ಮಳೆಯಿಂದ ಹಾಳಾದ ರಸ್ತೆ ಅಭಿವೃದ್ಧಿಗೆ ಸಾವಿರ ಕೋಟಿ
ಮಂಗಳವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಾ.ಎಚ್.ಸಿ.ಮಹದೇವಪ್ಪ, ತೀವ್ರ ಮಳೆಯಿಂದಾಗಿ ರಾಜ್ಯದಲ್ಲಿ 1000 ಕಿ.ಮೀ. ಜಿಲ್ಲಾ ರಸ್ತೆ ಹಾಗೂ 177 ಕಿ.ಮೀ. ರಾಜ್ಯ ಹೆದ್ದಾರಿಗಳಿಗೆ ಹಾನಿಯಾಗಿವೆ. ಈ ರಸ್ತೆಗಳ ಗುಂಡಿ ಮಚ್ಚಿ ದುರಸ್ತಿ ಮಾಡಲು 1 ಸಾವಿರ ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಹಣಕಾಸು ಇಲಾಖೆಯ ಅನುಮೋದನೆ ದೊರಕಿದೆ ಎಂದರು.
ಕರ್ನಾಟಕದ ರಸ್ತೆ ಸಂಪರ್ಕ ಜಾಲವನ್ನು ಉತ್ತಮ ಪಡಿಸಲು ಕೆ-ಶಿಪ್ ಯೋಜನೆ ಅಡಿಯಲ್ಲಿ 7 ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವ ಯೋಜನೆ ಜಾರಿಯಲ್ಲಿದೆ. ಮೊದಲ ಹಂತದಲ್ಲಿ 3500 ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಅನಂತರದ ಹಂತದಲ್ಲಿ ಬಾಕಿ ಉಳಿದ 3500 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಎಚ್.ಸಿ.ಮಹದೇವಪ್ಪ ಮಾಹಿತಿ ನೀಡಿದರು.
ಕೆಲವು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಪರಿವರ್ತಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಈ ಪ್ರಸ್ತಾವನೆ ಒಪ್ಪಿಗೆ ನೀಡಿದರೆ, ರಾಜ್ಯ ಹೆದ್ದಾರಿಗಳಿಗೆ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟ ನೀಡಲು ಕೇಂದ್ರದಿಂದಲೂ ಅನುದಾನ ದೊರೆಯಲಿದೆ ಎಂದು ಮಹದೇವಪ್ಪ ಹೇಳಿದರು.
ಜಾಗೃತ ದಳ : ಲೋಕೋಪಯೋಗಿ ಇಲಾಖೆಯ ಕಳಪೆ ಕಾಮಗಾರಿಗಳಿಗೆ ತಡೆ ಹಾಕಲು ನಿರ್ಧರಿಸಲಾಗಿದೆ ಎಂದು ಎಚ್.ಸಿ.ಮಹದೇವಪ್ಪ ಹೇಳಿದರು. ಇಲಾಖೆಯ ಕಾಮಗಾರಿಗಳ ಗುಣಮಟ್ಟದ ಮೇಲೆ ನಿಗಾವಹಿಸಲು ಜಾಗೃತ ದಳವೊಂದನ್ನು ಇಲಾಖೆಯಲ್ಲಿ ಸ್ಥಾಪಿಸಲಾಗಿದೆ. ಟೆಂಡರ್ ನಿಯಮಗಳ ಉಲ್ಲಂಘನೆಯಾದರೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಎಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಹೊಣೆ ಮಾಡಲಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.