3 ತಿಂಗಳಲ್ಲಿ 500 ಜನರಿಗೆ ಆಶ್ರಮ ಮನೆ ವಿತರಣೆ : ಎಚ್ ಕೆ ಪಾಟೀಲ್
ಬೆಂಗಳೂರು ಜೂನ್ 11, 2019: 3 ತಿಂಗಳ ಒಳಗಾಗಿ ಮೊದಲ ಹಂತದಲ್ಲಿ 500 ಜನರಿಗೆ ಆಶ್ರಯ ಯೋಜನೆಯ ಮನೆಗಳನ್ನು ವಿತರಿಸುವ ತೀರ್ಮಾನ ತಗೆದುಕೊಂಡಿದ್ದು, ಈ ನಿಟ್ಟಿನಲ್ಲಿ ಆಶ್ರಯ ಯೋಜನೆಯ ಮನೆಗಳ ನಿರ್ಮಾಣದ ಕಾರ್ಯವನ್ನು ಚುರುಕುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಮಾಜಿ ಸಚಿವ ಹಾಗೂ ಗದಗ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾದ ಎಚ್ ಕೆ ಪಾಟೀಲ್ ಹೇಳಿದ್ದಾರೆ.
ನಗರದ ಗಂಗಿಮಡಿಯಲ್ಲಿ ಆಶ್ರಯ ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 412 ಮನೆಗಳು ಫಿನಿಶಿಂಗ್ ಕಾರ್ಯವನ್ನು ಹೊರತುಪಡಿಸಿ ಪೂರ್ಣವಾಗಿವೆ. ಪ್ರತಿದಿನ 6 ಮನೆಗಳ ಮೌಲ್ಡಿಂಗ್ ಕಾರ್ಯ ನಡೆಯುತ್ತಿದೆ. ಈ ವೇಗವನ್ನು ಪ್ರತಿದಿನ 10 ಕ್ಕೆ ಏರಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುದ್ಧ ನೀರಿನ ದರ ಹೆಚ್ಚಳ, ಸರ್ಕಾರದ ವಿರುದ್ಧ ಎಚ್ಕೆ ಪಾಟೀಲ್ ಗರಂ
ಅಲ್ಲದೆ, ಫಿನಿಶಿಂಗ್ ಹಂತದಲ್ಲಿರುವ ಮನೆಗಳಿಗೆ ಬೇಕಾದ ಸಾಮಗ್ರಿಗಳನ್ನು ಅಂತಿಮಗೊಳಿಸಲು ರಾಜೀವ್ ಗಾಂಧಿ ನಿಗಮ ಹಾಗೂ ಸರಕಾರದ ಅನುಮತಿ ಪಡೆಯುವ ಅಗತ್ಯವಿದೆ. ಈ ಕೆಲಸಕ್ಕಾಗಿ ಈ ವಾರದಲ್ಲಿ ಬೆಂಗಳೂರಿಗೆ ಬರುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಅವರ ಜೊತೆಯಲ್ಲಿ ಅಗತ್ಯವಿರುವ ಮಂತ್ರಿಗಳು ಹಾಗೂ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಅಗತ್ಯವಿರುವ ಅನುಮತಿಗಳನ್ನು ಪಡೆದುಕೊಳ್ಳಲಾಗುವುದು ಎಂದು ಹೇಳಿದರು.
ಈಗಾಗಲೇ ಅಧಿಕಾರಿಗಳ ಸರ್ವೇ ನಡೆಸಿ 5123 ಜನ ಅರ್ಹರನ್ನು ಗುರುತಿಸಿದ್ದಾರೆ. ಮೊದಲಿಗೆ ಗುಡಿಸಿಲಿನಲ್ಲಿ ವಾಸಿಸುತ್ತಿರುವ ಜನರಿಗೆ ಆದ್ಯತೆಯನ್ನು ನೀಡಲಾಗುವುದು. ಹೊಸದಾಗಿ ಅರ್ಜಿ ಸಲ್ಲಿಸುವ ಜನರ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಅರ್ಜಿಗಳನ್ನು ನಿರಾಕರಿಸಿರುವ ಕಾರಣವನ್ನು ಜನರಿಗೆ ತಿಳಿಸಲಾಗುವುದು ಎಂದರು.
ಹಿಂದಿ ಭಾಷೆ ಹೇರಿಕೆ ವಿಚಾರ ಸರ್ವಪಕ್ಷ ಸಭೆ ಕರೆದರೆ ಸೂಕ್ತ: ಎಚ್ ಕೆ ಪಾಟೀಲ್
ಮನೆಗಳ ಹಂಚಿಕೆಯ ಜೊತೆಯಲ್ಲಿಯೇ ಅಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನೂ ಕೂಡಾ ಅಭಿವೃದ್ದಿಗೊಳಿಸಲಾಗುವುದು. ಮುಂದಿನ ಮೂರು ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಂಡು ಹಂಚಿಕೆಯನ್ನು ನಡೆಸುವ ಭರವಸೆಯನ್ನು ಇದೇ ವೇಳೆ ವ್ಯಕ್ತಪಡಿಸಿದರು.