ರಾಜ್ಯದಲ್ಲಿ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆ, ಸಿಡಿಲಿಗೆ ಮೂವರು ಬಲಿ
ಬೆಂಗಳೂರು, ಏಪ್ರಿಲ್ 29 : ದೇಶದ ಹಲವು ರಾಜ್ಯಗಳಲ್ಲಿ ಬಿಸಿಲಿನ ಬೇಗೆಯಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ. ಆದರೆ, ಕರ್ನಾಟಕದ ಉತ್ತರ ಭಾಗಗಳಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು, ವಿಜಯನಗರ, ರಾಯಚೂರು, ಬೆಳಗಾವಿ, ಹಾವೇರಿ, ಧಾರವಾಡ, ಹುಬ್ಬಳ್ಳಿ, ಹಾಸನ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಮೇತ ಆಲಿಕಲ್ಲು ಮಳೆಯಾಗಿದ್ದು, ಮಳೆ ಆರ್ಭಟಕ್ಕೆ ಮೂವರು ಬಲಿಯಾಗಿದ್ದಾರೆ.
ವಾಯುಭಾರ ಕುಸಿತದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದು, ರಾಯಚೂರು ಜಿಲ್ಲೆಯ ಬನ್ನಿಹೊಳ ಗ್ರಾಮದ ಹೊರವಲಯದಲ್ಲಿ ಕುರಿ ಮೇಯಿಸುತ್ತಿದ್ದ ರಾಮಪ್ಪ ಬಸಪ್ಪ ಪೂಜಾರಿ (35) ಹಾಗೂ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿ ಗ್ರಾಮದ ಲತಾ ಕಲಕೇರಿ (27) ಸಿಡಿಲಿಗೆ ಬಲಿಯಾಗಿದ್ದಾರೆ. ಮತ್ತೊಂದೆಡೆ, ಹಗರಿಬೊಮ್ಮನಹಳ್ಳಿ ತಾಲೂಕು ಬಲ್ಲಾಹುಣ್ಸಿ ಗ್ರಾಮದ ಹೊರವಲಯದಲ್ಲಿ ರೇಷ್ಮೆ ಗೂಡಿನ ಮನೆ ಕಟ್ಟಡ ನಿರ್ಮಾಣದ ಬಳಿ ಮಳೆಯಿಂದ ಗೋಡೆ ಕುಸಿದು ಬೆಣ್ಣೆಕಲ್ಲು ಗ್ರಾಮದ ನಿವಾಸಿ, ಕಟ್ಟಡ ಕಾರ್ಮಿಕ ಸಾಸಿವೆಹಳ್ಳಿ ಚಂದ್ರಶೇಖರ (30) ಗುರುವಾರ ಸಂಜೆ ಸಾವನ್ನಪ್ಪಿದ್ದಾರೆ. ಇತರೆ ಎಂಟು ಕಾರ್ಮಿಕರು ತ್ರೀವ ಗಾಯಗೊಂಡಿದ್ದಾರೆ.
ಬಿಸಿಲ ಬೇಗೆಯಲ್ಲೂ ಮೈಸೂರು ಮೃಗಾಲಯ ಕೂಲ್ ಕೂಲ್!
ಇನ್ನು ವಿಜಯಪುರ ತಾಲೂಕಿನ ಓಣಿ ನದಿ ಬಳಿ ಬೈಕ್ನಲ್ಲಿ ಹೋಗುತ್ತಿದ್ದ ಶರಣಯ್ಯ ಸಂಗಮದ (45) ಹಾಗೂ ಪತ್ನಿ ಕವಿತಾ ಸಂಗಮದ (40) ಸಿಡಿಲಿನಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾವೇರಿ ತಾಲೂಕಿನ ಹಿರೇಲಿಂಗದಹಳ್ಳಿ ಗ್ರಾಮದಲ್ಲಿ ತೆಂಗಿನ ಮರ ಸಿಡಿಲು ಹೊಡೆದು ಹೊತ್ತಿ ಉರಿದಿದೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಜಮ್ಮನಕಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಬಣವಿಗಳು ಸುಟ್ಟು ಭಸ್ಮವಾಗಿವೆ.
ಸದ್ಯ ರಾಜ್ಯದಲ್ಲಿ ಬಿಸಿಲು ಮಳೆ ಆರಂಭವಾಗಿದ್ದು, ಮುಂದಿನ ಎರಡು ದಿನಗಳ ಕಾಲ ಮಳೆ ಇದೇ ರೀತಿ ಮುಂದುವರೆಯುವ ಸಾಧ್ಯತೆ ಇದೆ . ನಿನ್ನೆ ಮೊನ್ನೆಯೆಲ್ಲಾ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಕೆಲವೆಡೆ ಮಳೆಯಾಗಿದ್ದು, ಗುಡುಗು , ಮಿಂಚು, ಸಿಡಿಲಿನ ಆರ್ಭಟ ಹೆಚ್ಚಾಗಿದೆ. ತುಂಗಾಭದ್ರ ನದಿ ಪಾತ್ರದಲ್ಲಿ ಭತ್ತದ ಕಟಾವು ಆರಂಭವಾಗಿದ್ದು, ಮಳೆಯಿಂದ ರೈತರು ಆತಂಕಗೊಂಡಿದ್ದಾರೆ. ಗಂಗಾವತಿ ತಾಲೂಕಿನಲ್ಲಿ 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಸದ್ಯ ಈ ಅಕಾಲಿಕ ಮಳೆಯಿಂದಾಗಿ ರೈತರು ಫಸಲಿಗೆ ಬಂದ ಬೆಳೆ ಎಲ್ಲಿ ನಾಶವಾಗುತ್ತದೋ ಎಂಬ ಆತಂಕದಲ್ಲಿದ್ದಾರೆ.
ಬಿಸಿಲಿನ ತಾಪ: ರಾಜ್ಯದ ಸರ್ಕಾರಿ ಕಚೇರಿಗಳ ಕೆಲಸದ ಅವಧಿ ಬದಲು!
ಕೊಡಗು, ಹಾಸನ, ಹುಬ್ಬಳ್ಳಿಯಲ್ಲೂ ಗುರುವಾರ ಗುಡುಗು ಸಮೇತ ಭಾರಿ ಮಳೆಯಾಗಿದೆ. ಬಿಸಿಲಿನ ತಾಪದಿಂದ ಕಂಗೆಟ್ಟಿದ ಜನರಿಗೆ ವರುಣ ತಂಪೆರೆದಿದ್ದಾನೆ. ನಿನ್ನೆ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ವಾತಾವರಣ ತಂಪಿನಿದೆ ಕೂಡಿದ್ದು, ಇನ್ನು ಎರಡು ದಿನಗಳ ನಗರದಲ್ಲಿ ಮಳೆಯಾಗುವ ನಿರೀಕ್ಷೆ ಇದೆ.
ಗುರುವಾರ ಬೀದರ್ನ ಬಸವಕಲ್ಯಾಣದಲ್ಲಿ 17 ಮಿಮೀ, ಹಾವೇರಿಯ ರಟ್ಟಿಹಳ್ಳಿಯಲ್ಲಿ 12 ಮಿಮೀ, ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯಲ್ಲಿ 10,ಮಿಮೀ ಮಳೆಯಾಗಿದೆ. ವಾಯುಭಾರ ಕುಸಿತದಿಂದ ಅಲೆಗಳು ಉತ್ತರ ಭಾರತದಿಂದ ದಕ್ಷಿಣ ತಮಿಳುನಾಡು ಕಡೆ ಚಲಿಸುತ್ತಿವೆ. ಹೀಗಾಗಿ ರಾಜ್ಯದ ಒಳನಾಡು ಜಿಲ್ಲೆಗಳ ಮೇಲೆ ಹಾದು ಹೋಗುತ್ತಿರುವ ಪರಿಣಾಮ, ಉತ್ತರ ಮತ್ತು ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು, ಇನ್ನೆರಡು ದಿನಗಳು ಮಳೆ ಮುಂದುವರೆಯುವ ಸಾಧ್ಯತೆ ಇದೆ.