ಟೋಲ್ : ನವಯುಗ ಸಂಸ್ಥೆಗೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಮೇ 15 : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರ ಟೋಲ್ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ನವಯುಗ ಟೋಲ್ ಸಂಸ್ಥೆಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ.
ಟೋಲ್ ದರ ಹೆಚ್ಚಳವನ್ನು ಪ್ರಶ್ನಿಸಿ ವಕೀಲ ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಗುರುವಾರ ನವಯುಗ ಟೋಲ್ ಸಂಸ್ಥೆ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿಗೊಳಿಸಿದೆ.
ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಕೀಲ ಅಮೃತೇಶ್ ಅವರು, ನವಯುಗ ಟೋಲ್ ಸಂಸ್ಥೆ ಯಾವ ಮಾನದಂಡ ಆಧಾರದ ಮೇಲೆ ಟೋಲ್ ದರವನ್ನು ಹೆಚ್ಚಳ ಮಾಡಿದೆ ಎಂದು ಸ್ಪಷ್ಟೀಕರಣ ನೀಡಬೇಕು ಎಂದು ಕೋರಿದ್ದಾರೆ. [ಟೋಲ್ ದರ 20 ರೂ ಕಡಿಮೆ ಆಗುತ್ತಾ?]
ಹೈಕೋರ್ಟ್ ನವಯುಗ ಟೋಲ್ ಸಂಸ್ಥೆಗೆ ನೋಟಿಸ್ ಜಾರಿಗೊಳಿಸುವ ಮೂಲಕ ಟೋಲ್ ವಿರುದ್ಧದ ಹೋರಾಟಕ್ಕೆ ಕಾನೂನು ಸ್ವರೂಪ ಸಿಕ್ಕಿದೆ. ಕನ್ನಡ ಪರ ಸಂಘಟನೆಗಳು, ವಾಹನ ಚಾಲಕರು ಕಳೆದ ಒಂದು ವಾರದಿಂದ ಟೋಲ್ ಹೆಚ್ಚಳದ ಕುರಿತು ಪ್ರತಿಭಟನೆ ನಡೆಸುತ್ತಿದ್ದಾರೆ.
ಟೋಲ್ ದರ ಕಡಿಮೆ ಮಾಡುವ ಕುರಿತು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು ನವಯುಗ ಟೋಲ್ ಸಂಸ್ಥೆಯೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದ್ದು, ಕೇಂದ್ರ ಸರ್ಕಾರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.
ಟೋಲ್ ದರ ಎಷ್ಟಿದೆ : ಸದ್ಯ ಹೆಚ್ಚಳವಾಗಿರುವ ಟೋಲ್ ದರದಂತೆ 22 ಕಿ.ಮೀ ಮಾರ್ಗದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಒಂದು ಬಾರಿ ಪ್ರಯಾಣಿಸಲು ಕಾರು, ಜೀಪು, ಹಗುರ ವಾಹನಗಳು 75 ರೂ., ಲಘು ವಾಣಿಜ್ಯ ವಾಹನ ಹಾಗೂ ಮಿನಿ ಬಸ್ಸುಗಳು 120 ರೂ., ಬಸ್, ಲಾರಿ ಹಾಗೂ ಎರಡು ಆ್ಯಕ್ಸಲ್ ವಾಹನಗಳು 235, ಮೂರರಿಂದ ಆರು ಆ್ಯಕ್ಸಲ್ ವಾಹನಗಳು 380 ರೂ. ಹಾಗೂ ಜೆಸಿಬಿಯಂತಹ ಬೃಹತ್ ಗಾತ್ರದ ವಾಹನಗಳು 470 ರೂ. ಶುಲ್ಕ ಪಾವತಿ ಮಾಡಬೇಕಾಗಿದೆ.