ಭಾರಿ ಮಳೆಗೆ ಬೆಂಗಳೂರು ತತ್ತರ: 350ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಬೆಂಗಳೂರು,ಸೆಪ್ಟೆಂಬರ್ 10: ನಗರದಲ್ಲಿ ಮಂಗಳವಾರ ಮತ್ತು ಬುಧವಾರ ರಾತ್ರಿ ಅಬ್ಬರಿಸಿದ ಭಾರಿ ಮಳೆಗೆ ನಗರದ 20ಕ್ಕೂ ಹೆಚ್ಚು ಬಡಾವಣೆಗಳು ತತ್ತರಿಸಿದ್ದು, ತಗ್ಗುಪ್ರದೇಶದ 350ಕ್ಕೂ ಹೆಚ್ಚು ಮನೆಗಳು ಹಾಗೂ ಹತ್ತಾರು ಅಪಾರ್ಟ್ಮೆಂಟ್ಗಳ ಸೆಲ್ಲಾರ್ಗಳಿಗೆ ನೀರು ತುಂಬಿ ಅಲ್ಲಿನ ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಮಂಗಳವಾರ ಮಳೆಯಿಂದ ಜಲಾವೃತಗೊಂಡ ಹೆಣ್ಣೂರು, ಮನೋರಾಯನಪಾಳ್ಯ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ
ಈ ವೇಳೆ ಗೌತಮ್ ಕುಮಾರ್ ಮಾತನಾಡಿ' ಮಂಗಳವಾರ ಸುರಿದ ಮಳೆಯಿಂದ ಸುಮಾರು 200 ಮನೆಗಳಿಗೆ ನೀರು ನುಗ್ಗಿದೆ. ಬೆಂಗಳೂರಿನಲ್ಲಿ ಇನ್ನೂ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ರಕ್ಷಣಾ ಕಾರ್ಯಗಳು ನಡೆಯುತ್ತಿವೆ.
ಮಳೆಯಿಂದ ವಿವಿಧ ರಸ್ತೆಗಳಲ್ಲಿ ಹತ್ತಾರು ಮರಗಳು ಧರೆಗುರುಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡರೆ, ಪ್ರಮುಖ ಅಂಡರ್ಪಾಸ್ ಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಮಂಗಳವಾರ ರಾತ್ರಿ ಇಡೀ ಅಡ್ಡಿಯುಂಟಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಈ ಮಧ್ಯೆ , ತುಮಕೂರು ರಸ್ತೆಯ ನೆಲಗದರನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಆಕ್ರೋಶಗೊಂಡ ಸಂತ್ರಸ್ತರು ರಸ್ತೆಗೆ ಕಲ್ಲು, ಮರದ ದಿಮ್ಮಿಗಳನ್ನು ಇಟ್ಟು ಸ್ಥಳೀಯ ಶಾಸಕರು ಮತ್ತು ಕಾರ್ಪೊರೇಟರ್ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ.
ಬುಧವಾರ ರಾತ್ರಿ 2 ಗಂಟೆಯಲ್ಲಿ 109 ಮಿ.ಮೀ ಮಳೆ
ಬುಧವಾರ ರಾತ್ರಿ 10 ಗಂಟೆಯವರೆಗೆ ಸರಾಸರಿ 20 ಮಿ.ಮೀ ಮಳೆಯಾಗಿದ್ದು, ಅಗ್ರಹಾರ ದಾಸರಹಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 109 ಮಿ.ಮೀ ಮಳೆ ದಾಖಲಾಗಿದೆ. ಇದರ ಪರಿಣಾಮ ಆರ್ಆರ್ನಗರ ವಲಯದಲ್ಲಿ ಹೆಚ್ಚು ಹಾನಿ ಉಂಟಾಗಿದ್ದು, ಐಡಿಯಲ್ ಹೋಮ್ಸ್ ಬಡಾವಣೆ, ಕೆಂಚೇನಹಳ್ಳಿ, ಪ್ರಮೋದ್ ಲೇಔಟ್, ಜನಪ್ರಿಯಾ ಅಬೋರ್ಡ್, ಮೈಲಸಂದ್ರ ತಗ್ಗುಪ್ರದೇಶ ಮನೆ ಮತ್ತು ಅಪಾರ್ಟ್ಮೆಂಟ್ಗಳಿಗೆ ನೀರು ನುಗ್ಗಿದೆ. ಇನ್ನು ಲೊಟ್ಟೆಗೊಲ್ಲಹಳ್ಳಿ ಅಪಾರ್ಟ್ಮೆಂಟ್ ಬೇಸ್ಮೆಂಟ್ಗೆ ನೀರು ನುಗ್ಗಿದ್ದರಿಂದ ಕಾರುಗಳು ಮುಳುಗಡೆಯಾಗಿವೆ.
ಇನ್ನೂ ಎರಡು ದಿನ ಮಳೆಯ ಮುನ್ಸೂಚನೆ
ಕರಾವಳಿ ಸಮುದ್ರ ಭಾಗದಿಂದ ಕಡಿಮೆ ಗಾಳಿ ಒತ್ತಡದ ವಿಸ್ತರಿಸಿದ ಪ್ರದೇಶ(ಟ್ರಫ್) ಏರ್ಪಟ್ಟಿದ್ದು, ಇದು ಬೆಂಗಳೂರು ಮೂಲಕ ಚೆನ್ನೈ ಕಡೆಗೆ ಕೇವಲ 3.1 ಕಿ.ಮೀ ಅಂತರದಲ್ಲಿ ಹಾದುಹೋಗಿದೆ. ಹಾಗಾಗಿ ನಗರದಲ್ಲಿ ಭಾರಿ ಮಳೆಯಾಗುತ್ತಿದೆ. ಇದು ಇನ್ನೂ 2 ದಿನ ಭಾರಿ ಮಳೆ ಮುಂದುವರೆಯಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ತಿಳಿಸಿದೆ.
350 ಮನೆಗಳಿಗೆ ನೀರು ನುಗ್ಗಿದೆ
ಎರಡು ದಿನಗಳ ಭಾರಿ ಮಳೆಯಲ್ಲಿ ಮಂಗಳವಾರ ಇಡೀ ರಾತ್ರಿ ಸುರಿದ ಮಳೆಯಿಂದಾಗಿ ಅನಾಹುತವೇ ಹೆಚ್ಚು. ಅಂದು ರಾತ್ರಿ ನಗರದಲ್ಲಿ ಸರಾಸರಿ 57 ಮಿ.ಮೀನಷ್ಟು ಮಳೆಯಾಗಿದೆ. ಕುಶಾಲನಗರ ಮತ್ತು ಮನೋರಾಯನಪಾಳ್ಯದಲ್ಲಿ ಅತಿ ಹೆಚ್ಚು ಅಂದರೆ 136 ಮಿ.ಮೀ ಮಳೆಯಾಗಿದೆ.ಇದರ ಪರಿಣಾಮ ರಾಧಾಕೃಷ್ಣ ದೇವಸ್ಥಾನ ವಾರ್ಡ್ , ಮನೋರಾಯನಪಾಳ್ಯ, ಹೆಣ್ಣೂರು, ಹೊರಮಾವು, ಸಹಕಾರನಗರ, ವಡ್ಡರಪಾಳ್ಯ, ಗರುಡಾಚಾರಪಾಳ್ಯ, ಕಾವೇರಿನಗರ, ರಾಮಮೂರ್ತಿನಗರ, ಸಾಯಿಬಾಬಾ ಲೇಔಟ್, ಯಲಹಂಕ, ಮಹದೇವಪುರ, ನೆಲಗದರನಹಳ್ಳಿಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
Recommended Video
ರಸ್ತೆಯಲ್ಲಿ 4 ಅಡಿ ನೀರು
ಹೆಣ್ಣೂರಿನ ಸಾಯಿಬಾಬಾ ಲೇಔಟ್ನಲ್ಲಿ ರಸ್ತೆ ಹಾಗೂ ಮೋರಿಗಳಲ್ಲಿ ನೀರು ಸರಾಗವಾಗಿ ಹರಿಯದೆ ಸುಮಾರು ನಾಲ್ಕು ಅಡಿಗಳಷ್ಟು ನೀರು ರಸ್ತೆಯಲ್ಲಿ ನಿಂತ ಪರಿಣಾಮ ಸಾಯಿಮಂದಿರ ಸಂಪೂರ್ಣ ಜಲಾವೃತಗೊಂಡಿದೆ. ಬಡಾವಣೆಯ ಅನೇಕ ಮನೆ,ಅಂಗಡಿ ಮಳಿಗೆ ಹಾಗೂ ನೆಲ ಮಹಡಿಯಲ್ಲಿ ನೀರು ತುಂಬಿಕೊಂಡಿದ್ದರಿಂದ ಈ ಭಾಗದಲ್ಲಿ 50ಕ್ಕೂ ಹೆಚ್ಚು ಕಾರು, ಬೈಕ್ ಸೇರಿದಂತೆ ಇನ್ನಿತರೆ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ,.