ವೈರಲ್ ಆಯ್ತು 'ನಿಜವಾದ ಕನ್ನಡಿಗ' ಭಾಗ -2 ವಿಡಿಯೋ
ಬೆಂಗಳೂರು, ಜುಲೈ 31: ಬೆಂಗಳೂರಿನ 'ನಮ್ಮ ಮೆಟ್ರೋ' ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಹಿಂದಿ ಬಳಕೆ ವಿರೋಧದ ಕುರಿತ ವಿವಾದ ಇನ್ನೂ ತಣ್ಣಗಾಗಿಲ್ಲ. ಹಿಂದಿ ಹೇರಿಕೆಯ ಕ್ರಮ ಕರ್ನಾಟಕದ ಬಹುಪಾಲು ಕನ್ನಡಿಗರ ಕನ್ನಡಾಭಿಮಾನ ಪ್ರಕಟಣೆಗೆ ವೇದಿಕೆಯಾಗಿದ್ದು ಸುಳ್ಳಲ್ಲ.
ಹೀಗಿರುವಾಗ ಪ್ರಶಾಂತ ಸಂಬರ್ಗಿ ಎಂಬ ಕನ್ನಡಿಗ ಉದ್ಯಮಿಯೊಬ್ಬರು 'ನಿಜವಾದ ಕನ್ನಡಿಗ' ಭಾಗ -2 ಎಂಬ ಹೆಸರಿನಲ್ಲಿ ಫೇಸ್ ಬುಕ್ ನಲ್ಲಿ 4 ನಿಮಿಷದ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದು, ಹಿಂದಿ ಹೇರಿಕೆಯಿಂದ ಕನ್ನಡದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಕಾಳಜಿ ಈ ವಿಡಿಯೋದಲ್ಲಿ ವ್ಯಕ್ತವಾಗಿದೆ.
ಹಿಂದಿ ಜನರಿಗೆ ಅರ್ಥವಾಗಲಿ ಎಂದು ಹಿಂದಿಯಲ್ಲೇ ಇವನ್ನೆಲ್ಲ ಮಾತನಾಡಿರುವ ಕನ್ನಡಿಗ ಪ್ರಶಾಂತ್ ಕೆಲಸ ಶ್ಲಾಘನೀಯ ಎಂದು ಹಲವರು ಕಮೆಂಟ್ ಮಾಡಿದ್ದು, ಇದುವರೆಗೂ ಈ ವಿಡಿಯೋವನ್ನು 20,934 ಜನ ವೀಕ್ಷಿಸಿದ್ದಾರೆ.
ಕನ್ನಡದ ಮೇಲಿನ ಆಕ್ರಮಣ ಸಹಿಸೋಲ್ಲ: ಸಿದ್ದು ಖಡಕ್ ಸಂದೇಶ
"ನಾನೊಬ್ಬ ಬೆಂಗಳೂರಿನ ಸಾಮಾನ್ಯ ಕನ್ನಡಿಗ. ನನ್ನ ಮಾತೃಭಾಷೆಯನ್ನು ಕೊಲ್ಲುತ್ತಿರುವ ಹಿಂದಿ ಹೇರಿಕೆಯನ್ನು, ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡಿಸಲು ನಾನು ತಮ್ಮ ಮುಂದೆ ಬಂದಿದ್ದೇನೆ" ಎನ್ನುತ್ತ ಮಾತು ಆರಂಭಿಸುವ ಪ್ರಶಾಂತ್, ಹಿಂದಿ ಹೇರಿಕೆ ಎಂದರೆ ಒಂದು ಪ್ರಾದೇಶಿಕ ಭಾಷೆಯನ್ನೂ, ಆ ಮೂಲಕ ಪ್ರಾದೇಶಿಕ ಸಂಸ್ಕೃತಿಯನ್ನೂ ಕೊಂದಹಾಗೆ ಎಂದಿದ್ದಾರೆ.
ಎಲ್ಲ ಭಾಷೆಗೂ ಹಿಂದಿಯಷ್ಟೇ ಸಮಾನ ಸ್ಥಾನ
"ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಸಹ ರಾಷ್ಟ್ರಭಾಷೆ ಹಿಂದಿಯಾದರೂ, ಹಿಂದಿಯಷ್ಟೇ ಸಮಾನ ಸ್ಥಾನವನ್ನು ಉಳಿದ ಪ್ರಾದೇಶಿಕ ಭಾಷೆಗಳಿಗೂ ನೀಡಬೇಕು ಎಂದಿದ್ದಾರೆ. ಒಂದು ದೇಶ- ಒಂದು ಭಾಷೆ ಎಂಬ ನೀತಿಯನ್ನು ನಮ್ಮ ಮೇಲೆ ಹೇರುತ್ತಿರುವುದೇಕೆ? ತಮ್ಮ ರಾಜಕೀಯ ಲಾಭಕ್ಕಾಗಿ 25 ಕೋಟಿ ದಕ್ಷಿಣ ಭಾರತೀಯರ ಮೇಲೆ ಹಿಂದಿ ಭಾಷೆ ಹೇರಲಾಗುತ್ತಿದೆ."
ಮಣ್ಣಿನ ಸೊಗಡು-ಸೊಬಗು
"ಪ್ರತಿಯೊಂದು ಪ್ರಾದೇಶಿಕ ಭಾಷೆಯಲ್ಲೂ ಆಯಾ ರಾಜ್ಯದ, ಮಣ್ಣಿನ ಸೊಗಡಿರುತ್ತದೆ, ಸೊಬಗಿರುತ್ತದೆ. ದೇಶದ ಪ್ರಗತಿಯ ಹೆಸರಿನಲ್ಲಿ ಆ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಕೊಂದುಬಿಟ್ಟರೆ ಆ ಪ್ರದೇಶದ ಸಂಸ್ಕೃತಿಯನ್ನೇ ಕೊಂದ ಹಾಗೆ. ನಮ್ಮ ಭಾರತ ದೇಶದ ಗುರುತು ವಿವಿಧತೆಯಲ್ಲಿ ಏಕತೆ. ಅದೇ ನಮ್ಮ ಹೆಗ್ಗಳಿಕೆ ಸಹ. ಆದರೆ ಹಿಂದಿ ದಬ್ಬಾಳಿಕೆಯಿಂದ ವೈವಿಧ್ಯತೆಯಲ್ಲಿ ಏಕತೆಯನ್ನು ಅಳಿಸಲಾಗುತ್ತಿದೆ. "
ಬಳಕೆಯಲ್ಲಿಲ್ಲದ ಭಾಷೆ ಸಾಯುತ್ತದೆ!
ಬಳಕೆಯಲ್ಲಿಲ್ಲದ ಭಾಷೆ ಸಾಯುತ್ತದೆ. ಒಂದು ಭಾಷೆಯನ್ನು ಜೀವಂತವಾಗಿಡುವುದು ಎಂದರೆ ಅದನ್ನು ಸದಾ ಮಾತನಾಡಬೇಕು. ಆದರೆ ಬೇರೆ ಭಾಷೆಗಳ ಅನಾಮತ್ತು ಹೇರಿಕೆಯಿಂದ ಕನ್ನಡ ಭಾಷೆ ಸೊರಗುತ್ತಿದೆ ಎಂಬ ಕಾಳಜಿ ಅವರ ವಿಡಿಯೋಲ್ಲಿ ವ್ಯಕ್ತವಾಗಿದೆ.
ಮೆಚ್ಚುಗೆಯ ಮಹಾಪೂರ
ಅವರ ಈ ವಿಡಿಯೋಕ್ಕೆ ಸಾಮಾಜಿಕ ಮಾಧ್ಯಮಗಳಲ್ಲೂ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ.ಎಷ್ಟೋ ಜನ ಕನ್ನಡದ ಪರ ಹುಸಿ ಕಾಳಜಿ ತೋರುತ್ತಾರೆ. ಆದರೆ ಪ್ರಶಾಂತ್ ಅವರು ಈ ವಿಡಿಯೋ ಮೂಲಕ ಕನ್ನಡದ ಘನತೆಯನ್ನು ಹೆಚ್ಚಿಸಿದ್ದಾರೆ, ಕನ್ನಡ ಗರಿಮೆ, ಕನ್ನಡಿಗರ ಹಿರಿಮೆ ಅರ್ಥವಾಗುವಂತೆ ಮಾಡಿದ್ದಾರೆ ಎಂದು ಅವರನ್ನು ಹಲವರು ಕೊಂಡಾಡಿದ್ದಾರೆ.