Breaking: ರಾಜ್ಯದಲ್ಲಿ ಮಳೆಗೆ 73 ಮಂದಿ ಬಲಿ; ಆರ್.ಅಶೋಕ್
ಬೆಂಗಳೂರು, ಆಗಸ್ಟ್ 08: ಕಳೆದ ಎರಡು ತಿಂಗಳಿನಿಂದ ಸತತವಾಗಿ ಸುರಿದ ಮಳೆ ಮತ್ತು ಮಳೆ ಸಂಬಂಧಿತ ಘಟನೆಗಳಲ್ಲಿ ಈವರೆಗೆ ರಾಜ್ಯದಲ್ಲಿ 73 ಜನರು ಬಲಿಯಾಗಿದ್ದಾರೆ ಎಂದು ಕಂದಾಯ ಸಚಿವ ಮತ್ತು ವಿಪತ್ತು ನಿರ್ವಹಣಾ ಉಪಾಧ್ಯಕ್ಷ ಆರ್.ಅಶೋಕ್ ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಂದಾಯ ಸಚಿವ ಆರ್ ಅಶೋಕ್, "ಕೊಡಗು, ಹಾಸನ ಮಂಡ್ಯ, ರಾಮನಗರ, ಚಾಮರಾಜನಗರ, ತುಮಕೂರು, ಭಟ್ಕಳ ಸೇರಿದಂತೆ ೧೩ ಜಿಲ್ಲೆಗಳ ಪ್ರವಾಸ ಮಾಡಿ, ರಾಜ್ಯದಲ್ಲಿನ ಪ್ರವಾಹ ಪರಿಸ್ಥತಿಯನ್ನು ಅವಲೋಕಿಸಿರುವುದಾಗಿ," ತಿಳಿಸಿದರು.
ಮಾಳೆಕೊಪ್ಪಲು ಗ್ರಾಮದಲ್ಲಿ ಬೃಹತ್ ಮರ ಉರುಳಿ ಬೈಕ್ ಸವಾರ ಸಾವು
ರಾಜ್ಯದಲ್ಲಿನ ಮಳೆ ಪರಿಸ್ಥಿತಿಯನ್ನು ವಿವರಿಸಿದ ಅವರು, "ರಾಜ್ಯದಲ್ಲಿ 14 ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಿವೆ. ಅದರಲ್ಲಿ 161 ಗ್ರಾಮಗಳಿವೆ. ಈವರೆಗೆ 21,727 ಜನರು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ" ಎಂದರು.
"ಮಳೆ ಸಂಬಂಧಿತ ಘಟನೆಗಳಲ್ಲಿ ಈವರೆಗೆ 73 ಜನರು ಸಾವನ್ನಪ್ಪಿದ್ದಾರೆ. ಸಿಡಿಲುಬಡಿದು 15 ಜನರು, ಮರಬಿದ್ದು 5 ಜನರು ಸಾವನ್ನಪ್ಪಿದ್ದಾರೆ. ಮನೆ ಕುಸಿದು 19 , ಪ್ರವಾಹಕ್ಕೆ ಸಿಲುಕಿ 24 ಜನರು, ಭೂಕುಸಿತದಿಂದ 9, ವಿದ್ಯುತ್ ಅಪಘಾತಕ್ಕೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ" ಎಂದು ಮಾಹಿತಿ ನೀಡಿದರು.
ಪ್ರವಾಹ ಪೀಡಿತ ಭಾಗಗಳಲ್ಲಿ 8197 ಸ್ಥಳಾಂತರ ಮಾಡಲಾಗಿದೆ. ರಾಜ್ಯದಲ್ಲಿ 75 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. ಇದರಲ್ಲಿ 7,386 ಮಂದಿ ಆಶ್ರಯ ಪಡೆದಿದ್ದಾರ ಎಂದರು.
ಇನ್ನು "ಹಿಂದೆ ಗಂಜಿ ಕೇಂದ್ರ ಎಂದು ಇದ್ದಿದ್ದನ್ನು ಅದನ್ನು ಕಾಳಜಿ ಕೇಂದ್ರ ಎಂದು ಮಾಡಿದ್ದೇವೆ. ಅಲ್ಲಿ ಗಂಜಿ, ಅನ್ನ, ಸಾಂಬರ್ ಬಿಟ್ಟು, ಚಪಾತಿ ಪಲ್ಯ, ಉಪ್ಪಿನಕಾಯಿ, ಹಪ್ಪಳ, ಮೊಸರು ಕೊಡಲಾಗುತ್ತದೆ. ಎಲ್ಲೆಲ್ಲಿ ಮೊಟ್ಟೆ ತೆಗೆದುಕೊಳ್ಳುತ್ತಾರೋ ಅಲ್ಲಿ ಮೊಟ್ಟೆ ಕೊಡಲು ಕೂಡ ಆದೇಶ ಮಾಡಲಾಗಿದೆ. ಪ್ರತಿ ದಿನ ಬೇರೆ ಬೇರೆ ಉಪಹಾರ ನೀಡಲು ಆದೇಶಿಸಲಾಗಿದೆ. ಕಾಳಜಿ ಕೇಂದ್ರದಲ್ಲಿ ಇರುವವರಿಗೆ ಟೂತ್ ಪೇಸ್ಟ್, ಬ್ರೆಶ್, ಸೋಪು, ಆದರೆ ಒಂದು ಟವಲ್ ಕೊಡಲು ಹೇಳಿದ್ದೇನೆ, ಕೆಲವೆಡೆ ಬೆಡ್ಶಿಟ್, ದಿಂಬು ಕೊಟ್ಟಿದ್ದೇವೆ" ಎಂದರು.
"ಇನ್ನು ಕೆಲವರು ಈ ಕೇಂದ್ರಗಳಿಗೆ ಬರಲು ನಿರುತ್ಸಾಹ ತೋರಿಸಿ ಸ್ನೇಹಿತರು ಸಂಬಂಧಿಕರ ಮನೆಗ ಹೋಗುತ್ತಿದ್ದಾರೆ. ಇವರಿಗಾಗಿ ಅವರಿಗೆ ಕಾಳಜಿ ಕಿಟ್ ನೀಡುವ ಹೊಸ ವ್ಯವಸ್ಥೆ ಜಾರಿಗೆ ಇಂದಿನಿಂದ ಜಾರಿಗೆ ತರುತ್ತೇನೆ. 10 ಕೆ.ಜಿ ಅಕ್ಕಿ, ತೊಗರಿ ಬೆಳೆ, ಉಪ್ಪು, ಎಣ್ಣೆ, ಅರಿಶಿಣದ ಪುಡಿ, ಎಣ್ಣೆ, ಖಾರದ ಪುಡಿ ಸೇರಿದಂತೆ ಹತ್ತರಿಂದ ಹದಿನೈದು ದಿನಕ್ಕೆ ಆಗುವಷ್ಟು ದಿನಸಿ ನೀಡುತ್ತೇವೆ. ಕಾಳಜಿ ಕೇಂದ್ರದಲ್ಲಿ ಇರುವವರಿಗೂ ಕೂಡ ದಿನಸಿ ನೀಡಲಾಗುತ್ತದೆ' ಎಂದು ಮಾಹಿತಿ ನೀಡಿದರು.
ಪ್ರವಾಹ ಬಂದಾಗ ನಾವು ಅನಾಥರು ಎನ್ನುವ ಭಾವನೆ ಬರಬಾರದು ಎಂಬ ದೃಷ್ಠಿಯಿಂದ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.