ಬೆಂಗಳೂರಲ್ಲಿ ಶೀಘ್ರ ಭಾರೀ ವಾಹನ ಸಂಚಾರ ನಿರ್ಬಂಧ
ಬೆಂಗಳೂರು, ನ. 11: ನಗರದ ರಸ್ತೆಗಳಲ್ಲಿ ಐಟಿ ಉದ್ಯೋಗಿಗಳ ಅನುಕೂಲಕ್ಕಾಗಿ ವಾಹನ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಟ್ರಕ್ಗಳ ಸಂಚಾರವನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿರ್ಬಂಧಿಸಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಲಾರಿ, ಟ್ರಕ್ ಸೇರಿದಂತೆ ಮೂರು ಟನ್ಗಿಂತ ಹೆಚ್ಚು ತೂಕ ಹೊತ್ತೊಯ್ಯುವ, ನಿಧಾನವಾಗಿ ಚಲಿಸುವ ವಾಹನಗಳ ಸಂಚಾರವನ್ನು ನಿರ್ಬಂಧಿಸಲು ಯೋಚಿಸುತ್ತಿದೆ.
2005ರಲ್ಲಿಯೇ ಇನ್ಫೋಸಿಸ್ ಮುಖ್ಯಸ್ಥರಾಗಿದ್ದ ಎನ್.ಆರ್. ನಾರಾಯಣಮೂರ್ತಿ ಅವರು ಸಂಚಾರಿ ಸಮಸ್ಯೆ ಕುರಿತು ಸರ್ಕಾರದ ಗಮನಕ್ಕೆ ತಂದಾಗ ತಕ್ಷಣ ಟ್ರಕ್ಗಳ ಸಂಚಾರ ನಿರ್ಬಂಧಿಸಿ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಸರಿಯಾಗಿ ಜಾರಿಗೊಳಿಸದ ಕಾರಣ ಪರಿಣಾಮಕಾರಿಯಾಗಿರಲಿಲ್ಲ. ವರದಿಯೊಂದರ ಪ್ರಕಾರ ಪ್ರತಿದಿನ 20 ಸಾವಿರ ಭಾರೀ ವಾಹನಗಳು ನಗರ ಪ್ರವೇಶಿಸುತ್ತಿವೆ.
ಪ್ರಕರಣ ದಾಖಲಿಸಲು ನಿರ್ಧಾರ: ಈ ಕುರಿತು ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರಿ) ಬಿ. ದಯಾನಂದ, "ಈಗ ಇರುವ ಕಾನೂನು ಗೊಂದಲಮಯ ಹಾಗೂ ವಿರೋಧಾಭಾಸವಾಗಿದೆ. ನಾವು ಈ ಕಾನೂನನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಇವುಗಳನ್ನು ತಿದ್ದುವ ಮೂಲಕ ದೀರ್ಘ ಕಾಲದ ಪರಿಹಾರ ಕ್ರಮ ಕೈಗೊಳ್ಳಲು ಉದ್ದೇಶಿಸಿದ್ದೇವೆ. ಆದ್ದರಿಂದ ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ ನಗರ ಪ್ರವೇಶಿಸುವ ಲಾರಿ, ಟ್ರಕ್ನಂತಹ ಬೃಹತ್ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಹಾಗೂ ಅವುಗಳ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ" ಎಂದು ತಿಳಿಸಿದ್ದಾರೆ.
ಆದರೆ, ಈ ಆದೇಶದಿಂದ ಮೆಟ್ರೋ ನಿರ್ಮಾಣದಂತಹ ಚಟುವಟಿಕೆಗಳಿಗೆ ಅಡ್ಡಿಯಾಗುವುದಿಲ್ಲ. ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಅವರು ಅಗತ್ಯ ಚಟುವಟಿಕೆಯನ್ನು ನಿರ್ಧರಿಸಿ ಒಪ್ಪಿಗೆ ನೀಡುವರು ಎಂದು ಬಿ ದಯಾನಂದ ತಿಳಿಸಿದ್ದಾರೆ.