ದೇವನಹಳ್ಳಿಯಲ್ಲಿ ಹೈಟೆಕ್ ಗ್ರಾಮ ಪಂಚಾಯಿತಿ!
ಬೆಂಗಳೂರು, ಫೆಬ್ರವರಿ 06: ಪಂಚಾಯಿತಿ ಎಂದರೆ ಸಾಮಾನ್ಯವಾಗಿ ಎಲ್ಲರ ಕಣ್ಮುಂದೆ ಬರೋದು ಒಂದು ಸಣ್ಣ ಕಚೇರಿ ಅದರಲ್ಲಿ ಎರಡು ಮೂರು ಟೇಬಲ್ ಹಾಗೂ ನಾಲ್ಕು ಚೇರ್. ಆದರೆ ಇತ್ತೀಚಿನ ದಿನಗಳಲ್ಲಿ ಪಂಚಾಯ್ತಿಗಳ ರೂಪುರೇಷೆಗಳೇ ಬದಲಾಗಿವೆ.
ಹೈಟೆಕ್ ಕಟ್ಟಡಗಳನ್ನು ಹೊಂದಿರುವ ಗ್ರಾಮಗಳಿವೆ. ಇನ್ನು ಕೆಲವು ಗ್ರಾಮಪಂಚಾಯ್ತಿಗಳು ಹೈಟೆಕ್ ಪಂಚಾಯ್ತಿಗಳಾಗಿ ಮಾರ್ಪಾಡಾಗುತ್ತಿವೆ. ಇದರ ಮಧ್ಯೆ ಗ್ರಾಮಪಂಚಾಯ್ತಿಗೆ ಕೋಟ್ಯಾಂತರ ರೂಪಾಯಿ ಟ್ಯಾಕ್ಸ್ ಬಂದರೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಏನೆಲ್ಲ ಮಾಡಬಹುದು ಎಂದು ಯೋಚನೆ ಮಾಡಿ.ಇದಕ್ಕೆ ಪ್ರತ್ಯಕ್ಷ ನಿದರ್ಶನವಾಗಿದೆ ಈ ಗ್ರಾಮಪಂಚಾಯ್ತಿ. ಅದು ಎಲ್ಲಿದೆ ಎಷ್ಟು ಟ್ಯಾಕ್ಸ್ ಬರುತ್ತೆ ಅಂತ ತಿಳಿದುಕೊಳ್ಳಬೇಕಾದರೆ ಈ ಸುದ್ದಿ ಓದಿ
ಗ್ರಾಮಪಂಚಾಯಿತಿ ಕಾರ್ಯಾಲಯಕ್ಕೆ ಅಳವಡಿಸಿರುವ ಸಿಸಿ ಕ್ಯಾಮರಾ ಹಾಗೂ ಸೋಲಾರ್ ವ್ಯವಸ್ಥೆ. ಗ್ರಾಮದ ಹಲವೆಡೆ ನಿರ್ಮಾಣವಾಗಿರುವ ಕಸ ತೊಟ್ಟಿಗಳು. ಸಂಗ್ರಹಣೆಯಾದ ಕಸವನ್ನು ಸಂಸ್ಕರಿಸಲು ನಿರ್ಮಾಣವಾಗಿರುವ ಕಸ ವಿಂಗಡಣ ಘಟಕ. ಈ ದೃಶ್ಯಗಳು ಕಂಡು ಬಂದದ್ದು ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ.
ಈ ಗ್ರಾಮಪಂಚಾಯಿತಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒಳಪಡಲಿದ್ದು, ವರ್ಷಕ್ಕೆ ಕೋಟ್ಯಾಂತರ ರೂಪಾಯಿ ಟ್ಯಾಕ್ಸ್ ಪಂಚಾಯಿತಿಗೆ ಬರುತ್ತದೆ. ಇದರಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 7 ಹಳ್ಳಿಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡಲ ಪಂಚಾಯಿತಿ ಮುಂದಾಗಿದೆ. ಇದಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರಕಾರಿ ಶಾಲೆಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಿದೆ. ಜೊತೆಗೆ ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡಲು ಸಾಕಷ್ಟು ಪ್ರಾಧಾನ್ಯತೆ ನೀಡಿದೆ.
ಹೈಟೆಕ್ ಪಂಚಾಯಿತಿಯಲ್ಲೇನಿದೆ: ಇನ್ನು ಇತರೆ ಪಂಚಾಯ್ತಿಗಳಂತಲ್ಲದೆ ಪಂಚಾಯಿತಿಯ ಕಾರ್ಯಾಲಯ ಸ್ವಲ್ಪ ಹೈಟೆಕ್ ಆಗಿದೆ. ಪಂಚಾಯಿತಿಯ ಪ್ರತಿ ಕೊಠಡಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸಿಸಿ ಕ್ಯಾಮರಾ ಕಾರ್ಯನಿರ್ವಹಿಸಲು ವಿದ್ಯುತ್ ಚ್ಛಕ್ತಿ ಬಳಸದೆ ಸೋಲಾರ್ನಿಂದ ಸಿಸಿ ಕ್ಯಾಮರಾ ಸೇರಿದಂತೆ ಕಾರ್ಯಾಲಯದಲ್ಲಿನ ಎಲ್ಲಾ ಉಪಕರಣಗಳು ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ.
ಮಾತ್ರವಲ್ಲ ಅಣ್ಣೇಶ್ವರ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡಲು ಕಸ ಸಂಗ್ರಹಿಸುವ ವಾಹನಗಳಿದ್ದು, ಇಂತಹ ಕಸವನ್ನು ವಿಂಗಡಣೆ ಮಾಡಿ ಸಂಸ್ಕರಿಸಲು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಸ್ಕರಣ ಘಟವನ್ನು ಸ್ಥಾಪಿಸಲಾಗಿದೆ.
ಈ ಕಸ ಸಂಸ್ಕರಣ ಘಟಕದಲ್ಲಿ ಸಂಸ್ಕರಿಸಿದ ಗೊಬ್ಬರವನ್ನು ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ಇಲ್ಲಿಯೇ ಎರೆ ಹುಳು ಗೊಬ್ಬರ ಸಹ ತಯಾರು ಮಾಡಲಾಗುತ್ತಿದ್ದು, ರೈತರಿಗೆ ಗೊಬ್ಬರ ವಿತರಣಾ ಕೇಂದ್ರವಾಗಿ ಸಹ ಗ್ರಾಮಪಂಚಾಯಿತಿ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ಪಂಚಾಯ್ತಿ ಕಾರ್ಯಾಲಯದಲ್ಲಿಯೇ ರೈತರಿಗೆ ಪಹಣಿ ಸೇರಿದಂತೆ ಭೂದಾಖಲೆಗಳು ಸಿಗುವಂತ ಸೌಲಭ್ಯ ಮಾಡಿರುವ ಅಣ್ಣೇಶ್ವರ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರು ದಿನನಿತ್ಯ ತಾಲೂಕು ಕಚೇರಿಗೆ ಅಲೆದಾಡುವ ಸಮಸ್ಯೆ ತಪ್ಪಿಸಿದ್ದಾರೆ.
ಒಟ್ಟಾರೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಾಲೂಕಿನಲ್ಲಿ ಸ್ಥಾಪನೆಯಾದ ನಂತರ ಅಣ್ಣೇಶ್ವರ ಗ್ರಾಮಪಂಚಾಯ್ತಿಗೆ 7 ಕೋಟಿ ಟ್ಯಾಕ್ಸ್ ಹಣ ಮಾತ್ರ ಪಾವತಿಸಿದ್ದು, ಬಂದ ಹಣದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದರಿಂದ ಇಡೀ ಜಿಲ್ಲೆಗೆ ಅಣ್ಣೇಶ್ವರ ಗ್ರಾಮಪಂಚಾಯ್ತಿ ಮಾದರಿ ಪಂಚಾಯ್ತಿಯಾಗಿ ಹೊರಹೊಮ್ಮಿದೆ. ಇಂತಹ ಪಂಚಾಯ್ತಿಯನ್ನು ನೋಡಲು ದೇಶ ವಿದೇಶಗಳಿಂದ ತಂಡಗಳು ಬಂದು ಹೋಗುತ್ತಿದ್ದು, ಕೆಐಎಎಲ್ ಕಟ್ಟಬೇಕಾದ ಇನ್ನುಳಿದ 107 ಕೋಟಿ ಟ್ಯಾಕ್ಸ್ ಕಟ್ಟಿದರೆ ಈ ಪಂಚಾಯಿತಿಯನ್ನು ದೇಶದಲ್ಲಿಯೇ ನಂಬರ್ ಓನ್ ಪಂಚಾಯಿತಿ ಮಾಡಬಹುದಾಗಿದೆ.