ಜಯನಗರ ಸೌತ್ ಎಂಡ್ ವೃತ್ತಕ್ಕೀಗ 'ಸಂಜೀವಿನಿ' ಶಕ್ತಿ
ಬೆಂಗಳೂರು, ಜ. 11 : ನಗರದ ಸೌತ್ ಎಂಡ್ ವೃತ್ತದಲ್ಲೀಗ ಔಷಧಿ ಸಸ್ಯಗಳ ಘಮ. ಡಾ. ರಾಜ್ ಕುಮಾರ್ ಪ್ರತಿಮೆ, ಘಂಟೆ ಗಡಿಯಾರ, ಕೇಂದ್ರ ಗ್ರಂಥಾಲಯದ ಜತೆಗೆ 'ಸಂಜೀವಿನಿ ಉದ್ಯಾನ' ಹೊಸ ಸೇರ್ಪಡೆ.
ಸಂಜೀವಿನಿ ಉದ್ಯಾನದಲ್ಲಿ ಪ್ರವೇಶ ಮಾಡಿದ ತಕ್ಷಣ ಬೋರ್ಡ್ ಒಂದು ನಿಮ್ಮನ್ನು ಎದುರಾಗುತ್ತದೆ. ದೇಶದಲ್ಲಿಯೇ ಅತಿಹೆಚ್ಚು ವಾಯುಮಾಲಿನ್ಯಕ್ಕೆ ತುತ್ತಾಗಿರುವುದು ನಮ್ಮ ನಗರಿ ಎಂಬ ಸಂಗತಿ ಕಂಡವರು ಒಂದು ಕ್ಷಣ ಎಚ್ಚರಗೊಳ್ಳಲೇಬೇಕು. ಉಸಿರಾಟದ ತೊಂದರೆಗೆ ಸದಾ ತುತ್ತಾಗುತ್ತಿರುವ ಜನರಿಗೆ ಔಷಧಿ ಸಸ್ಯ ಮತ್ತು ಪರಿಸರ ಕಾಳಜಿ ಅರ್ಥ ಮಾಡಿಸುವ ಪ್ರಯತ್ನ ಇಲ್ಲಿದೆ.[ಯಡಿಯೂರು ಕೆರೆ ಮೇಲೊಂದು ಪಕ್ಷಿ ನೋಟ]
ನಂತರ ಇಕ್ಕೆಲಗಳಲ್ಲಿ ನೆಟ್ಟಿರುವ ಸುಗಂಧರಾಜ ,ಭೃಂಗರಾಜ, ಆಕಾಶ ಮಲ್ಲಿಗೆ, ಸೀತಾ, ಅಶೋಕ, ಸರ್ಪಗಂಧ ಹೀಗೆ ಸಾಲು ಸಾಲು ಔಷಧಿ ಸಸ್ಯಗಳು ನಿಮ್ಮನ್ನು ಬರಮಾಡಿಕೊಳ್ಳುತ್ತವೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಿಂದ ತಂದ ಸಸ್ಯಗಳೀಗ ಬೆಂಗಳೂರಲ್ಲಿ ನಳನಳಿಸುತ್ತಿವೆ.[ಜಯನಗರದಲ್ಲಿ ಬೃಹತ್ ಗಡಿಯಾರ ಗೋಪುರ]
ಗಿಡಮೂಲಿಕೆಗಳ ಆಗರ
432 ವಿಧಕ್ಕೂ ಅಧಿಕ ಗಿಡಮೂಲಿಕೆ, 400 ಬೇವಿನ ಗಿಡ ಮತ್ತು 125 ಕ್ಕೂ ಅಧಿಕ ಅಪರೂಪದ ಸಸ್ಯಗಳನ್ನು ವನದಲ್ಲಿ ಕಾಣಬಹುದು. ಉಸಿರಾಟದ ತೊಂದರೆ, ಆಸ್ತಮಾ ನಿವಾರಣೆಗೆ ಬಳಸುವ ಸಸ್ಯಗಳೇ ಪ್ರಮುಖವಾಗಿವೆ. ಇದಲ್ಲದೆ ಚರ್ಮ ರೋಗ, ಸಂಧು ವಾತ, ಕಾಮೋತ್ತೇಜಕ, ಬಂಜೆತನ ನಿವಾರಣೆ, ನೆಗಡಿ, ಶೀತ ಈ ರೀತಿ ಹತ್ತು ಹಲವು ರೋಗಗಳನ್ನು ಗುಣಪಡಿಸುವ ಸಸ್ಯಗಳನ್ನು ಕಾಣಬಹುದು.
ಜಿರಾಫೆ ಮತ್ತು ಕಾಡೆಮ್ಮೆ ಕಾದಾಡಲ್ಲ!
ದೊಡ್ಡದಾದ ಎರಡು ಜಿರಾಫೆ ಪ್ರತಿಕೃತಿ ಒಮ್ಮೆ ಅರಣ್ಯದ ಅನುಭವ ನೀಡುತ್ತದೆ, ಪಕ್ಕದಲ್ಲಿಯೇ ಇರುವ ಎರಡು ಕಾಡೆಮ್ಮೆ ಪ್ರತಿಕೃತಿಗಳು ಗಮನ ಸೆಳೆಯುತ್ತವೆ. ಮೊಸಳೆ, ಕರಡಿಗಳು(ಕೃತಕ) ಉದ್ಯಾನದಲ್ಲಿದ್ದು ಯಾರಿಗೂ ತೊಂದರೆ ಕೊಡಲ್ಲ
ತ್ರೀಕೋನಾಕೃತಿ ಕೊಳ
ಉದ್ಯಾನದ ಹೃದಯ ಭಾಗದಲ್ಲಿ ಕೊಳವೊಂದನ್ನು ನಿರ್ಮಿಸಲಾಗಿದ್ದು ಆಕರ್ಷಕವಾಗಿದೆ. ತ್ರೀಕೋನಾಕೃತಿಯ ಕೊಳಕ್ಕೆ ಯಾರೂ ಇಳಿಯದಂತೆ ತಡೆಗೋಡೆ ನಿರ್ಮಿಸಲಾಗಿದ್ದು ರಕ್ಷಣಾ ಕ್ರಮ ಅಳವಡಿಸಿಕೊಳ್ಳಲಾಗಿದೆ.
ಪಾಳು ಜಾಗವೀಗ ಸುಂದರ ಉದ್ಯಾನ
ಈ ಮೊದಲು ಪಾಳು ಬಿದ್ದಜಾಗವಾಗಿ, ಬೆಂಗಳೂರು 'ನಾಗರಿಕರ' ಕಸ ವಿಲೇವಾರಿ ಕೇಂದ್ರವಾಗಿದ್ದ ದಕ್ಷಿಣ ಕೇಂದ್ರ ಗ್ರಂಥಾಲಯದ ಎದುರಿನ ಜಾಗಕ್ಕೆ ಬಿಬಿಎಂಪಿ ಕಾಯಕಲ್ಪ ನೀಡಿದೆ. ಪರಿಣಾಮ ಉತ್ತಮ ಉದ್ಯಾನವೊಂದು ತಲೆ ಎತ್ತಿದೆ.
ಉದ್ಯಾನ ಎಲ್ಲಿದೆ?
ಬನಶಂಕರಿ ಕಡೆ ತೆರಳುವ ಮುಖ್ಯ ರಸ್ತೆ ಮತ್ತು ದಕ್ಷಿಣ ಕೇಂದ್ರ ಗ್ರಂಥಾಲಯದ ನಡುವೆ ಉದ್ಯಾನವಿದೆ. ಸೌತ್ ಎಂಡ್ ವೃತ್ತಕ್ಕೆ ತಾಗಿಕೊಂಡಿರುವ ಉದ್ಯಾನ ಚಿಕ್ಕದಾಗಿದ್ದರೂ ಈಗಲೇ ಜನರಿಗೆ ಇಷ್ಟವಾಗಿದೆ. ಪ್ರವೇಶ ಮುಕ್ತವಾಗಿದ್ದು ಬೆಳಗ್ಗೆ ಮತ್ತು ಮಧ್ಯಾಹ್ನ 4 ಗಂಟೆ ನಂತರ ತೆರೆದಿರುತ್ತದೆ,. ರಾತ್ರಿ ಕೊಂಚ ಹೊತ್ತು ಲೈಟಿಂಗ್ ಆನಂದವನ್ನು ಸವಿಯಬಹುದು. ಗ್ರಂಥಾಲಯದ ಎದುರಿಗಿನ ರಸ್ತೆಯಿಂದ ಉದ್ಯಾನಕ್ಕೆ ಪ್ರವೇಶ ಕಲ್ಪಿಸಲಾಗಿದೆ.
ಜನರೇನಂತಾರೆ?
ಮೊದಲು ಇಲ್ಲಿ ಸಮೀಪ ಸುಳಿದರೆ ಮೂಗು ಮುಚ್ಚಿಕೊಂಡು ಓಡಾಡಬೇಕಿತ್ತು. ರಸ್ತೆ ಮತ್ತು ಈಗ ಉದ್ಯಾನವಾಗಿರುವ ಜಾಗ 'ಮುಕ್ತ ಶೌಚಾಲಯಗಿತ್ತು' ಆದರೀಗ ವಾರದ ಕೊನೆಯನ್ನು ಕಳಿಯಲು ಹತ್ತಿರದಲ್ಲೇ ಉತ್ತಮ ಸ್ಥಳ ದೊರೆತಂತರಾಗಿದೆ ಎನ್ನುತ್ತಾರೆ ಜಯನಗರ ಮೂರನೇ ನ್ಲಾಕ್ ನಿವಾಸಿ ಗಿರಿಜಾ ಶಂಕರ್.
ಯಡಿಯೂರು ವಾರ್ಡ್ ಅಭಿವೃದ್ಧಿ ಪರ್ವ
90 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನ ನಿರ್ಮಿಸಲಾಗಿದೆ. 108 ಪ್ರಭೇಧದ ತಲಾ ನಾಲ್ಕು ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದು ಯಡಿಯೂರು ವಾರ್ಡ್ ಸದಸ್ಯ ಎನ್ ಆರ್ ರಮೇಶ್ ತಿಳಿಸುತ್ತಾರೆ.