ಬೆಂಗಳೂರಿನಲ್ಲಿ ಸುರಿದ ಮಳೆಗೆ ಸಂಭವಿಸಿದ ಅವಘಡಗಳು
ಬೆಂಗಳೂರು, ಅ. 04: ರಾಜಧಾನಿಯಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ನಾನಾ ಅವಘಡಗಳು ಸಂಭವಿಸಿವೆ. ಮಳೆಯಿಂದಾ ರಸ್ತೆಗೆ ಉರುಳಿಬಿದ್ದಿದ್ದ ಮರಕ್ಕೆ ಡಿಕ್ಕಿ ಹೊಡೆದು ಹೋಟೆಲ್ ಮಾಲೀಕರೊಬ್ಬರ ತಲೆಗೆ ಪಟ್ಟಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಇನ್ನು ಇದಕ್ಕೂ ಮೊದಲು ರಾತ್ರಿ ಸುರಿದ ಮಳೆಗೆ ಆರು ಎಮ್ಮೆ ಮತ್ತು ಆರು ಮೇಕೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಎಚ್ಎಎಲ್ ಬಳಿ ಕಾಂಪೌಂಡ್ ಗೋಡೆ ಕುಸಿದು ಹತ್ತಕ್ಕೂ ಹೆಚ್ಚು ವಾಹನ ಜಖಂ ಆಗಿವೆ.
ಜಯನಗರದ ಸೌತ್ ಎಂಡ್ ವೃತ್ತದ ಬಳಿ ಮಳೆಗೆ ಬಿದ್ದಿದ್ದ ಮರಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸಮಾಜ ಸೇವಕ, ಹೋಟೆಲ್ ಮಾಲೀಕರೊಬ್ಬರು ಸಾವನ್ನಪ್ಪಿದ್ದಾರೆ. ಮರ ಬಿದ್ದರೂ ತೆರವುಗೊಳಿಸದ ಬಿಬಿಎಂಪಿ ನಿರ್ಲಕ್ಷ್ಯತೆ ವಿರುದ್ಧ ಸರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋಟೆಲ್ ಸಂಘದಲ್ಲಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ನಾಗರಾಜ್ (71) ಮೃತಪಟ್ಟವರು. ಸೌತ್ ಎಂಡ್ ವೃತ್ತದಲ್ಲಿ ಪುಟ್ಟ ಹೋಟೆಲ್ ಇಟ್ಟುಕೊಂಡಿದ್ದರು. ಎಂದಿನಂತೆ ಸೋಮವಾರ ಬೆಳಗ್ಗೆ ಅಂಗಡಿ ತೆಗೆಯಲು ತೆರಳಿದ್ದಾರೆ. ರಾತ್ರಿ ಮಳೆಯಿಂದಾಗಿ ರಸ್ತೆಗೆ ಉರುಳಿ ಬಿದ್ದಿದ್ದ ಮರಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದಿದ್ದಾರೆ. ತಲೆಗೆ ತಿವ್ರತರ ಪೆಟ್ಟಾಗಿದ್ದು, ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಹಿರಿಯ ವ್ಯಕ್ತಿ ತನ್ನ ಜೀವ ಕಳೆದುಕೊಂಡಿದ್ದಾರೆ. ಈ ಸಂಬಂಧ ಬಸವನಗುಡಿ ಸಂಚಾರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆರು ಎಮ್ಮೆ ಮತ್ತು ಮೇಕೆ ಕಣ್ಮರೆ: ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ರಾಜ ಕಾಲುವೆ ನೀರು ನುಗ್ಗಿ ಆರು ಮೇಕೆ ಮತ್ತು ಆರು ಎಮ್ಮೆಗಳು ನೀರಿಗೆ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿವೆ. ರಾಜರಾಜೇಶ್ವರಿ ನಗರದ ನಿವಾಸಿ ರೈತ ಅಂದಾನಪ್ಪ ಎಂಬುವರಿಗೆ ಸೇರಿದ್ದು, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ರಾಜಕಾಲುವೆ ನೀರು ನುಗ್ಗಿ ಎಮ್ಮೆ ಮತ್ತು ಮೇಕೆಗಳು ಕೊಚ್ಚಿ ಹೋಗಿವೆ. ಇದರ ಜತೆಗೆ ರೈತ ತಂದಿಟ್ಟಿದ್ದ 30 ಮೂಟೆ ಬೂಸಾ ಮನೆಗೆ ಹಾನಿಯಾಗಿದೆ.
ಐಡಿಯಲ್ ಹೊಮ್ ನಲ್ಲಿ ಪರದಾಟ: ರಾಜರಾಜೇಶ್ವರಿನಗರದ ಐಡಿಯಂಲ್ ಹೋಮ್ ನಲ್ಲಿ ರಾಜ ಕಾಲುವೆ ನೀರು ನುಗ್ಗಿ ಶಿವಣ್ಣ ಎಂಬುವರ ಮನೆಗೆ ಹಾನಿಯಾಗಿದೆ. ಇಲ್ಲಿನ ಜನಪ್ರಿಯ ಬಡಾವಣೆಯ ಶಿವಣ್ಣ ಅವರ ಮನೆಗೆ ರಾಜ ಕಾಲುವೆಯ ಐದಾರು ಅಡಿ ನೀರು ನುಗ್ಗಿದ್ದು, ಮನೆಯ ಬಾಗಿಲುಗಳೇ ಕಿತ್ತುಬಂದಿವೆ. ಇಡೀ ಬಡಾವಣೆ ಜಲಾವೃತವಾಗಿ ಜನ ಸಾಮಾನ್ಯರು ಪರದಾಡುವಂತಾಗಿದೆ. ಮನೆಯ ನೀರನ್ನು ಹೊರ ಚೆಲ್ಲುವ ಮೂಲಕ ದಿನ ಕಳೆದಿದ್ದಾರೆ.
ಎಚ್ಎಎಲ್ ಬಳಿ ಗೋಡೆ ಕುಸಿತ: ಎಚ್ಎಎಲ್ ಸಮೀಪದ ರಮೆಶ್ ನಗರದಲ್ಲಿ ಹನ್ನೆರಡು ಅಡಿ ಎತ್ತರದ ಗೋಡೆ ಕುಸಿದು ಹತ್ತಕ್ಕೂ ಹೆಚ್ಚು ವಾಹನ ಜಖಂ ಆಗಿವೆ. ಎಚ್ಎಎಲ್ಗೆ ಸೇರಿದ ಗೋಡೆ ಕುಸಿದಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಚ್ಎಎಲ್ಗೆ ಸೇರಿದ ಗೋಡೆ ಇದಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ರಮೇಶ್ ನಗರದಲ್ಲಿ ಹತ್ತಕ್ಕೂ ಹೆಚ್ಚು ವಾಹನ ಜಖಂ ಆಗಿವೆ. ಎಚ್ಎಎಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಿಬಿಎಂಪಿ ನಿರ್ಲಕ್ಷ್ಯ: ರಾಜಧಾನಿ ಬೆಂಗಳೂರಿನಲ್ಲಿ ಎರಡು ತಾಸು ಸುರಿದ ಮಳೆಗೆ ರಾಜ ಕಾಲುವೆಗಳು ಉಕ್ಕಿ ಹರಿದು ಅವಘಡಗಳು ಸಂಭವಿಸಿವೆ. ಒಂದಡೆಗೆ ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವುಗೊಳಿಸುವ ಗೋಜಿಗೆ ಬಿಬಿಎಂಪಿ ಹೋಗಿಲ್ಲ. ಇನ್ನೊಂದೆಡೆ ಅವಘಡ ಸಂಭವಿಸಿದರು ಕ್ಷಿಪ್ರ ಕಾರ್ಯಾಚರಣೆಗೂ ಮುಂದಾಗಲ್ಲ. ಬಿಬಿಎಂಪಿಯ ನಿರ್ಲಕ್ಷ್ಯತೆ ನೋಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಸುರಿದ ಮಳೆಗೆ ಬಿದ್ದಿದ್ದ ಮರವನ್ನು ತೆರವುಗೊಳಿಸದ ಪರಿಣಾಮ ಅಮಾಯಕ ಜೀವ ಕಳೆದುಕೊಂಡಿರುವ ಘಟನೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Recommended Video