ಕೆರೆಯೊಳಗೆ ಗಣೇಶನ ಮೂರ್ತಿ ವಿಸರ್ಜಿಸುವಂತಿಲ್ಲ:ಹೈಕೋರ್ಟ್
ಬೆಂಗಳೂರು, ಜೂನ್ 20: ಗಣೇಶನ ಮೂರ್ತಿಗಳನ್ನು ಬೆಂಗಳೂರಿನ ಕೆರೆಗಳಲ್ಲಿ ವಿಸರ್ಜಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಗಣೇಶನ ಮೂರ್ತಿ ಅಥವಾ ಇನ್ಯಾವುದೇ ಮೂರ್ತಿಗಳನ್ನು ಕೂಡ ವಿಸರ್ಜಿಸಬಾರದು.ಅದಕ್ಕಾಗಿ ಕೃತಕ ಕೆರೆಗಳನ್ನು ನಿರ್ಮಿಸಬೇಕು, ಈ ನಿಟ್ಟಿನಲ್ಲಿ ಬಿಬಿಎಂಪಿ ಕ್ರಮ ಕೈಗೊಳ್ಳಬೇಕೆಂದು ಹೇಳಿದೆ.
ಪಿಒಪಿ ಗಣೇಶ ಮೂರ್ತಿಯನ್ನೇ ಗೊಬ್ಬರವನ್ನಾಗಿ ಬದಲಿಸಿದ ಬೆಳಗಾವಿ ಯುವಕರು
ಮೂರ್ತಿಗಳ ವಿಸರ್ಜನೆ ಕುರಿತು ಕೇಂದ್ರ ಪರಿಸರ ಮಾಲಿನ್ಯ ಮಂಡಳಿ ಹೊರಡಿಸಿರುವ ಮಾರ್ಗಸೂಚಿ ಅನ್ವಯ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶವನ್ನು ಹೊರಡಿಸಬೇಕು.
ಬೆಂಗಳೂರಿನ ರಾಜಕಾಲುವೆಗಳನ್ನು ತೆರವುಗೊಳಿಸಬೇಕು ಎಂದು ಕೋರಿ ಸಿಟಿಜನ್ಸ್ ಆಕ್ಷನ್ ಗ್ರೂಪ್ ಕಾರ್ಯದರ್ಶಿ ನೊಮಿತಾ ಚಾಂಡಿ ಜೆಪಿ ನಗರದ ಡಾಲರ್ಟ್ ಕಾಲೊನಿಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಕಾರ್ಯದರ್ಶಿ ಗುಂಡಾ ಭಟ್ ಮತ್ತು ಸಮರ್ಪಣಾ ಸ್ವಯಂ ಸೇವಕ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾ. ಎಎಸ್ ಓಕಾ ಹಾಗೂ ನ್ಯಾ.ಎಚ್ಟಿ ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ.
ಪ್ರತಿ ವರ್ಷವೂ ಪಿಒಪಿ ಗಣೇಶನ ಮೂರ್ತಿಯನ್ನು ಕೆರೆಯೊಳಗೆ ವಿಸರ್ಜಿಸುವುದರಿಂದ ಜಲಚರಗಳಿಗೆ ತೊಂದರೆಯಾಗುತ್ತಿತ್ತು. ಸಾವಿರಾರು ಮೀನುಗಳು ಸಾವನ್ನಪ್ಪುತ್ತಿದ್ದವು.
ಆ ಮೂರ್ತಿಗಳು ಕರಗದೆ ಹಾಗೆಯೇ ಅವಶೇಷಗಳು ಉಳಿದಿರುತ್ತಿದ್ದವು. ಇದು ಪರಿಸರದ ಮೇಲೂ ಕೂಡ ದುಷ್ಪರಿಣಾಮ ಉಂಟುಮಾಡುವ ಕಾರಣ ಹೈಕೋರ್ಟ್ ಈ ಆದೇಶ ನೀಡಿದೆ.