ಬಡವರಿಗೆ ಆಹಾರ ಭದ್ರತೆ ಒದಗಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು, ಮೇ. 11: ಕೊರೊನಾ ಲಾಕ್ ಡೌನ್ನಿಂದಾಗಿ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಬಡವರ ರಕ್ಷಣೆಗೆ ಹೈಕೋರ್ಟ್ ಮುಂದಾಗಿದೆ. ರಾಜ್ಯದ ಬಡವರಿಗೆ ಆಹಾರ ಭದ್ರತೆ ಒದಗಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಆಕ್ಸಿಜನ್ ಪೂರೈಕೆ ಸಂಬಂಧ ಮಹತ್ವದ ಆದೇಶ ಮಾಡುವ ಮೂಲಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿತ್ತು. ಹೈಕೋರ್ಟ್ ಆದೇಶವನ್ನು ಕೂಡ ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಇದೀಗ ಹಸಿದವರಿಗೆ ಅನ್ನ ಒದಗಿಸುವಂತೆ ಹೈಕೋರ್ಟ್ ಪೀಠ ಸರ್ಕಾರಕ್ಕೆ ಚಾಟಿ ಬೀಸಿದೆ.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿಕೊಂಡಿರುವ ಹೈಕೋರ್ಟ್ ಪೀಠ ಇಂದು ಕೂಡ ವಿಚಾರಣೆ ನಡೆಸಿತು. ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಉಚಿತ ಆಹಾರ ವಿತರಣೆ ಮಾಡುತ್ತೇವೆ. ಮೂರು ಹೊತ್ತು ಉಚಿತ ಆಹಾರವನ್ನು ಬಡವರಿಗೆ ಒದಗಿಸಲಾಗುವುದು. ಬಡವರಿಗೆ ಹತ್ತು ಕೆ.ಜಿ. ಪಡಿತರ ಒದಗಿಸುವ ಜತೆಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅಹಾರ ಧಾನ್ಯ ವಿತರಣೆ ಮಾಡಲಾಗುವುದು ಎಂದು ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಪ್ರಮಾಣ ಪತ್ರ ಸಲ್ಲಿಸಿದರು. ವಿಚಾರಣೆ ನಡೆಸಿದ ಪೀಠ ದಿನಗೂಲಿ ಕಾರ್ಮಿಕರಿಗೆ ಆಹಾರ ಭದ್ರತೆ ಒದಗಿಸಬೇಕು. ಗ್ರಾಮಾಂತರ ಪ್ರದೇಶದ ಜನರಿಗೆ ಆಹಾರ ಭದ್ರತೆ ಒದಗಿಸುವ ಜತೆಗೆ ದಾಸೋಹ ಸಹಾಯವಾಣಿ ಮರು ಆರಂಭಿಸಲು ಹೈಕೋರ್ಟ್ ಪೀಠ ಸೂಚನೆ ನೀಡಿದೆ.
ರಾಜ್ಯದಲ್ಲಿ ಆಕ್ಸಿಜನ್ ಕೊರತೆಯುಂಟಾಗಿ ಕೋವಿಡ್ ರೋಗಿಗಳು ಸರಣಿ ಸಾವುಗಳು ವರದಿಯಾಗಿದ್ದವು. ಈ ಕುರಿತು ಸ್ವಯಂ ಪ್ರೇರಿತ ಪ್ರಕರಣ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ರಾಜ್ಯಕ್ಕೆ ಅಗತ್ಯ ಇರುವಷ್ಟು ಆಕ್ಸಿಜನ್ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್ ಆದೇಶ ವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಈ ಮೂಲಕ ರಾಜ್ಯಕ್ಕೆ ಆಕ್ಸಿಜನ್ ಕೊರತೆ ಮೂಲಕ ಎದುರಾಗಿದ್ದ ಗಂಡಾಂತರವನ್ನು ಹೈಕೋರ್ಟ್ ತಪ್ಪಿಸಿತ್ತು. ಇದೀಗ ಆಹಾರ ಭದ್ರತೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿರುವುದು ಬಡವರಿಗೆ ಆಹಾರ ಒದಗಿಸಲು ಸರ್ಕಾರ ಕ್ರಮ ಜರುಗಿಸಬೇಕಾದ ಅನಿವಾರ್ಯತೆ ಎದುರಾಗಿದೆ.
Recommended Video