ಟಿಪ್ಪು ಜಯಂತಿ ಆಚರಣೆ ರದ್ದು: ಸರ್ಕಾರಕ್ಕೆ ಹೈಕೋರ್ಟ್ ಚಾಟಿ
ಬೆಂಗಳೂರು, ನವೆಂಬರ್ 6: ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿದ ಕ್ರಮವನ್ನು ಮರುಪರಿಶೀಲನೆ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸರ್ಕಾರಕ್ಕೆ ಚಾಟಿ ಬೀಸಿದರು.
ಟಿಪ್ಪು ಜಯಂತಿ: ಸಿದ್ದರಾಮಯ್ಯ ವಿರುದ್ದ 'ತಿರುಗಿಬಿದ್ದ' ಸಿ.ಎಂ.ಇಬ್ರಾಹಿಂ
ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಿದ ಕ್ರಮವು ಸಾರ್ವಜನಿಕ ಹಿತಾಸಕ್ತಿಯ ವಿಚಾರ ಎಂದು ಪರಿಗಣಿಸಿದ ನ್ಯಾಯಪೀಠ, ಸದ್ಯಕ್ಕೆ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಈ ಹಂತದಲ್ಲಿ ಯಾವುದೇ ಆದೇಶ ನೀಡುವುದಿಲ್ಲ ಎಂದು ಹೇಳಿತು. ಬಳಿಕ ವಿಚಾರಣೆಯನ್ನು ಜನವರಿ 3ಕ್ಕೆ ಮುಂದೂಡಲಾಯಿತು. ಅಂದು ನಡೆಯುವ ವಿಚಾರಣೆ ವೇಳೆ ತನ್ನ ನಿರ್ಧಾರವನ್ನು ಸರ್ಕಾರ ತಿಳಿಸಬೇಕು ಎಂದು ಸೂಚಿಸಿತು.
ನಿರ್ಧಾರ ಮರುಪರಿಶೀಲನೆ ಮಾಡಿ
ಟಿಪ್ಪು ಜಯಂತಿ ಆಚರಣೆಯಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಬಹುದು ಎಂಬ ರಾಜ್ಯ ಸರ್ಕಾರದ ವಾದವನ್ನು ಮುಖ್ಯ ನ್ಯಾಯಮೂರ್ತಿ ಒಪ್ಪಲಿಲ್ಲ. ಕನ್ನಡ ರಾಜ್ಯೋತ್ಸವ ಆಚರಣೆಗೂ ಅಡ್ಡಿ ಆತಂಕಗಳಿವೆ. ಕಾನೂನು ಸುವ್ಯವಸ್ಥೆ ಕಾರಣವನ್ನು ಒಪ್ಪಲಾಗದು. ಸರ್ಕಾರ ನೀತಿ ವಿಚಾರವಾದರೆ ಒಪ್ಪಬಹುದು. ಹೀಗಾಗಿ ಸರ್ಕಾರ ತನ್ನ ನಿರ್ಧಾರ ಮರುಪರಿಶೀಲಿಸಬೇಕು ಎಂದು ಹೇಳಿತು.
ಟಿಪ್ಪು ಜಯಂತಿ ಗಲಾಟೆ ಪ್ರಕರಣಗಳು ವಾಪಸ್: ಬೋಪಯ್ಯ ಮನವಿ
ಸರ್ಕಾರ ಹೇಳಿದ್ದನ್ನು ನಾವು ಕೇಳೊಲ್ಲ
ಸರ್ಕಾರ ಹೇಳಿದ್ದನ್ನು ನಾವು ಕೇಳುವುದಿಲ್ಲ. ಈ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ. ಈ ಹಂತದಲ್ಲಿ ಯಾವುದೇ ನಿರ್ದೇಶನ ಸಾಧ್ಯವಿಲ್ಲ. ಸರ್ಕಾರವು ಸಂವಿಧಾನ ಎತ್ತಿಹಿಡಿಯುವ ಕೆಲಸ ಮಾಡಬೇಕು. ಅದು ತನ್ನ ಆದೇಶವನ್ನು ತಿದ್ದುಪಡಿ ಮಾಡಿಕೊಳ್ಳಲೂ ಅವಕಾಶವಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎರಡು ತಿಂಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಪೀಠ ಸೂಚಿಸಿತು.
ಒಂದೇ ದಿನದಲ್ಲಿ ನಿರ್ಧಾರ
ಹಿಂದಿನ ಸರ್ಕಾರ ಟಿಪ್ಪು ಜಯಂತಿ ಆಚರಣೆ ನೀಡಿತ್ತು. ಜಾತ್ಯತೀತ ಅಂಶಗಳನ್ನು ಪರಿಗಣಿಸಿ ಆಚರಣೆ ಮಾಡಲಾಗಿತ್ತು. ನೀತಿಯಲ್ಲಿ ಬದಲಾವಣೆ ಬೇಕಿದ್ದರೆ ಕ್ರಮೇಣ ಮಾಡಬೇಕು. ಆದರೆ ಈಗ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಒಂದೇ ದಿನದಲ್ಲಿ ತೆಗೆದುಕೊಳ್ಳಲಾಗಿದೆ. ನ.10ರಂದು ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿತು.
ಟಿಪ್ಪು ಜಯಂತಿ ಮಾಡ್ತೀವಿ: ಬಿಜೆಪಿ ಮುಖಂಡ ಶರತ್ ಬಚ್ಚೇಗೌಡ
ಖಾಸಗಿ ಆಚರಣೆಗೆ ನಿರ್ಬಂಧವಿಲ್ಲ
ನ. 10ರಂದು ಟಿಪ್ಪುಜಯಂತಿ ಆಚರಣೆಗೆ ಸರ್ಕಾರದಿಂದ ನಿರ್ಬಂಧವಿಲ್ಲ. ಸರ್ಕಾರದಿಂದ ಜಯಂತಿ ಆಚರಣೆ ಮಾಡುವುದಿಲ್ಲ. ಆದರೆ ಖಾಸಗಿಯಾಗಿ ಆಚರಿಸಿಕೊಳ್ಳಬಹುದು ಎಂದು ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಹೈಕೋರ್ಟ್ಗೆ ತಿಳಿಸಿದರು.
ಬಿಲಾಲ್ ಅಲಿ ಶಾ, ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಮತ್ತು ಟಿಪ್ಪು ರಾಷ್ಟ್ರೀಯ ಸೇವಾ ಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿವೆ.