ಪತ್ರಕರ್ತರು, ಶ್ರೀಸಾಮಾನ್ಯರ ಖಾಸಗೀತನಕ್ಕೆ ಗೌರವವಿಲ್ಲವೇ: ಎಚ್ಕೆ ಪಾಟೀಲ್ ಪ್ರಶ್ನೆ
ಬೆಂಗಳೂರು, ಆಗಸ್ಟ್ 21: ಕರ್ನಾಟಕದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರ ಆಡಳಿತ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಕದ್ದಾಲಿಕೆ ಪ್ರಕರಣವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ವಹಿಸಿದ್ದಾರೆ.
"ಪತ್ರಕರ್ತರು, ಶ್ರೀಸಾಮಾನ್ಯರ ದೂರವಾಣಿಗಳು ಕದ್ದಾಲಿಕೆಯಾಗಿದ್ದರೆ ಅವರ ಖಾಸಗಿತನಕ್ಕೆ ಧಕ್ಕೆಯಾಗಿದ್ದರೆ ಅದಕ್ಕೆ ಗೌರವವಿಲ್ಲವೇ" ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಎಚ್ ಕೆ ಪಾಟೀಲ್ ಪ್ರಶ್ನಿಸಿದ್ದಾರೆ.
ಆಗಸ್ಟ್ 2018 ರಿಂದ ನಡೆದಿರುವ ಫೋನ್ ಟ್ಯಾಪಿಂಗ್ ಬಗ್ಗೆ ಸಿಬಿಐ ತನಿಖೆ
ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಪತ್ರಕರ್ತರು ಮತ್ತು ಶ್ರೀಸಾಮಾನ್ಯರ ದೂರವಾಣಿಗಳು ಕದ್ದಾಲಿಕೆಯಾಗಿದ್ದರೆ ಅದನ್ನೂ ಸಹ ತನಿಖೆಯ ವ್ಯಾಪ್ತಿಗೆ ತರಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಎಡಿಯೂರಪ್ಪನವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ತನಿಖೆಯ ಸಂದರ್ಭದಲ್ಲಿ ಎಲ್ಲಾ ಸತ್ಯಗಳು ಹೊರಬರಬೇಕು. ನೀತಿಗೆಟ್ಟ ಅಕ್ರಮಗಳು, ಲಂಚ ಕೊಡಕೊಳ್ಳುವ ವ್ಯವಹಾರಗಳು, ರಾಜ್ಯದ್ರೋಹದ ಕೆಲಸಗಳು, ಕಾನೂನು ಬಾಹಿರ ಕೆಲಸಗಳು ಈ ಕದ್ದಾಲಿಕೆಯಿಂದ ಲಭ್ಯವಾಗಿರುವ ಮಾಹಿತಿಯ ಹಿನ್ನೆಲೆಯಲ್ಲಿ ಬಹಿರಂಗಗೊಂಡ ಗಂಭೀರವಾದ ಕ್ರಿಮಿನಲ್ ಪ್ರಕರಣಗಳು ಮತ್ತು ಅದರ ಭಾಗಿಯಾದ ಮತ್ತು ಅಂಥ ಅಪರಾಧಿಕ ಪ್ರಕರಣಗಳಿಗೆ ನೆರವು ನೀಡಿದ ವ್ಯಕ್ತಿಗಳ ವಿರುದ್ದ ಕಾನೂನು ಪ್ರಕಾರ ಕ್ರಮಗಳಾಗಬೇಕು.
ಕದ್ದಾಲಿಕೆಯಿಂದ ಬಹಿರಂಗಗೊಂಡ ಮಾಹಿತಿಯ ಗಂಭೀರತೆ
ರಾಜ್ಯದಲ್ಲಿ ಕದ್ದಾಲಿಕೆ ನಡೆಯಿತೋ ಇಲ್ಲವೋ ಎಂಬುದನ್ನು ತಿಳಿಯಲು ಮಾತ್ರ ಆಸಕ್ತಿಯಲ್ಲ. ಕದ್ದಾಲಿಕೆ ಮಾಡಿದವರ ತಪ್ಪು ಮಾತ್ರ ಎತ್ತಿ ತೋರುವುದು ಸರ್ಕಾರದ ಉದ್ದೇಶವಾಗಬಾರದು. ಕದ್ದಾಲಿಕೆಯಿಂದ ಬಹಿರಂಗಗೊಂಡ ಮಾಹಿತಿಯ ಗಂಭೀರತೆಯ ಆಧಾರದ ಮೇಲೆ ಅದೂ ಸಹ ತನಿಖೆಯ ವ್ಯಾಪ್ತಿಗೆ ಒಳಪಡಬೇಕು.
ಖಾಸಗಿತನದ ಹಕ್ಕನ್ನು ಕಸಿದುಕೊಳ್ಳುವ ನೇರವಾದ ಪ್ರಯತ್ನ
ದೂರವಾಣಿ ಕದ್ದಾಲಿಕೆಯಂತಹ ಆರೋಪಗಳು ಬಹು ಗಂಭೀರವಾದ ದೂರಗಾಮಿ ಪರಿಣಾಮಗಳನ್ನುಂಟು ಮಾಡುವುದರಿಂದ ಇಂಥ ಆರೋಪಗಳ ಎಲ್ಲ ಆಯಾಮಗಳು ತನಿಖೆಯ ವ್ಯಾಪ್ತಿಗೊಳಪಡಬೇಕು. ವ್ಯಕ್ತಿಯೊಬ್ಬರ ಖಾಸಗಿತನದಲ್ಲಿ ನೇರವಾದ ಮಧ್ಯಪ್ರವೇಶ ಶ್ರೀಸಾಮಾನ್ಯನ ಖಾಸಗಿತನದ ಹಕ್ಕನ್ನು ಕಸಿದುಕೊಳ್ಳುವ ನೇರವಾದ ಪ್ರಯತ್ನ ಇದಾಗುತ್ತದೆ.
ಪ್ರವಾಹದ ಕಡೆ ಗಮನ ಕೊಡಿ, ಕದ್ದಾಲಿಕೆ ಮಹತ್ವ ಬೇಡ: ದೇವೇಗೌಡ
ಸತ್ಯ ಸಾರ್ವಜನಿಕರಿಗೆ ಲಭ್ಯವಾಗಬೇಕು
ಇಂತಹ ಕದ್ದಾಲಿಕೆ ನಡೆದಿದ್ದರೆ ಅಂಥ ಸಂದರ್ಭದಲ್ಲಿ ದೊರಕಿದ ಮಾಹಿತಿಯ ಹಿನ್ನೆಲೆಯಲ್ಲಿ ಸಂಭವಿಸಿರುವ ಅಪರಾಧ ಪ್ರಕರಣಗಳು ತನಿಖೆಗೆ ಒಳಪಡಬೇಕು. ಸತ್ಯ ಸಾರ್ವಜನಿಕರಿಗೆ ಲಭ್ಯವಾಗಬೇಕು. ತನ್ಮೂಲಕ ಸಮಾಜದಲ್ಲಿ ಸ್ವಾಸ್ಥ್ಯವನ್ನು ಕಾಪಾಡುವ ಕ್ರಮಗಳಿಗೆ ಇಂಬು ಕೊಡಬೇಕು. ಇಂಥ ತನಿಖೆಗಳು ಕೇವಲ ಸಂಕುಚಿತ ಉದ್ದೇಶವನ್ನಿಟ್ಟುಕೊಂಡು ರಾಜಕೀಯ ಪ್ರತಿಕಾರದ ಕ್ರಮಗಳಾಗಿ ಬಳಕೆಯಾಗಬಾರದು.
|
ಕಾರಣೀಕರ್ತರಾದ ಅಧಿಕಾರಿಗಳಿಗೆ ಸೂಕ್ತವಾದ ಶಿಕ್ಷೆ
ಬದಲಿಗೆ ನಿಜವಾಗಿ ನಡೆದಿರುವ ಅಪರಾಧಗಳು ನೀತಿಗೆಟ್ಟ ಕ್ರಮಗಳು ಮುಂತಾದವುಗಳು ತನಿಖೆಯಾಗಿ ಇವುಗಳಲ್ಲಿ ಭಾಗಿಯಾದವರಿಗೆ ಮತ್ತು ಕಾರಣೀಕರ್ತರಾದ ಅಧಿಕಾರಿಗಳಿಗೆ ಸೂಕ್ತವಾದ ಶಿಕ್ಷೆಯಾಗುವಲ್ಲಿ ಗಂಭೀರವಾದ ಪಾತ್ರವಹಿಸಬೇಕು. ಅದಕ್ಕಾಗಿ ಪರಿಣಾಮಕಾರಿಯಾದ ತನಿಖೆಯಾಗುವಂತೆ ಹೊರಡಿಸಿರುವ ಆದೇಶವನ್ನು ಮಾರ್ಪಾಡು ಮಾಡಿ ಎಲ್ಲ ಅಂಶಗಳನ್ನು ಒಳಗೊಂಡ ಆದೇಶ ಹೊರಡಿಸಬೇಕೆಂದು ಆಗ್ರಹಿಸುವೆ ಎಂದು ತಮ್ಮ ಎರಡು ಪುಟದ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಅಂತಿಮ ಮೊಳೆ ಹೊಡೆಯುವ ಬಿಜೆಪಿ ಮಾಸ್ಟರ್ ಪ್ಲ್ಯಾನ್?