ಷೆಗಳ ಸಂಖ್ಯೆ ಇನ್ನೂ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ. ನಮ್ಮ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಬೆನ್ನುಚಪ್ಪರಿಸಿಕೊಳ್ಳುತ್ತಿದೆ. ಇದು ಸುಳ್ಳು ಸಮರ್ಥನೆಯಾಗುತ್ತಿದೆ ಎಂದು ಎಚ್.ಕೆ.ಪಾಟೀಲ್ ಟೀಕಿಸಿದ್ದಾರೆ.
ಸತ್ಯವೇ ಬೇರೆ..
ಸತ್ಯವೇ ಬೇರೆ ಇರುವುದರಿಂದ, ರಾಜ್ಯದಲ್ಲಿ ಕ್ವಾರಂಟೈನ್ ಆಗಿರುವ ಕನಿಷ್ಠ ಮೂರು ಲಕ್ಷ ಜನರಲ್ಲಿ ಮೂವತ್ತು ಸಾವಿರ ಜನರನ್ನಷ್ಟೇ ಈವರೆಗೆ ಕೋವಿಡ್ ತಪಾಸಣೆಗೆ ಗುರಿಪಡಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ತಪಾಸಣೆಗಳೇ ನಡೆಯದೇ, ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ ಎಂಬುವುದಕ್ಕೆ ಯಾವುದೇ ವೈಜ್ಞಾನಿಕ, ತಾಂತ್ರಿಕ ಮತ್ತು ವೈದ್ಯಕೀಯ ಕಾರಣಗಳೇ ಇಲ್ಲ.
ವಾಪಸ್ ಪಡೆಯಿರಿ
ಮಹಾರಾಷ್ಟ್ರದಲ್ಲಿ 95,210 ಜನರನ್ನು, ತಮಿಳುನಾಡಿನಲ್ಲಿ 65,977, ಆಂಧ್ರಪ್ರದೇಶದಲ್ಲಿ 54,338, ಕೇರಳದಲ್ಲಿ 21,334, ತೆಲಂಗಾಣದಲ್ಲಿ 16,827, ಗುಜರಾತ್ನಲ್ಲಿ 42,384, ರಾಜಸ್ಥಾನದಲ್ಲಿ 74,484, ಮಧ್ಯಪ್ರದೇಶದಲ್ಲಿ 33,074, ಹರಿಯಾಣದಲ್ಲಿ 17,582, ಉತ್ತರಪ್ರದೇಶದಲ್ಲಿ 45,483 ಜನರನ್ನು ತಪಾಸಣೆಗೆ ಗುರಿಪಡಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ಲಾಕ್ ಡೌನ್ ಸಡಿಲಗೊಳಿಸುವ ತಮ್ಮ ತೀರ್ಮಾನ ದುರಂತಕ್ಕೆ ಆಹ್ವಾನ ನೀಡಿದಂತಾಗಿದೆ. ಆದ್ದರಿಂದ ತಕ್ಷಣವೇ ಈ ತೀರ್ಮಾನ ವಾಪಸ್ ಪಡೆಯಲು ಒತ್ತಾಯಿಸಿದ್ದಾರೆ.