ಮಕ್ಕಳೊಂದಿಗೆ ಕಣ್ಣಾಮುಚ್ಚಾಲೆ ಆಟಕ್ಕೆ ಬಂದು ಚಿನ್ನ ಎಗರಿಸಿದ ಕಳ್ಳರು
ಬೆಂಗಳೂರು, ಮೇ 23: ಚಿನ್ನ ಮಾಡಿಸೋದು ಮನೆಯಲ್ಲಿಟ್ಟು ಪೂಜೆ ಮಾಡೋಕ. ಮನೆಯಲ್ಲಿ ಚಿನ್ನವಿದ್ದರೇ ಸದಾ ಹಣವಿದ್ದಂತೆ ಅನ್ನೋ ಮಾತು ಸತ್ಯವೇ. ಆದರೆ ಚಿನ್ನ ಪ್ರತಿಷ್ಠೆಯ ಸಂಕೇತವೂ ಆಗಿ ಹೋಗಿದೆ. ಮದುವೆ ಸೇರಿದಂತೆ ಶುಭ ಕಾರ್ಯಗಳಿಗೆ ಹೋಗುವಾಗ ಚಿನ್ನವನ್ನು ಧರಿಸದಿದದ್ದರೇ ಮನೆಯಿಂದ ಹೊರಗೆ ಬರುವುದಿಲ್ಲ ಎನ್ನುವವರಿದ್ದಾರೆ. ಮಹಿಳೆಯರು ಮಾತ್ರವಲ್ಲ ಮಕ್ಕಳಿಗೂ ಚಿನ್ನಾಭರಣವನ್ನು ಹಾಕಿ ತಮ್ಮ ದೊಡ್ಡತನವನ್ನು ತೋರಿಸುತ್ತಾರೆ. ಮದುವೆ ಮನೆಗೆ ಚಿನ್ನವನ್ನು ಧರಿಸಿ ಹೋಗಿದ್ದ ಮಕ್ಕಳ ಒಡವೆಯನ್ನು ಇಬ್ಬರು ಖದೀಮರು ಕದ್ದಿರುವ ಘಟನೆ ಬೆಂಗಳೂರಿನ ಗೋವಿಂದರಾಜನಗರದ ಕಲ್ಯಾಣ ಮಂದಿರ ಬಳಿ ನಡೆದಿದೆ.
ಕಣ್ಣಾ ಮುಚ್ಚೆ ಗಾಡೆ ಗೂಡೆ ಆಟ ಪ್ಲಾನ್
ಹೆತ್ತವರು ತಮ್ಮ ಮನೆಯ ಸಿರಿ ಸಂಪತ್ತನ್ನು ತೋರಿಕೆಯ ದೃಷ್ಟಿಯಿಂದಾಗಿ ಮಕ್ಕಳ ಮೈ ಮೇಲೂ ಲಕ್ಷಾಂತರ ಮೌಲ್ಯದ ಚಿನ್ನವನ್ನು ಹಾಕುತ್ತಾರೆ. ಮದುವೆ ಸೇರಿದಂತೆ ಶುಭ ಸಮಾರಂಭಕ್ಕೆ ಕರೆದುಕೊಂಡು ಹೋಗುತ್ತಾರೆ. ಮದುವೆಯ ಸಂಭ್ರಮದಲ್ಲಿ ತೊಡಗಿಕೊಂಡು ತಮ್ಮ ಮಕ್ಕಳು ಆಟವಾಡಿಕೊಳ್ಳಲಿ ಎಂದು ಬಿಟ್ಟು ಬಿಡ್ತಾರೆ. ಇಂಥ ಮಕ್ಕಳೇ ಖತರ್ನಾಕ್ ಖದೀಮರ ಟಾರ್ಗೆಟ್ ಆಗಿಬಿಡುತ್ತೆ. ಉದ್ಯಮಿ ರಾಘವೇಂದ್ರ ಎಂಬುವವರು ಗೋವಿಂದ ರಾನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ದಾಸನಪುರ ಹೋಬಳಿಯ ಚಿಕ್ಕವೀರಯ್ಯಪಾಳ್ಯ ನಿವಾಸಿಯಾಗಿರುವ ರಾಘವೇಂದ್ರ ಸಂಬಂಧಿಕರ ಮದುವೆ ಹಿನ್ನೆಲೆ ಮೇ 20 ರಂದು ಮಾಗಡಿ ರಸ್ತೆಯ ಸರಸ್ವತಿ ಕನ್ವೆಷನ್ ಹಾಲ್ಗೆ ಹೆಂಡತಿ-ಮಕ್ಕಳ ಸಮೇತ ಬಂದಿದ್ದರು. ಅಂದು ಬೆಳಗ್ಗೆ ಹುಡುಗರೊಂದಿಗೆ ಆರು ವರ್ಷದ ಮಗ ಶೌರ್ಯ ಆಟವಾಡುತ್ತಿದ್ದ. ಈ ವೇಳೆ ಇಬ್ಬರು ಖದೀಮರು ಬಂದು ಕಣ್ಣಾಮುಚ್ಚಾಲೆ ಆಟ ಆಡೋಣ ಬಾ ಎಂದು ಕರೆದಿದ್ದಾರೆ. ಗಮನ ಬೇರೆಡೆ ಸೆಳೆದು ಬಾಲಕನ ಮೈಮೇಲಿದ್ದ 79 ಗ್ರಾಂ ಎಗರಿಸಿ ಕಳ್ಳತನ ಮಾಡಿದ್ದಾರೆ.
ಸಿಸಿಟಿವಿಯಲ್ಲಿ ಕಳ್ಳರನ್ನು ಗುರುತಿಸಿದ ಬಾಲಕ.
ಕಣ್ಣಾ ಮುಚ್ಚೆ ಗಾಡೆ ಗೂಡೆ ಆಟವನ್ನು ಕೆಲ ಕಾಲ ಅಪರಿಚಿತರ ಜೊತೆೆ ಬಾಲಕ ಆಟವಾಡಿದ್ದ. ಈ ವೇಳೆಯಲ್ಲಿಯೇ ಮಕ್ಕಳ ಕಣ್ಣಿಗೆ ಬಟ್ಟೆಯನ್ನು ಕಟ್ಟುವ ಸೋಗಿನಲ್ಲಿ ಮಕ್ಕಳ ಒಡವೆಯನ್ನು ಕದ್ದಿದ್ದಾರೆ. ಮಕ್ಕಳ ಗಮನವನ್ನು ಆಟದ ಕಡೆಗೆ ಸೆಳೆದು ಮಕ್ಕಳಿಗೆ ತಕ್ಷಣಕ್ಕೆ ತಿಳಿಯದಂತೆ ಒಡವೆಯನ್ನು ಕದ್ದಿದ್ದರು. ಅಪರಿಚಿತ ಖದೀಮರು ಮಕ್ಕಳ ಒಡವೆ ಕಳ್ಳತನ ಮಾಡಿ ಹೋಗುವಾಗ ಬಾಲಕ ಅಳುತ್ತ ಹೆತ್ತವರಿಗೆ ವಿಷಯ ತಿಳಿಸಿದ್ದಾನೆ. ಮಕ್ಕಳ ಮೈಮೇಲಿದ್ದ ಚಿನ್ನಾಭರಣ ಕಳುವಾಗಿರುವುದು ತಿಳಿಯುತ್ತೆ. ಸಿಸಿಟಿವಿಯನ್ನು ಪರಿಶೀಲಿಸಿದಾಗ ಕಳ್ಳರು ಎಸ್ಕೇಪ್ ಆಗ್ತಿರೋದು ಕಾಣಿಸಿದೆ. ಸಿಸಿಟಿವಿಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಅಪರಿಚಿತರನ್ನು ಬಾಲಕ ಇವರೇ ಕದ್ದಿರೋದು ಎಂದು ಗುರುತಿಸಿದ್ದಾನೆ.
ಆರು ವರ್ಷದ ಪುಟ್ಟ ಬಾಲಕ ಮೈ ಮೇಲೆ ಹಾಕಿದ್ದ ಚಿನ್ನವೆಷ್ಟು..?
ಉದ್ಯಮಿ ರಾಘವೇಂದ್ರರವರ ಪುತ್ರನ ವಯಸ್ಸು ಕೇವಲ ಆರುವರ್ಷ. ರಕ್ತಸಂಬಂಧಿಗಳ ಮದುವೆಯಾಗಿದ್ದರಿಂದ ಬಾಲಕನ ಮೈ ಮೇಲೆ ಸಾಕಷ್ಟು ಒಡವೆಯನ್ನು ಹಾಕಿದ್ದರು. ಬಾಲಕನ ಕೊರಳಿನಲ್ಲಿ 40ಗ್ರಾಂ ತೂಕದ ಚಿನ್ನದ ಸರ, 20ಗ್ರಾಂ ತೂಕದ ಚಿನ್ನದ ಬಳೆ, 20ಗ್ರಾಂ ತೂಕದ ದೃಷ್ಟಿ ಬಲೆ, 4 ಗ್ರಾಂ ತೂಕದ ಒಟ್ಟು ಮೂರವರೆ ಲಕ್ಷ ಮೌಲ್ಯದ 79ಗ್ರಾಂ ತೂಕದ ಚಿನ್ನವನ್ನು ಪುಟ್ಟ ಬಾಲಕ ಮೈ ಮೇಲೆೆ ಹಾಕಲಾಗಿತ್ತು. ಖದೀಮರಿಗೆ ಇಂಥವರೇ ಟಾರ್ಗೇಟ್. ಬಾಲಕನ ಮೈ ಮೇಲಿದ್ದ ಒಡವೆಯನ್ನು ಗಮನಿಸಿ ಆಟವಾಡಿಸುವ ಸೋಗಿನಲ್ಲಿ ಚಿನ್ನಾಭರಣವನ್ನು ಕದ್ದಿದ್ದಾರೆ.
ಪ್ರಕರಣ ದಾಖಲು, ಕಳ್ಳರಿಗೆ ಶೋಧ
Recommended Video
ಉದ್ಯಮಿ ರಾಘವೇಂದ್ರ ಕೊಟ್ಟ ದೂರಿನ ಅನ್ವಯ ಗೋವಿಂದರಾಜನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಕಳ್ಳರ ಚಲನವಲನವನ್ನು ಗಮನಿಸಿರೋ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.