ನಿತ್ಯಾನಂದ ಸ್ವಾಮಿಗೆ ಸಂಕಷ್ಟ: 10 ವರ್ಷದ ಹಿಂದೆ ನೀಡಿದ್ದ ಜಾಮೀನು ರದ್ದು
ಬೆಂಗಳೂರು, ಫೆಬ್ರವರಿ 5: ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ನೀಡಲಾಗಿದ್ದ ಜಾಮೀನನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
2010ರ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಜಾಮೀನು ದೊರಕಿತ್ತು. ಇದನ್ನು ರದ್ದುಗೊಳಿಸುವಂತೆ ಆತನ ಮಾಜಿ ಕಾರುಚಾಲಕ, ಪ್ರಕರಣ ಮೂಲ ಅರ್ಜಿದಾರ ಲೆನಿನ್ ಕರುಪ್ಪನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನಿತ್ಯಾನಂದನಿಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸಿ ಬುಧವಾರ ತೀರ್ಪು ನೀಡಿದರು.
ನಿತ್ಯಾನಂದ ಸ್ವಾಮಿ ಅಧ್ಯಾತ್ಮ ಪ್ರವಾಸದಲ್ಲಿದ್ದಾರೆ ಎಂದ ಪೊಲೀಸರು
ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ನಲ್ಲಿ ನಿತ್ಯಾನಂದ ವಿರುದ್ಧ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಸತತ 40ಕ್ಕೂ ಹೆಚ್ಚು ಬಾರಿ ವಿಚಾರಣೆಗೆ ಗೈರಾಗಿದ್ದಾರೆ. ಹೀಗಾಗಿ ಅವರ ಜಾಮೀನನ್ನು ತಿರಸ್ಕರಿಸಬೇಕು ಎಂದು ಲೆನಿನ್ ಮನವಿ ಮಾಡಿದ್ದರು.
ನಿತ್ಯಾನಂದನ ಜಾಮೀನು ರದ್ದುಗೊಳಿಸಿರುವುದರ ಜತೆಗೆ ಆತನನ್ನು ಕೂಡಲೇ ವಶಕ್ಕೆ ಪಡೆದುಕೊಳ್ಳುವಂತೆ ನ್ಯಾ. ಜಾನ್ ಮೈಕಲ್ ಕುನ್ಹಾ ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡಿತು. ಇದರಿಂದ ನಿತ್ಯಾನಂದನ ಜಾಮೀನು ಬಾಂಡ್ಅನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಇದರಿಂದ ನಿತ್ಯಾನಂದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಹಾಗೂ ರಾಜ್ಯ ಸರ್ಕಾರಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ನಿತ್ಯಾನಂದ ದೇಶದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದ್ದು, ಅದು ನಿಜವಾದರೆ ಆತನನ್ನು ಅಲ್ಲಿಂದ ಬಂಧಿಸಿ ಕರೆತರಬೇಕಾಗುತ್ತದೆ.
ಒಂದೂವರೆ ವರ್ಷದಿಂದ ಗೈರು
ನಿತ್ಯಾನಂದ ಸ್ವಾಮಿಗೆ 2010ರಲ್ಲಿ ನೀಡಿರುವ ಜಾಮೀನು ರದ್ದುಗೊಳಿಸಲು ದೂರುದಾರ ಲೆನಿನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ನಿತ್ಯಾನಂದ ಸುಮಾರು ಒಂದೂವರೆ ವರ್ಷದಿಂದ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗದ ಬಗ್ಗೆ ವಿವರಣೆ ನೀಡುವಂತೆ ಹೈಕೋರ್ಟ್, ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಿಗೆ ಶುಕ್ರವಾರ ಸೂಚನೆ ನೀಡಿತ್ತು.
ಜಾಮೀನು ರದ್ದುಗೊಳಿಸಿ
ವಿಚಾರಣೆಗೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳುತ್ತಿರುವ ನಿತ್ಯಾನಂದ, ಅವಧಿ ಮುಗಿದ ಪಾಸ್ಪೋರ್ಟ್ನೊಂದಿಗೆ ದೇಶದಿಂದ ಪರಾರಿಯಾಗಿದ್ದಾನೆ. ಹಾಗೆಯೇ ವಿಚಾರಣಾ ನ್ಯಾಯಾಲಯದಲ್ಲಿ ತನ್ನ ನಕಲಿ ಪ್ರತಿನಿಧಿಗಳನ್ನು ಬಳಸಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಿದ್ದ ಲೆನಿನ್, ನಿತ್ಯಾನಂದನ ಜಾಮೀನನ್ನು ರದ್ದುಗೊಳಿಸುವಂತೆ ಕೋರಿದ್ದರು.
ಭಾರತ ಬಿಟ್ಟು ಪರಾರಿ ಆಗಿರುವ ನಿತ್ಯಾನಂದ ವಿರುದ್ಧ ಬ್ಲೂ ಕಾರ್ನರ್ ನೊಟೀಸ್
ಆಧ್ಯಾತ್ಮಿಕ ಪ್ರವಾಸದಲ್ಲಿ ನಿತ್ಯಾನಂದ
ಸಿಐಡಿ ತನಿಖಾಧಿಕಾರಿ ಫೆ. 3ರ ಒಳಗೆ ಖುದ್ದಾಗಿ ನಿತ್ಯಾನಂದಗೆ ನೋಟಿಸ್ ಜಾರಿ ಮಾಡಬೇಕು. ಅದರ ಕುರಿತು ಫೆ. 3ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಕಳೆದ ಶುಕ್ರವಾರ ಎಸ್ಐಟಿಗೆ ಸೂಚನೆ ನೀಡಿತ್ತು. ಅದರಂತೆ ಬಿಡದಿ ಆಶ್ರಮಕ್ಕೆ ತೆರಳಿದ್ದ ಪೊಲೀಸರು, ನಿತ್ಯಾನಂದನ ಸಹವರ್ತಿ ಕುಮಾರಿ ಅರ್ಚನಾನಂದಗೆ ನೋಟಿಸ್ ನೀಡಿ ವಾಪಸ್ ಆಗಿತ್ತು. ನಿತ್ಯಾನಂದ ಪ್ರಸ್ತುತ ಆಧ್ಯಾತ್ಮಿಕ ಪ್ರವಾಸದಲ್ಲಿದ್ದು, ಈ ಕಾರಣದಿಂದ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಪ್ರಕರಣದ ತನಿಖೆ ನಡೆಸಿರುವ ಎಸ್ಐಟಿ ಹೈಕೋರ್ಟ್ಗೆ ತಿಳಿಸಿತ್ತು.
ನಿತ್ಯಾನಂದ ಈಕ್ವೆಡಾರ್ನಲ್ಲಿದ್ದಾನೆ
ಅರ್ಜಿದಾರರ ಪರ ವಕೀಲ ಅಶ್ವಿನ್ ವೈಶ್, ವಿಚಾರಣಾ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ನಿತ್ಯಾನಂದ ದೇಶದಿಂದಲೇ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದರು. ವಿಚಾರಣಾ ನ್ಯಾಯಾಲಯದಲ್ಲಿ ಖುದ್ದು ಹಾಜರಾತಿಗೆ ಮನವಿ ಮಾಡಿರುವ ನಿತ್ಯಾನಂದ ಭಾರತದಲ್ಲಿಯೇ ಇದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಆತ ಈಕ್ವೆಡಾರ್ನಲ್ಲಿ ಆಶ್ರಯ ಪಡೆದುಕೊಂಡಿದ್ದಾನೆ. ನಿತ್ಯಾನಂದ ಮತ್ತೊಂದು ಪಾಸ್ಪೋರ್ಟ್ ಪಡೆದು ಪರಾರಿಯಾಗಿದ್ದಾನೆ ಎಂದು ಅವರು ಹೇಳಿದ್ದಾರೆ.
ನಿತ್ಯಾನಂದ ಸ್ವಾಮಿ ಪ್ರಕರಣ: ಯುವತಿಯಿಂದ ಸ್ಫೋಟಕ ವಿಡಿಯೋ ಬಹಿರಂಗ
ನಿತ್ಯಾನಂದ ಹಾಜರಾಗಬೇಕಿಲ್ಲ
ನಿತ್ಯಾನಂದ ಜಾಮೀನಿನ ಯಾವುದೇ ಷರತ್ತುಗಳನ್ನು ಉಲ್ಲಂಘನೆ ಮಾಡಿಲ್ಲ. ಅಲ್ಲದೆ, ವಿಚಾರಣಾ ನ್ಯಾಯಾಲಯದ ಮುಂದೆ ಅವರು ತಕ್ಷಣವೇ ಹಾಜರಾಗುವ ಅವಶ್ಯಕತೆಯೂ ಇಲ್ಲ ಎಂದು ರಾಜ್ಯ ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದ್ದರು.
ನಿತ್ಯಾನಂದ ವಿರುದ್ಧದ ಆರೋಪಗಳೇನು?
ನಿತ್ಯಾನಂದನ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 377 (ಅಸಹಜ ಲೈಂಗಿಕತೆ), 420 (ವಂಚನೆ), 114 (ಅಪರಾಧ ಪ್ರಚೋದನೆ), 201 (ಪುರಾವೆಗಳ ನಾಪತ್ತೆ ಮತ್ತು ಸುಳ್ಳು ಮಾಹಿತಿ ನೀಡುವಿಕೆ), 120ಬಿ (ಅಪರಾಧ ಸಂಚು) ಮತ್ತು ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ.