ರಮೇಶ್ ಜಾರಕಿಹೊಳಿ ರಾಜೀನಾಮೆ ಪತ್ರದಲ್ಲಿ ಯಡಿಯೂರಪ್ಪಗೆ ಮಾಡಿಕೊಂಡ ಮನವಿ ಏನು?
ಬೆಂಗಳೂರು, ಫೆ. 03: ಕೊನೆಗೂ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟಿದ್ದಾರೆ. ನಿನ್ನೆ (ಮಾ. 02) ರಮೇಶ್ ಜಾರಕಿಹೊಳಿ ಭಾಗಿಯಾಗಿದ್ದಾರೆ ಎನ್ನಲಾದ 'ಸಿಡಿ'ಯನ್ನು ಆಧಾರವಾಗಿಟ್ಟುಕೊಂಡು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಜೊತೆಗೆ ಸಿಡಿಯಲ್ಲಿನ ವಿಡಿಯೋ ಬಹಿರಂಗವಾಗಿತ್ತು.
ಅದು ನಕಲಿ ವಿಡಿಯೋ, ಹೀಗಾಗಿ ನಾನು ರಾಜೀನಾಮೆ ಪತ್ರಕ್ಕೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಈ ಮೊದಲು ರಮೇಶ್ ಜಾರಕಿಹೊಳಿ ಅವರು ಹೇಳಿದ್ದರು. ಆದರೆ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಗೆ ಎಲ್ಲೆಡೆಯಿಂದ ತೀವ್ರ ಒತ್ತಡ ಬಂದಿತ್ತು. ಕಾಂಗ್ರೆಸ್ ಪಕ್ಷದ ನಾಯಕರು ತಕ್ಷಣ ರಾಜೀನಾಮೆ ಪಡೆದು ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಹೀಗಾಗಿ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಸಿಎಂಗೆ ರಾಜೀನಾಮೆ ಪತ್ರ ತಲುಪಿಸಿದ ಬಾಲಚಂದ್ರ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರಮೇಶ್ ಜಾರಕಿಹೊಳಿ ಅವರು ಸಹೋದರ ಬಾಲಚಂದ್ರ ಜಾರಕಿಹೊಳಿ ಅವರ ಮೂಲಕ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ. ಸಿಎಂ ಅಧಿಕೃತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದು, ರಾಜೀನಾಮೆ ಪತ್ರದಲ್ಲಿ ಈ ಅಂಶಗಳನ್ನು ರಮೇಶ್ ಉಲ್ಲೇಖಿಸಿದ್ದಾರೆ.
ರಾಜೀನಾಮೆ ಪತ್ರದಲ್ಲಿ ರಮೇಶ್ ಉಲ್ಲೇಖಿಸಿದ ಅಂಶಗಳು
ನನ್ನ ಮೇಲೆ ಬಂದಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಇದರ ಬಗ್ಗೆ ಶೀಘ್ರದಲ್ಲೆ ತನಿಖೆ ಆಗಬೇಕು. ನಾನು ನಿರ್ದೋಶಿಯಾಗುವ ವಿಶ್ವಾಸವಿದ್ದರೂ ನೈತಿಕ ಹೊಣೆಯನ್ನು ಹೊತ್ತು ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿರುತ್ತೇನೆ. ದಯವಿಟ್ಟು ಇದನ್ನು ಅಂಗೀಕರಿಸಬೇಕೆಂದು ರಾಜೀನಾಮೆ ಪತ್ರದಲ್ಲಿ ರಮೇಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ವಿನಂತಿಸಿದ್ದಾರೆ.
ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಭಾಗಿ
ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಪತ್ರವನ್ನು ತಲುಪಿಸಿದ್ದರು. ರಾಜೀನಾಮೆ ಪತ್ರದೊಂದಿಗೆ ಸಿಎಂ ಯಡಿಯೂರಪ್ಪ ಅವರು ವಿಧಾನಸೌಧಕ್ಕೆ ತೆರಳಿದ್ದರು.
Recommended Video
ರಾಜೀನಾಮೆ ಅಂಗೀಕಾರ ಮಾಡಿದ ಯಡಿಯೂರಪ್ಪ
ಸಂಪುಟ ಸಭೆ ಆರಂಭವಾಗುತ್ತಿದ್ದಂತೆಯೆ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಯನ್ನು ಸಂಪುಟ ಸಬೆಯಲ್ಲಿಟ್ಟು ಸಿಎಂ ಅಂಗೀಕಾರ ಮಾಡಿದ್ದಾರೆ. ಈ ಬಗ್ಗೆ ಸಂಪುಟದ ಇತರ ಸಹೋದ್ಯೋಗಿಗಳಿಗೆ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಅಂಗೀಕಾರ ಮಾಡುತ್ತಿರುವುದನ್ನು ಹೇಳಿದ್ದಾರೆ. ಆ ಮೂಲಕ ನಾಳೆ ಆರಂಭವಾಗಲಿದ್ದು ಬಜೆಟ್ ಅಧಿವೇಶನಕ್ಕೂ ಮೊದಲು ಆಗಬಹುದಾದ ಮುಜುಗುರದಿಂದ ಬಿಜೆಪಿ ಸರ್ಕಾರ ತಪ್ಪಿಸಿಕೊಂಡಿದೆ.