ಸಾಕುಪ್ರಾಣಿ ಮಾರಾಟ ಮಾಡುವವರಿಗೂ ಲೈಸೆನ್ಸ್ ಕಡ್ಡಾಯ ಎಂದ ಹೈಕೋರ್ಟ್
ಬೆಂಗಳೂರು, ಫೆಬ್ರವರಿ.05: ಸಾಕುಪ್ರಾಣಿಗಳ ಬಗ್ಗೆ ನಿರ್ಲಕ್ಷ್ಯ ತೋರುವ ಅನಧಿಕೃತ ಪ್ರಾಣಿ ಸಂವರ್ಧನಾ ಕೇಂದ್ರಗಳ ವಿರುದ್ಧ ಕರ್ನಾಟಕ ಹೈಕೋರ್ಟ್ ಛಾಟಿ ಬೀಸಿದೆ. ಮೂರು ತಿಂಗಳ ಡೆಡ್ ಲೈನ್ ಕೊಟ್ಟಿದ್ದು, ಈ ಅವಧಿಯಲ್ಲೇ ಕಡ್ಡಾಯ ನೋಂದಣಿಗೆ ಖಡಕ್ ಸೂಚನೆ ನೀಡಿದೆ.
ರಾಜ್ಯದಲ್ಲಿ ಅನಧಿಕೃತ ಸಾಕುಪ್ರಾಣಿ ಸಂವರ್ಧನೆ ಕೇಂದ್ರಗಳಿಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಹೈಕೋರ್ಟ್ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ. ಮುಂದಿನ ಮೂರು ತಿಂಗಳಿನಲ್ಲಿ ಸಾಕುಪ್ರಾಣಿಗಳ ಸಂವರ್ಧನೆ ಕೇಂದ್ರಗಳ ನೋಂದಣಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸಾಕು ಪ್ರಾಣಿ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ನೀಡಿದೆ.
ವಿಶ್ವ ಶ್ವಾನ ದಿನ: ಮನುಷ್ಯನ ಅತ್ಯಾಪ್ತ ಸ್ನೇಹಿತನೆಂದರೆ ನಾಯಿ
ಕಂಪ್ಯಾಷನೇಟ್ ಅನ್ ಲಿಮಿಟೆಡ್ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ನೇತೃತ್ವದ ವಿಭಾಗೀಯ ಪೀಠವು ಪ್ರಾಣಿಹಿಂಸೆ ತಡೆ ಕಾನೂನಿನಡಿ ಆದೇಶವನ್ನು ಹೊರಡಿಸಿದೆ.
ತಳಿ ಸಂವರ್ಧನೆಗೂ ನೋಂದಣಿ ಕಡ್ಡಾಯ:
ಪ್ರಾಣಿಹಿಂಸೆ ತಡೆ ಕಾನೂನಿನಡಿ ಶ್ವಾನ ತಳಿ ಸಂವರ್ಧನೆಗೂ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಶ್ವಾನಗಳ ತಳಿ ಸಂವರ್ಧನೆ, ಮಾರಾಟಕ್ಕೂ ಮೊದಲೇ ಅನುಮತಿ ಪಡೆದುಕೊಂಡಿರಬೇಕು. ರಾಜ್ಯದ ಎಲ್ಲ ತಳಿ ಸಂವರ್ಧನಾ ಕೇಂದ್ರಗಳು ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಇದರ ಜತೆಗೆ ಸ್ಥಳೀಯ ಸಂಸ್ಥೆಯಿಂದ ಲೈಸೆನ್ಸ್ ಪಡೆಯುವುದು ಹಾಗೂ ಕಡ್ಡಾಯ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಅನಧಿಕೃತ ಸಾಕುಪ್ರಾಣಿ ಸಂವರ್ಧನೆ ಕೇಂದ್ರದಲ್ಲಿ ನಿರ್ಲಕ್ಷ್ಯ:
ಸಾಕುಪ್ರಾಣ ಸಂವೇಧನೆ ಕೇಂದ್ರಗಳು ಲಾಭಕ್ಕಾಗಿ ಅನಧಿಕೃತವಾಗಿ ಹುಟ್ಟಿಕೊಳ್ಳುತ್ತಿದ್ದು, ಇದರಲ್ಲಿ ಪ್ರಾಣಿಗಳ ಆರೋಗ್ಯ ಮತ್ತು ಸಾಕಾಣಿಕೆಯಲ್ಲಿ ದಿವ್ಯ ನಿರ್ಲಕ್ಷ್ಯ ತೋರಲಾಗುತ್ತಿತ್ತು. ಟ್ರಕ್, ಲಾರಿ, ಮರದ ಅಡಿಗಳಲ್ಲೇ ಪ್ರಾಣಿಗಳ ಸಾಕಾಣಿಕೆ ಮಾಡಲಾಗುತ್ತಿತ್ತು. ಪ್ರಾಣಿಗಳಿಗೆ ನೀಡುವ ಆಹಾರ, ನೀರು ಮತ್ತು ವೈದ್ಯಕೀಯ ಚಿಕಿತ್ಸೆ ಬಗ್ಗೆ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ಸಾಕುಪ್ರಾಣಿಗಳು ಸಾವನ್ನುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಮತ್ತು ಅನಧಿಕೃತ ಕೇಂದ್ರಗಳ ಅಂಕುಶಕ್ಕೆ ಹೈಕೋರ್ಟ್ ಈ ಕ್ರಮ ತೆಗೆದುಕೊಂಡಿದೆ.