ಬಪ್ಪರೇ..! ತಂದೆಯ ಸರ್ಕಾರ ಉಳಿಯಲು ಭರ್ಜರಿ ಗಿಫ್ಟ್ ಕೊಟ್ಟ ಮಕ್ಕಳು
ಬೆಂಗಳೂರು, ಡಿಸೆಂಬರ್ 10: ರಾಜ್ಯದಲ್ಲಿ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದು ಬೀಗಿರುವ ಭಾರತೀಯ ಜನತಾ ಪಕ್ಷ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಭರ್ಜರಿ ಬಲ ಬಂದಂತಾಗಿದೆ.
ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಕಮಲವನ್ನು ಅರಳಿಸಿದ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. 2008 ರಲ್ಲಿ ಹಸಿರು ಶಾಲು ಹಾಕಿಕೊಂಡು ಕರ್ನಾಟಕದಲ್ಲಿ ಕೇಸರಿ ಸರ್ಕಾರ ರಚಿಸಿದ ಯಡಿಯೂರಪ್ಪನವರಿಗೆ ಇಂದು ಉಪ ಚುನಾವಣೆಯ ಫಲಿತಾಂಶ ಮತ್ತೊಂದು ಸಿಹಿ ಸುದ್ದಿ ನೀಡಿದೆ.
ಉಪಚುನಾವಣೆ: ಅಮಿತ್ ಶಾಗೆ ತನ್ನ ರಾಜಕೀಯ ವಿಲ್ ಪವರ್ ತೋರಿಸಿದ ಯಡಿಯೂರಪ್ಪ
ಕರ್ನಾಟಕದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಸೇಫ್ ಆದ ಸಂತೋಷ ಒಂದೆಡೆಯಾದರೆ, ತನ್ನ ಹುಟ್ಟೂರಿನಲ್ಲಿ ಮೊದಲ ಬಾರಿ ಗೆಲುವು ಸಾಧಿಸಿದ ಖುಷಿ ಮತ್ತೊಂದೆಡೆ. ಹೌದು.. ಸ್ವಕ್ಷೇತ್ರ ಕೆ.ಆರ್.ಪೇಟೆಯಲ್ಲಿ ಕಮಲ ಅರಳಿರುವುದು ಯಡಿಯೂರಪ್ಪ ಅವರಿಗೆ ಜೀವಮಾನದ ಸಾಧನೆಯಾಗಿದೆ.
ಯಡಿಯೂರಪ್ಪನವರ ಸ್ವಕ್ಷೇತ್ರ ಕೆ.ಆರ್.ಪೇಟೆ
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಉಳಿದೆಲ್ಲಾ ಕ್ಷೇತ್ರಗಳ ಗೆಲುವಿಗಿಂತಲೂ ಕೆ.ಆರ್.ಪೇಟೆ ಗೆಲುವು ತುಂಬಾ ಸಂತೋಷ ತಂದು ಕೊಟ್ಟಿದೆ. ಎಂದೂ ಗೆಲ್ಲದ ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿದೆ. ಇದಕ್ಕೆ ಪ್ರಮುಖ ಕಾರಣ ಯಡಿಯೂರಪ್ಪ ಅವರ ಪುತ್ರ.
ಮೂಲತಃ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆಯವರೇ ಆಗಿರುವ ಯಡಿಯೂರಪ್ಪ ಶಿಕಾರಿಪುರಕ್ಕೆ ವಲಸೆ ಹೋಗಿದ್ದರು. ತನ್ನ ೪೦ ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹದೊಂದು ಸಮಯ ಬರುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ.
ಚುನಾವಣಾ ತಂತ್ರಗಾರಿಕೆ ಮಾಡಿದ ಬಿಜೆಪಿ
ನನ್ನ ಜನ್ಮಸ್ಥಳದಲ್ಲಿ ಒಂದು ಸ್ಥಾನವನ್ನೂ ಗೆದ್ದಿಲ್ಲ ಎನ್ನುವ ಕೊರಗು ಇದೆ ಎಂದು ನಾರಾಯಣ ಗೌಡ ಪರ ಪ್ರಚಾರ ಭಾಷಣದಲ್ಲಿ ಹೇಳಿಕೊಂಡಿದ್ದರು. ಇದೀಗ ಅವರ ಕೊರಗಿಗೆ ಮುಕ್ತಿ ಸಿಕ್ಕಿದೆ. ಮತದಾರರ ಮನ ಕರಗಿದ್ದಲ್ಲದೇ, ಅವರ ಕೊರಗು ನೀಗಿಸಿದವರು ಅವರ ಪುತ್ರ ಎನ್ನುವುದು ವಿಶೇಷ.
ಸುಬ್ರಮಣಿಯನ್ ಸ್ವಾಮಿ ಹೊಗಳಿಕೆಗೆ ಭಾಜನರಾದ ಸಿಎಂ ಯಡಿಯೂರಪ್ಪ
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಸೆಯಂತೆ ಕೆ,ಆರ್,ಪೇಟೆಯಲ್ಲಿ ಬಿಜೆಪಿ ಗೆದ್ದಿದೆ. ಅಲ್ಲಿ ಗೆಲುವು ಅಷ್ಟು ಸರಳವಾಗಿರಲಿಲ್ಲ. ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜ್ ಅವರು ಕಠಿಣ ಸ್ಪರ್ಧೆಯೊಡ್ಡಿದ್ದರು. ಈ ಗೆಲುವಿನ ಹಿಂದೆ ಬಿಜೆಪಿ ದೊಡ್ಡ ಪರಿಶ್ರಮವಿದೆ. ತಂತ್ರಗಾರಿಕೆಯ ಫಲವಾಗಿ ಕಮಲ ಅರಳಿ ನಳನಳಿಸುತ್ತಿದೆ.
ತಂದೆಯ ಬಹುಕಾಲದ ಆಸೆ ಈಡೇರಿಸಿದ ವಿಜಯೇಂದ್ರ..
ತನ್ನ ಜನ್ಮಸ್ಥಾನದಲ್ಲೇ ಬಿಜೆಪಿ ಗೆಲ್ಲಿಸಲಿಲ್ಲ ಎನ್ನುವ ಕೊರಗು ಯಡಿಯೂರಪ್ಪ ಅವರಿಗೆ ಪದೇ ಪದೇ ಕಾಡುತ್ತಿತ್ತು. ಅದರ ಅನುಕಂಪದ ಅಲೆ ಕೆ.ಆರ್,ಪೇಟೆ ಕ್ಷೇತ್ರದ ತುಂಬೆಲ್ಲಾ ಸೃಷ್ಠಿಸಿ, ಅದಕ್ಕೆ ಪೂರಕವಾಗಿ ಪ್ರತ್ಯೇಕ ಪ್ರಣಾಳಿಕೆ ತಯಾರಿಸಿದವರು ಯಡಿಯೂರಪ್ಪ ಅವರ ಮಗ ವಿಜಯೇಂದ್ರ. ಕ್ಷೇತ್ರದ ಉಸ್ತುವಾರಿ ಘೋಷಣೆ ಮಾಡಿದಾಗಿನಿಂದಲೂ ಅಲ್ಲೇ ಠೀಕಾಣಿ ಹೂಡಿದ್ದರು.
ಅವರ ಜೊತೆಗೆ ಡಿಸಿಎಂ ಅಶ್ಥಥ್ ನಾರಾಯಣ ಇದ್ದು ತಂತ್ರಗಾರಿಕೆ ರೂಪಿಸಿದರು. ಸಿಎಂ ಯಡಿಯೂರಪ್ಪ ಅವರು ಕ್ಷೇತ್ರಕ್ಕೆ ಭರಪೂರ ಅನುದಾನ ಬಿಡುಗಡೆ ಮಾಡಿದರು. ವ್ಯವಸ್ಥಿತವಾಗಿ ಪ್ರಚಾರ ಮಾಡಿ ಪಕ್ಷ ಸಂಘಟನೆ ಮಾಡಿದರು. ಅಸಮಾಧಾನಗೊಂಡ ನಾಯರನ್ನೆಲ್ಲಾ ಮನವೊಲಿಸಿ ಅವರಿಗೆ 'ಎಲ್ಲ' ಸೌಲಭ್ಯವನ್ನು ನೀಡಿ ಒಗ್ಗೂಡಿಸಿದರು. ಹೀಗಾಗಿ ಆತಂಕದ ಸ್ಥಿತಿಯಲ್ಲಿದ್ದ ತಂದೆಯ ಸರ್ಕಾರಕ್ಕೆ ಕೊಡುಗೆ ನೀಡಿದರು.
ರಾಣೇಬೆನ್ನೂರ ಮತ್ತು ಹಿರೇಕೆರೂರಲ್ಲಿ ರಾಘವೇಂದ್ರ ಶೈನಿಂಗ್
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಇನ್ನೊಬ್ಬ ಪುತ್ರ ಬಿ.ವೈ.ರಾಘವೇಂದ್ರ ಅವರು ರಾಣೇಬೆನ್ನೂರು ಮತ್ತು ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವಂತೆ ನೋಡಿಕೊಂಡರು. ಎರಡೂ ಕ್ಷೇತ್ರಗಳಲ್ಲಿ ಸೈಲೆಂಟಾಗಿಯೇ ಆಖಾಡಕ್ಕಿಳಿದಿದ್ದ ರಾಘವೇಂದ್ರ ಅಲ್ಲಿ ಅತೃಪ್ತ ನಾಯಕರ ಮನವೊಲಿಸಿ ಪಕ್ಷ ಸಂಘಟನೆಗೆ ಒತ್ತು ನೀಡಿದರು.
ಶಿವಮೊಗ್ಗ ಸಂಸದರೂ ಆಗಿರುವ ರಾಘವೇಂದ್ರ ಅವರು ಹಿರೇಕೆರೂರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗಳ ನಾಮಪತ್ರ ವಾಪಸ್ ಪಡೆಯುವಂತೆ ನೋಡಿಕೊಂಡರು. ಇದರಿಂದ ಬಿ.ಸಿ.ಪಾಟೀಲ್ ಗೆಲುವಿನ ಹಾದಿ ಸುಗಮವಾಯಿತು. ಅದೇ ರೀತಿ ರಾಣೇಬೆನ್ನೂರಿನಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಸಹಕಾರದಿಂದ ಅಸಮಾಧಾನಿತರನ್ನು ಒಟ್ಟುಗೂಡಿಸಿ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಹೀಗಾಗಿ ತಂದೆಯ ನಗು ಮುಖದ ಹಿಂದೆ ಇಬ್ಬರು ಪುತ್ರರ ಪರಿಶ್ರಮವೂ ಇದೆ.