ಸಿಗ್ನಲ್ನಲ್ಲಿ ಮಾರಾಟ ಮಾಡುವ ಮಕ್ಕಳ ಸಮೀಕ್ಷೆ ಮಾಡಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ನವೆಂಬರ್ 20: ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ವಿವಿಧ ಪ್ರಮುಖ ಪ್ರದೇಶಗಳ ಸಿಗ್ನಲ್ಗಳಲ್ಲಿ ಹೂವು ಮಾರಾಟ ಮಾಡುವ ಪುಟ್ಟ ಮಕ್ಕಳನ್ನು ನೋಡಿರಬಹುದು. ಈ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ನಗರದ ಟ್ರಾಫಿಕ್ ಸಿಗ್ನಲ್ಗಳಲ್ಲಿ ಹೂವುಗಳನ್ನು ಮತ್ತು ಇತರೆ ಸಾಮಗ್ರಿಗಳನ್ನು ಮಾರಾಟ ಮಾಡುವ ಮಕ್ಕಳ ಕುರಿತು ಸಮೀಕ್ಷೆ ನಡೆಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.
ಗ್ರಾಮ ಪಂಚಾಯಿತಿ ಚುನಾವಣೆ: ದಿನಾಂಕ ನಿಗದಿಗೆ ಹೈಕೋರ್ಟ್ ಸೂಚನೆ
ಲೆಟ್ಜಿಕಿಟ್ ಪ್ರತಿಷ್ಠಾನ ಎಂಬ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಒಳಪಡಿಸಿತು. ಟ್ರಾಫಿಕ್ ಜಂಕ್ಷನ್ಗಳಲ್ಲಿ ಆಟಿಕೆಗಳು, ಹೂವು ಮತ್ತು ಇತರೆ ವಸ್ತುಗಳನ್ನು ಮಾರಾಟ ಮಾಡುವಂತೆ ಮಕ್ಕಳನ್ನು ಬಲವಂತಪಡಿಸಲಾಗುತ್ತಿದೆ ಎಂದು ಪ್ರತಿಷ್ಠಾನ ಆರೋಪಿಸಿದೆ. ಈ ಅಭ್ಯಾಸವನ್ನು ಅಂತ್ಯಗೊಳಿಸುವುದು ಅಗತ್ಯವಾಗಿದೆ ಎಂದಿರುವ ಅದು, ಮಕ್ಕಳನ್ನು ಬಲವಂತವಾಗಿ ಕೆಲಸಕ್ಕೆ ನೂಕಲಾಗುತ್ತಿದೆ ಎಂದು ಆರೋಪಿಸಿದೆ.
ಬಿಬಿಎಂಪಿಯು ಸಮೀಕ್ಷೆ ನಡೆಸಿ ತನ್ನ ವರದಿ ಸಲ್ಲಿಸಿದ ಬಳಿಕ ಜ್ಯುವೆನಿಲೆ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ಆದೇಶ ಹೊರಡಿಸುವುದಾಗಿ ಹೈಕೋರ್ಟ್ ತಿಳಿಸಿದೆ.
ಅರ್ಜಿಯನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎಎಸ್ ಒಕಾ, ಈ ಪಿಎಐಎಲ್ ಮಹತ್ವದ ವಿಚಾರಗಳನ್ನು ಎತ್ತಿದೆ. ಈ ಮಕ್ಕಳು 'ಅಗತ್ಯವಿರುವ ಮಕ್ಕಳು' ವಿಭಾಗದಲ್ಲಿ ಬರುತ್ತಾರೆ, ಹೀಗಾಗಿ ಇವುಗಳನ್ನು ಬಾಲಾಪರಾಧ ನ್ಯಾಯ ಕಾಯ್ದೆಯಡಿ ಪರಿಗಣಿಸಬೇಕು ಎಂದರು. ಜತೆಗೆ ಕರ್ನಾಟಕ ಭಿಕ್ಷೆ ನಿಷೇಧ ಕಾಯ್ದೆಯ ಜಾರಿಯನ್ನೂ ಇದರಲ್ಲಿ ನೋಡಬೇಕಿದೆ ಎಂದು ಹೇಳಿದರು.
'ಮಕ್ಕಳನ್ನು ಅಂತಹ ಚಟುವಟಿಕೆಗಳಿಗೆ ಬಲವಂತವಾಗಿ ತೊಡಗಿಸುತ್ತಿರುವುದು ಗಂಭೀರ ವಿಚಾರ. ಇದು ಸಂವಿಧಾನಸ 21ಎ ವಿಧಿ ಅಡಿಯಲ್ಲಿನ ಮೂಲಭೂತ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಒಂದು ವೇಳೆ ಸಂದರ್ಭಗಳು ಅವರನ್ನು ಈ ರೀತಿ ಕೆಲಸಕ್ಕೆ ಇಳಿಯಲು ಮಾಡಿದ್ದರೆ ಅದು 21ನೇ ವಿಧಿಯ ಉಲ್ಲಂಘನೆಯಾಗಬಹುದು' ಎಂದು ಒಕಾ ಹೇಳಿದರು.
ಬಿಬಿಎಂಪಿಯು ಈ ಸಂಬಂಧ ಬೆಂಗಳೂರಿನಲ್ಲಿರುವ ಅಂತಹ ಮಕ್ಕಳನ್ನು ಗುರುತಿಸಲು ಸಮೀಕ್ಷೆ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಸಮೀಕ್ಷೆ ನಡೆಸಲು ಎನ್ಜಿಒಗಳ ಸಹಾಯ ತೆಗೆದುಕೊಳ್ಳಬಹುದು ಎಂದು ಹೇಳಿದೆ.