ಜೈಲಿಂದ ಹೆಬ್ಬಂಡೆಯಾಗಿ ಬಂದ ಡಿಕೆಶಿ, ಬಿಜೆಪಿ ನಾಯಕರಿಗೆ ತಪರಾಕಿ!
ನವದೆಹಲಿ, ಅಕ್ಟೋಬರ್ 26:"ಈ ಸಂದಿಗ್ಧ ಸಂದರ್ಭದಲ್ಲಿ ನನ್ನ ಪರವಾಗಿ ನಿಂತವರಿಗೂ, ನನ್ನನ್ನು ವಿರೋಧಿಸಿ ಬಂಡೆ ಚೂರು ಚೂರಾಯ್ತು ಎಂದವರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ" ಎನ್ನುತ್ತಲೇ ಡಿಕೆ ಶಿವಕುಮಾರ್ ಅವರು ಮಾತು ಆರಂಭಿಸಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ಜಾಮೀನು ಪಡೆದು ಬೆಂಗಳೂರಿಗೆ ವಾಪಸ್ ಬರುತ್ತಿದ್ದಂತೆಯೇ ಸುದ್ದಿಗೋಷ್ಠಿ ನಡೆಸಿದ್ದಾರೆ.
"ನಾನು ಕೆಪಿಸಿಸಿ ಕಚೇರಿಗೇ ಮೊದಲು ಬಂದಿರುವುದಕ್ಕೆ ಕಾರಣ, ನಾನು ಇದನ್ನು ದೇವಾಲಯ ಎಂದು ತಿಳಿದಿದ್ದೇನೆ. ಮೊದಲು ನಿಮ್ಗೆಲ್ಲರಿಗೂ ಧನ್ಯವಾದ ಹೇಳಬೇಕೆಂದು ಬಂದಿದ್ದೇನೆ. ಜೊತೆಗೆ ನನ್ನೊಂದಿಗೆ ನಿಂತ ಮಾಧ್ಯಮಗಳಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಅವರು ನನ್ನ ಬಗ್ಗೆ ಪರವಾಗಿಯೂ ಹೇಳಿರಬಹುದು. ವಿರೋಧವಾಗಿಯೂ ಹೇಳಿರಬಹುದು. ಬಂಡೆ ಚೂರು ಚೂರಾಯ್ತು ಎಂದೂ ಹೇಳಿರಬಹುದು. ಪ್ರಜಾಪ್ರಭುತ್ವದಲ್ಲಿ ಅವೆಲ್ಲಕ್ಕೂ ಅವಕಾಶವಿದೆ. ಅವೆಲ್ಲವನ್ನೂ ಸ್ವೀಕರಿಸಿಯೇ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ" ಎಂದು ಡಿಕೆ ಶಿವಕುಮಾರ್ ಹೇಳಿದರು.
ಕ್ಷಮೆ ಕೇಳಿದ ಡಿಕೆಶಿ
"ಜೈಲಿನಲ್ಲಿ ನಾನಿದ್ದಾಗ ಆಗಾಗ ನನ್ನ ನೋಡೋಕೆ ಬಂದವರು ಸಾಕಷ್ಟು ಜನ. ಪಕ್ಷಾಧ್ಯಕ್ಷರಾದ ಸೋನಿಯಾ ಗಾಂಧಿ ಅವರು ನನ್ನನ್ನು ನೋಡುವುದಕ್ಕೆ ಬಂದು ಮನನ್ನೊಂದಿಗೆ ನಲವತ್ತು ನಿಮಿಷ ಇದ್ದು ನನಗೆ ಸಾಕಷ್ಟು ಧೈರ್ಯ ತುಂಬಿ ಹೋದರು. ಅವರ ಉಪಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ. ಜೈಲಿನಲ್ಲಿ ಒಬ್ಬರೇ ಪದೇ ಪದೇ ಬರುವಂತಿರಲಿಲ್ಲ. ಆದ್ದರಿಂದಲೇ ನನ್ನನ್ನು ನೋಡಲು ದೆಹಲಿಗೆ ಬಂದ ಹಲವರು ಜೈಲಿಗೆ ಬರಲು ಅನುಮತಿ ದೊರಕಲಿಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ" ಎಂದು ಡಿಕೆ ಶಿವಕುಮಾರ್ ಹೇಳಿದ್ದರು.
"ನನ್ನನ್ನು ನೋಡುವುದಕ್ಕೆಂದು ಎಷ್ಟೋ ಜನ ರಸ್ತೆಗೆ ಬಂದಿದ್ರು, ದೆಹಲಿಗೂ ಬಂದಿದ್ದರು. ನನಗೆ ಒಳಿತಾಗಲಿ, ಜಾಮೀನು ಸಿಗಲಿ ಎಂಮದು ಪ್ರಾರ್ಥಿಸಿದ್ದರು. ನನಗೆ ಜಾಮೀನು ಸಸಿಗುವಲ್ಲಿ ವಕೀಲರು, ಕಾಂಗ್ರೆಸ್ ನಾಯಕರು ಶ್ರಮಿಸಿದರು. ಅವರೆಲ್ಲರ ಉಪಕಾರವನ್ನು ನಾನು ಹೇಗೆ ಮರೆಯಲಿ. ಇಲ್ಲಿ ಕುಳಿತು ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳುತ್ತ, ದೇವರಲ್ಲಿ ಒಂದೇ ಒಮದು ಪ್ರಾರ್ಥನೆ ಸಲ್ಲಿಸುತ್ತೇನೆ. ಈ ಜನರ ಋಣ ತೀರಿಸುವ ಶಕ್ತಿಯನ್ನು ನನಗೆ ಕೊಡಿ" ಎಂದು ಡಿಕೆಶಿ ಭಾವುಕರಾಗಿ ಹೇಳಿದರು.
ಹಿಂದೆ ಹೆಜ್ಜೆ ಇಡುವ ಪ್ರಶ್ನೆಯೇ ಇಲ್ಲ!
"ನಾನು ಯಾವ ತಪ್ಪನ್ನೂ ಮಾಡಿಲ್ಲ. ನಾನು ತಪ್ಪು ಮಾಡದಿರುವಾಗ ನನಗೆ ಯಾವ ಭಯವೂ ಇಲ್ಲ. ನ್ಯಾಯಾಲಯದ ಪೀಠದಿಂದ ಅನ್ಯಾಯದ ತೀರ್ಪು ಬರಬಾರದು ಎಂದು ನಾನು ಬಹಳ ಸಾರಿ ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ" ಎಂದು ಡಿಕೆ ಶಿವಕುಮಾರ್ ಹೇಳಿದರು.
"ನಾನು ಜೈಲಿಗೆ ಹೋದಾಗ ನನ್ನ ಮಕ್ಕಳು, ನನ್ ತಾಯಿ, ಪತ್ನಿ ಎಷ್ಟು ಸಂಕಟ ಅನುಭವಿಸಿದ್ದಾರೆ ಎಂಬುದು ನನಗೆ ಗೊತ್ತು. ನನ್ನ ಮನಸ್ಸಿಗೆ ಎಲ್ಲಕ್ಕಿಂತ ನೋವಾಗಿದ್ದೇ ಅದು. ಆ ಬಗ್ಗೆ ನಿಮಗೆಲ್ಲ ಇನ್ನೊಮ್ಮೆ ಹೇಳುತ್ತೇನೆ. ಆದರೆ ಒಂದಂತೂ ನೆನಪಿರಲಿ, ನಾನು ಹಿಂದೆ ಹೆಜ್ಜೆ ಹಾಕುವ ಪ್ರಶ್ನೆಯೇ ಇಲ್ಲ. ನಾನು ಹೋರಾಡುತ್ತೇನೆ. ನ್ಯಾಯ ಪಡೆಯುತ್ತೇನೆ" ಎಂದು ಡಿಕೆ ಶಿವಕುಮಾರ್ ಸವಾಲೆಸೆದರು.
ದಿನೇಶ್ ಗುಂಡೂರಾವ್ ಏನಂದ್ರು?
ಪತ್ರಿಕಾ ಗೋಷ್ಠಿಯಲ್ಲಿ ಮೊದಲಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಸರ್ಕಾರವನ್ನು, ಕಾಂಗ್ರೆಸ್ ನ ಪ್ರಭಾವಿ ನಾಯಕರನ್ನು ಟಾರ್ಗೆಟ್ ಮಾಡುವ ಕೆಲಸ ನಡೆಯುತ್ತಿತ್ತು. ಈ ಕೆಲಸವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿತ್ತು. ತನ್ನ ರಾಜಕೀಯ ಲಾಭಕ್ಕಾಗಿ ರಾಜಕೀಯ ನಾಯಕರ ಮೇಲೆ ಆದಾಯ ತೆರಿಗೆ ದಾಳಿ ನಡೆಸುವ ಅನಿವಾರ್ಯತೆ ಒಂದು ಪಕ್ಷಕ್ಕೆ ಬಂದಿದ್ದು ದುರಂತ ಎಂದರು.
ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಸರ್ಕಾರವನ್ನು, ಕಾಂಗ್ರೆಸ್ ನ ಪ್ರಭಾವಿ ನಾಯಕರನ್ನು ಟಾರ್ಗೆಟ್ ಮಾಡುವ ಕೆಲಸ ನಡೆಯುತ್ತಿತ್ತು. ಈ ಕೆಲಸವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿತ್ತು. ತನ್ನ ರಾಜಕೀಯ ಲಾಭಕ್ಕಾಗಿ ರಾಜಕೀಯ ನಾಯಕರ ಮೇಲೆ ಆದಾಯ ತೆರಿಗೆ ದಾಳಿ ನಡೆಸುವ ಅನಿವಾರ್ಯತೆ ಒಂದು ಪಕ್ಷಕ್ಕೆ ಬಂದಿದ್ದು ದುರಂತ.
"ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್ ಅನ್ನು ಟಾರ್ಗೆಟ್ ಮಾಡಲಾಗುತ್ತಿದೆ, ವಿಧಾನಸಭೆ ಚುನಾವಣೆಗೂ ಮುನ್ನವೇ ಪಕ್ಷದ ಪ್ರಭಾವಿ ಅಭ್ಯರ್ಥಿಗಳನ್ನು ಟಾರ್ಗೆಟ್ ಮಾಡಲಾಗಿತ್ತು. ಕೇವಲ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿ ಐಟಿ ದಾಳಿ ನಡೆಸಿ, ನಾಯಕರಿಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಗಿತ್ತು. ಸದನದಲ್ಲೇ ಈ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಿದ್ದರು. ಅವ್ರು ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದರೂ ಅವರನ್ನು ಬಂಧಿಸುವ ಅಗತ್ಯವೇನಿತ್ತು?" ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಮೊದಲಿಗಿಂತ ಗಟ್ಟಿಯಾಗಿ ಬಂದಿದ್ದಾರೆ
"ಡಿಕೆ ಶಿವಕುಮಾರ್ ಅವರಿಗೆ ಈ ಮೊದಲೇ ಜಾಮೀನು ಸಿಗಬೇಕಿತ್ತು. ಕೊನೆಗೂ ಸಿಕ್ಕಿದೆ. ಇದೀಗ ಡಿಕೆ ಶಸಿವಕುಮಾರ್ ಅವರು ಮೊದಲಿಗಿಂತ ಹೆಚ್ಚು ಗಟ್ಟಿಯಾಗಿ ವಾಪಸ್ ಬಂದಿದ್ದಾರೆ. ಅವರೊಂದಿಗೆ ಸದಾ ಜೊತೆಯಾಗಿ ನಿಂತು, ಧೈರ್ಯ ನೀಡುವ ಮೂಲಕ ಡಿಕೆ ಸುರೇಶ್ ಅವರು ಮತ್ತೊಂದು ಬಂಡೆಯಾಗಿದ್ದಾರೆ. ಅವರಿಗೂ, ಕಾಂಗ್ರೆಸ್ ನ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮುಂತಾದವರಿಗೆ ಧನ್ಯವಾದ ಅರ್ಪಿಸುತ್ತೇನೆ" ಎಂದು ಗುಂಡೂರಾವ್ ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಮುಖಂಡರಾದ ಮಾಜಿ ಸಚಿವ ಚಲುವರಾಯ ಸ್ವಾಮಿ, ಮಾಜಿ ಸಂಸದ ವಿ ಎಸ್ ಉಗ್ರಪ್ಪ, ಶಾಸಕ ಜೆ ಜಾರ್ಜ್, ಸಂಸದ ಡಿಕೆ ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.