ಏಳು ದಿನಗಳ ಪುಸ್ತಕ ಮೇಳಕ್ಕೆ ಹಸಿರು ನಿಶಾನೆ
ಬೆಂಗಳೂರು, ಫೆ.11: ನಗರದ ಅರಮನೆ ಮೈದಾನದಲ್ಲಿ ನಡೆಯುವ ಬೆಂಗಳೂರು ಪುಸ್ತಕೋತ್ಸವಕ್ಕೆ ಹಿಡಿದಿದ್ದ ಗ್ರಹಣ ಕಳೆದಿದೆ. ಪುಸ್ತಕ ಪ್ರೇಮಿಗಳಿಗೆ ಹೈಕೋರ್ಟಿನಿಂದ ಶುಭ ಸಂದೇಶ ಸಿಕ್ಕಿದೆ. ಪುಸ್ತಕ ಮೇಳಕ್ಕೆ ಅಡ್ಡವಾಗಿ ನಿಂತಿದ್ದ ಕರ್ನಾಟಕ ಸರ್ಕಾರಕ್ಕೆ ಇದರಿಂದ ತೀವ್ರ ಮುಖಭಂಗವಾಗಿದೆ.
ನಗರದ ಅರಮನೆ ಮೈದಾನದಲ್ಲಿ ಮಾ. 4ರಿಂದ 11ನೇ ಬೆಂಗಳೂರು ಪುಸ್ತಕೋತ್ಸವ ನಡೆಸಲು ಹೈಕೋರ್ಟ್ ಹಸಿರು ನಿಶಾನೆ ನೀಡಿದೆ. ಬೆಂಗಳೂರು ಪುಸ್ತಕ ಮಾರಾಟಗಾರರು ಹಾಗೂ ಮುದ್ರಣ ಮಾಲಿಕರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ 7 ದಿನಗಳ ಪುಸ್ತಕೋತ್ಸವಕ್ಕೆ ಅನುಮತಿ ನೀಡುವಂತೆ ಕರ್ನಾಟಕಕ್ಕೆ ಸರ್ಕಾರಕ್ಕೆ ಸೂಚಿಸಿದೆ. ಹೀಗಾಗಿ ಪುಸ್ತಕೋತ್ಸವ ಅವಧಿಯನ್ನು ಮೊಟಕುಗೊಳಿಸುವ ಸರ್ಕಾರದ ಪ್ರಯತ್ನವೂ ವಿಫಲವಾಗಿದೆ.
ಪುಸ್ತಕೋತ್ಸವದಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರೊಫೆಸರ್ ಹಾಗೂ ಲೇಖಕರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಸರ್ಕಾರ ಇಂಥ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು ಎಂದು ಅಭಿಪ್ರಾಯಪಟ್ಟಿರುವ ಪೀಠ, ಈ ಕಾರ್ಯಕ್ರಮದಿಂದ ಇತರ ಸಮಾರಂಭಗಳಿಗೆ ತೊಂದರೆಯಾಗದಂತೆ ಗಮನ ಹರಿಸಲು ಸೂಚನೆ ನೀಡಿದೆ.
2013ರ ನವೆಂಬರ್ ನಲ್ಲಿ 7ದಿನಗಳ ಕಾಲ ನಡೆಯಬೇಕಿದ್ದ ಪುಸ್ತಕೋತ್ಸವಕ್ಕೆ ಸರ್ಕಾರ ಏಳು ದಿನಗಳ ಕಾಲ ಅನುಮತಿ ನೀಡಲು ನಿರಾಕರಿಸಿತ್ತು. ಕೇವಲ ಮೂರು ದಿನಗಳಿಗೆ ಮಾತ್ರ ಅನುಮತಿ ನೀಡಲು ಮುಂದಾಗಿದ್ದು, ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಪುಸ್ತಕ ಪ್ರಕಾಶಕರ ಮತ್ತು ಮಾರಾಟಗಾರರ ಸಂಘ ಹಾಗೂ ಕ್ಲಬ್ ಕ್ಲಾಸ್ ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು.
ಹೈಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆ ಬೆಂಗಳೂರು ಪುಸ್ತಕ ಪ್ರಕಾಶಕರ ಮತ್ತು ಮಾರಾಟಗಾರರ ಸಂಘ ಹಾಗೂ ಕ್ಲಬ್ ಕ್ಲಾಸ್ ಸದಸ್ಯರು ಹರ್ಷವ್ಯಕ್ತಪಡಿಸಿದ್ದಾರೆ. ಪುಸ್ತಕೋತ್ಸವ ಕಾರ್ಯಕ್ರಮದ ನಿರ್ದೇಶಕ ಬಿ.ಎಸ್. ರಘುರಾಮ್, ಬೆಂಗಳೂರು ಪುಸ್ತಕ ಪ್ರಕಾಶಕರ ಮತ್ತು ಮಾರಾಟಗಾರರ ಸಂಘದ ಅಧ್ಯಕ್ಷ ಬಲರಾಮ್ ಸಾದ್ವಾನಿ, ಉಪಾಧ್ಯಕ್ಷ ನಿತೀನ್ ಷಾ, ಕಾರ್ಯದರ್ಶಿ ದೇವರು ಭಟ್, ಖಜಾಂಚಿ ಜೆ. ಉಲ್ಲಾಸ ಕುಮಾರ್ ಹಾಗೂ ಇನ್ನಿತರರು 11ನೇ ಪುಸ್ತಕ ಮೇಳಕ್ಕೆ ಸಜ್ಜಾಗುತ್ತಿದ್ದಾರೆ.
ಹೈಕೋರ್ಟ್ ನಿರ್ದೇಶನದಂತೆ ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಡಿಸೆಂಬರ್ 21, 2012ರಂದು ಅಂದಿನ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿತ್ತು. ಹೀಗಾಗಿ ಪುಸ್ತಕೋತ್ಸವವನ್ನು 10 ದಿನಗಳ ಬದಲಿಗೆ 3 ದಿನಕ್ಕೆ ಸೀಮಿತ ಗೊಳಿಸುವಂತೆ ಆಯೋಜಕರಿಗೆ ಸರ್ಕಾರ ಸೂಚಿಸಿತ್ತು. ಆದರೆ, ಈಗ ಪ್ರಕರಣ ಕೋರ್ಟ್ ಮೆಟ್ಟಿಲೇರಿ ಪುಸ್ತಕ ಪ್ರೇಮಿಗಳ ಪರವಾಗಿ ಆದೇಶ ಹೊರಬಿದ್ದಿದೆ.