ಗಿಡ ನೆಡಲು ಕೋಟಿಗಟ್ಟಲೆ ಹಣ ಸಂಗ್ರಹ: ಸದ್ಗುರು ವಿರುದ್ಧ ದೂರು
Recommended Video
ಬೆಂಗಳೂರು, ಸೆಪ್ಟೆಂಬರ್ 19: 'ಕಾವೇರಿ ಕೂಗು' ಅಭಿಯಾನದಡಿ ಗಿಡಗಳನ್ನು ನೆಡಲು 42 ರೂ. ಸಂಗ್ರಹಿಸುತ್ತಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಫೌಂಡೇಷನ್ ವಿರುದ್ಧ ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಈ ಸಂಬಂಧ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ವಕೀಲ ಎ.ವಿ. ಅಮರನಾಥನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠವು ನೋಟಿಸ್ ಜಾರಿಗೊಳಿಸಿದೆ. ಜತೆಗೆ ಅರ್ಜಿಗೆ ಆಕ್ಷೇಪಣೆಯಿದ್ದರೆ ಮೂರು ವಾರಗಳಲ್ಲಿ ಸಲ್ಲಿಸುವಂತೆ ಸರ್ಕಾರ ಹಾಗೂ ಈಶ ಫೌಂಡೇಷನ್ಗೆ ಜಾರಿ ಮಾಡಿರುವ ನೋಟಿಸ್ನಲ್ಲಿ ಸೂಚಿಸಿದೆ.
ಜಗ್ಗಿ ವಾಸುದೇವ್ ಮತ್ತು ಬಿಎಸ್ ಯಡಿಯೂರಪ್ಪ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ರಾಜ್ಯ ಸರ್ಕಾರವು 'ಕಾವೇರಿ ಕೂಗು' ಅಭಿಯಾನಕ್ಕೆ ಎರಡು ಕೋಟಿ ಗಿಡಗಳನ್ನು ಉಚಿತವಾಗಿ ನೀಡುವುದಾಗಿ ಮಾಡಿದ ಘೋಷಣೆಯ ಕುರಿತು ಸಹ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿಯಾದ ಸದ್ಗುರು
'ಕಾವೇರಿ ಕೂಗು' ಅಭಿಯಾನಕ್ಕಾಗಿ ಈಶ ಫೌಂಡೇಷನ್ ಸಾರ್ವಜನಿಕರಿಂದ ಹಣ ಸಂಗ್ರಹಿಸುವುದನ್ನು ತಡೆಯುವಂತೆ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಎವಿ ಅಮರನಾಥನ್ ಕೋರಿದ್ದಾರೆ.
253 ಕೋಟಿ ಮರ ಬೆಳೆಸುವ ಯೋಜನೆ
ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ 253 ಕೋಟಿ ಮರಗಳನ್ನು ಬೆಳೆಸುವ ಯೋಜನೆಯನ್ನು ಈಶ ಫೌಂಡೇಷನ್ 'ಕಾವೇರಿ ಕೂಗು' ಅಭಿಯಾನದಡಿ ಹಮ್ಮಿಕೊಂಡಿದೆ. ಹೀಗೆ ನೆಡಲಾಗುವ ಪ್ರತಿ ಸಸಿಗೆ 42 ರೂ. ನಂತೆ ಜನರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ಇದಕ್ಕಾಗಿ ರಾಷ್ಟ್ರವ್ಯಾಪಿ ರಾಲಿಗಳನ್ನು ಕೂಡ ನಡೆಸಲಾಗಿದೆ.
ಹೀಗೆ ಜನರಿಂದ ಸಂಗ್ರಹಿಸಲಾಗುವ ಹಣದ ಪ್ರಮಾಣವು 10,626 ಕೋಟಿ ರೂ. ಮೀರಲಿದೆ. ನದಿ ರಕ್ಷಣೆಯ ಕಾರ್ಯ ಮತ್ತು ಮರ ಬೆಳೆಸುವ ವಿಚಾರಗಳಿಗೆ ತಮ್ಮ ಆಕ್ಷೇಪವಿಲ್ಲ. ಆದರೆ ಸರ್ಕಾರದ ಜಮೀನಿನಲ್ಲಿ ಗಿಡಗಳನ್ನು ನೆಡಲು ಜನರಿಂದ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಸೆ.1 ರಿಂದ ಸದ್ಗುರು ನೇತೃತ್ವದಲ್ಲಿ Rally for Rivers ಆರಂಭ
4 ಕೋಟಿ ಮರಗಳಿಗೆ ಹಣ ಸಂಗ್ರಹ
ಅನೇಕ ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಜತೆಗೆ ಒಂದು ಗಿಡಕ್ಕೆ 42 ರೂ. ನಂತೆ ದೇಣಿಗೆ ನೀಡುವಂತೆ ಕರೆ ನೀಡಿವೆ. ಬುಧವಾರದ ವೇಳೆಗೆ ಈಶ ವೆಬ್ಸೈಟ್ ನೀಡಿರುವ ಮಾಹಿತಿ ಪ್ರಕಾರ ಸುಮಾರು 4 ಕೋಟಿ ಮರಗಳನ್ನು ನೆಡಲು ಸಾಲುವಷ್ಟು ಹಣ ಸಂಗ್ರಹವಾಗಿದೆ. ವೆಬ್ಸೈಟ್ನಲ್ಲಿ ಮೂರು ಕ್ರೌಡ್ ಫಂಡಿಂಗ್ ಲಿಂಕ್ಗಳನ್ನು ನೀಡಲಾಗಿದ್ದು, 58 ಲಕ್ಷ ಸಂಗ್ರಹಿಸಲಾಗಿದೆ. ಈ ಹಣವು ವ್ಯಕ್ತಿಗಳಿಂದ ವೈಯಕ್ತಿಕವಾಗಿ ಸಂಗ್ರಹಿಸಲಾಗಿದೆಯೇ ಅಥವಾ ಕಂಪೆನಿಗಳು ಮತ್ತು ಸಂಸ್ಥೆಗಳಿಂದ ಸಂಗ್ರಹಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು 'ದಿ ನ್ಯೂಸ್ ಮಿನಿಟ್' ವರದಿ ಮಾಡಿದೆ.
ಸಂಗ್ರಹವಾಗುವುದು 10,626 ಕೋಟಿ ರೂ.
'ಕಾವೇರಿ ನದಿಯನ್ನು ಉಳಿಸಲು ಈಶ ಪ್ರತಿಷ್ಠಾನವು 253 ಕೋಟಿ ಮರಗಳನ್ನು ನೆಡಲು ಉದ್ದೇಶಿಸಿದೆ. ವರದಿಗಳ ಪ್ರಕಾರ ಒಂದು ಗಿಡ ನೆಡಲು ಈಶ ಪ್ರತಿಷ್ಠಾನವು ಸಾರ್ವಜನಿಕರಿಂದ 42 ರೂನಂತೆ ಹಣ ಸಂಗ್ರಹಿಸುತ್ತಿದೆ. ಇದರ ಅರ್ಥ ಈಶ ಪ್ರತಿಷ್ಠಾನವು ಸುಮಾರು 10,626 ಕೋಟಿ ರೂ ಸಂಗ್ರಹಿಸುತ್ತಿದೆ. ಈ ರೀತಿ ಸಾರ್ವಜನಿಕರ ಹಣವನ್ನು ಸಂಗ್ರಹಿಸುವುದು ತುಂಬಾ ಗೊಂದಲಕಾರಿಯಾಗಿದೆ' ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ಸರ್ಕಾರಿ ಭೂಮಿಯಲ್ಲಿ ಕೆಲಸ ಮಾಡಲು ಖಾಸಗಿ ಸಂಸ್ಥೆಯೊಂದು ಈ ರೀತಿ ಹಣ ಸಂಗ್ರಹಿಸಲು ಅವಕಾಶ ನೀಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ಮೈಸೂರಿಗೆ ಕಳೆನೀಡಿದ Rally for Rivers ಅಭಿಯಾನ
ಸಾಲುಮರದ ತಿಮ್ಮಕ್ಕ ಹಣ ಪಡೆಯದೆ ಮಾಡಿದ್ದಾರೆ
ಸಾಲುಮರದ ತಿಮ್ಮಕ್ಕ, ಜಾದವ್ ಪಾಯೆಂಗ್ ಅವರಂತಹ ವ್ಯಕ್ತಿಗಳು ಜನರಿಂದ ಯಾವುದೇ ಹಣ ಸಂಗ್ರಹಿಸದೆ ಮರಗಳನ್ನು ನೆಡುವ ಸೇವೆ ಸಲ್ಲಿಸಿದ್ದಾರೆ. ತುಮಕೂರು ಜಿಲ್ಲೆಯ ಹುಲಿಕಲ್ ಮತ್ತು ಕುಡೂರು ಗ್ರಾಮದ ನಡುದಿನ ನಾಲ್ಕು ಕಿಮೀ ಹೆದ್ದಾರಿಯ ಎರಡೂ ಬದಿ 383 ಆಲದಮರಗಳನ್ನು ನೆಟ್ಟು ಬೆಳೆಸುವ ಮೂಲಕ 106 ವರ್ಷದ ಸಾಲುಮರದ ತಿಮ್ಮಕ್ಕ ಜನಪ್ರಿಯರಾಗಿದ್ದಾರೆ. ಅಸ್ಸಾಂನ ಬ್ರಹ್ಮಪುತ್ರ ನದಿಯ ಸಮೀಪದ 500 ಎಕರೆ ಒಣಪ್ರದೇಶದಲ್ಲಿ ಗಿಡಗಳನ್ನು ಬೆಳೆಸಿದ ಖ್ಯಾತಿ ಪಾಯೆಂಗ್ ಅವರದು. ಇವರೆಲ್ಲ ಉಚಿತ ಸೇವೆ ಸಲ್ಲಿಸಿರುವಾಗ ಈ ರೀತಿ ಹಣ ಸಂಗ್ರವೇಕೆ ಎಂದು ಅವರು ಕೇಳಿದ್ದಾರೆ.
ಮೊದಲು ಯೋಜನೆ ಬಗ್ಗೆ ಅಧ್ಯಯನ ನಡೆಯಲಿ
ಕಾವೇರಿ ಜಲಾನಯನ ಪ್ರದೇಶದಲ್ಲಿ ತಾನು ಅಧ್ಯಯನ ನಡೆಸಿರುವುದಾಗಿ ಈಶ ಪ್ರತಿಷ್ಠಾನ ಹೇಳಿಕೊಂಡಿದೆ. ಆದರೆ ಈ ಅಧ್ಯಯನದ ವರದಿಗಳನ್ನು ಕರ್ನಾಟಕ ಸರ್ಕಾರ ಪರಿಶೀಲಿಸಿದ ಬಳಿಕವೇ ಸಸಿಗಳನ್ನು ದೇಣಿಗೆ ನೀಡಲು ಅನುಮತಿ ನೀಡಿದೆಯೇ? ಎಂದು ಪ್ರಶ್ನಿಸಿದ್ದಾರೆ.
'ಸರ್ಕಾರವು ಈ ಬೃಹತ್ ಯೋಜನೆಗೆ ಅನುಮತಿ ನೀಡುವ ಮೊದಲು ಅದರ ಬಗ್ಗೆ ಅಧ್ಯಯನ ನಡೆಸಬೇಕು. ಅದರ ಸಾಧಕ ಬಾದಕಗಳ ಕುರಿತು ಸಮಾಲೋಚನೆ ಮಾಡಬೇಕು' ಎಂದು ಅವರು ಒತ್ತಾಯಿಸಿದ್ದಾರೆ.
ಕಾವೇರಿ ಕೂಗು ಅಭಿಯಾನದ ಮೂಲಕ ಕಾವೇರಿಯ ಹುಟ್ಟೂರಾದ ತಲಕಾವೇರಿಯಿಂದ ತಿರುವರೂರುವರೆಗಿನ 639.1 ಕಿ.ಮೀ. ವ್ಯಾಪ್ತಿಯಲ್ಲಿ ಮರಗಳನ್ನು ನೆಡುವುದು ಈ ಯೋಜನೆಯ ಉದ್ದೇಶ. ಅದಕ್ಕಾಗಿ ಸೆ. 3ರಂದು ಬೈಕ್ ರಾಲಿಗೆ ಚಾಲನೆ ನೀಡಲಾಗಿತ್ತು.