ಕೊರೊನಾ ವೈರಸ್: ಆರೋಗ್ಯ ಅಧಿಕಾರಿ ಮೇಲೆ ಹಲ್ಲೆ; ಬಂಧನ
ಬೆಂಗಳೂರು, ಏ. 04: ಕೊರೊನಾ ವೈರಸ್ ಹರಡದಂತೆ ತಡೆಯಲು ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂಥವರ ಮೇಲೆಯೆ ದುರುಳರು ಹಲ್ಲೆ ಮಾಡುತ್ತಿದ್ದಾರೆ. ಇಡೀ ಜಗತ್ತಿಗೆ ಕೊರೊನಾ ವೈರಸ್ ದೊಡ್ಡ ಆತಂಕ ತಂದಿದೆ. ಆದರೂ ತಿಳಿವಳಿಕೆ ಇಲ್ಲದ ಒಂದಿಷ್ಟು ಜನರು ಮಾತ್ರ ತಾವು ಅತೀತರು ಎಂಬಂತೆ ಕೊರೊನಾ ವೈರಸ್ ಕುರಿತು ಕನಿಷ್ಟ ಜ್ಞಾನವಿಲ್ಲದ ವರ್ತನೆ ಮಾಡುತ್ತಿದ್ದಾರೆ. ಸೂಚನೆ ಕೊಡುವ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಾರೆ. ಕೆಲವಡೆ ಹಲ್ಲೆಯನ್ನೂ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮತ್ತೊಂದು ಇಂತಹ ಘಟನೆ ನಡೆದಿದೆ. ಇಲ್ಲಿನ ಆರ್ ಟಿ ನಗರದ ಪಿಆರ್ಟಿಸಿ ಜಂಕ್ಷನ್ ರಸ್ತೆ ಪಕ್ಕದಲ್ಲಿ ನಾಸೀರ್ ಎಂಬ ವ್ಯಕ್ತಿ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಮಾರಾಟ ಮಾಡುತ್ತಿದ್ದ. ಇದನ್ನ ನೋಡಿದ ಹಿರಿಯ ಆರೋಗ್ಯ ಇನ್ಸ್ಪೆಕ್ಟರ್ ನಸೀರ್ ಬಳಿ ಹೋಗಿ, ಕೊರೊನಾ ವೈರಸ್ ಹರಡುವ ಸಾಧ್ಯತೆ ಹಿನ್ನೆಲೆ ಯಾರೂ ಕೂಡ ಹೀಗೆ ಹಣ್ಣುಗಳನ್ನ ಕಟ್ ಮಾಡಿ ಮಾರಾಟ ಮಾಡಬಾರದು. ಹಾಗೆ ಮಾಡಿದ್ರೆ ಕೊರೊನಾ ರೋಗ ಜನರಿಗೆ ಹರಡುವ ಸಾಧ್ಯತೆ ಇದೆ. ಪೂರ್ತಿ ಹಣ್ಣನ್ನು ಮಾರಾಟ ಮಾಡು ಎಂದು ಹಿರಿಯ ಆರೋಗ್ಯ ಇನ್ಸ್ಪೆಕ್ಟರ್ ಅನೀಸ್ ಪಾತಿಮಾ ಹೇಳಿದ್ದಾರೆ.
ಇದನ್ನು ಕೇಳದ ಕಲ್ಲಂಗಡಿ ಹಣ್ಣು ಮಾರಾಟ ಮಾಡುತ್ತಿದ್ದ ನಸೀರ್, ಅದನ್ನೆಲ್ಲಾ ಕೇಳೋಕೆ ನೀನ್ಯಾರು ಎಂದು ಪ್ರಶ್ನೆ ಮಾಡಿದ್ದಾನೆ. ಕೊನೆಗೆ ಅವಾಚ್ಯ ಶಬ್ದಗಳಿಂದ ಅನೀಸ್ ಪಾತಿಮಾ ಅವರನ್ನು ನಿಂದಿಸಿ, ಅವರ ಮೇಲೆ ಕಲ್ಲಂಗಡಿ ಹಣ್ಣನ್ನೆ ಎಸೆದಿದ್ದಾನೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಆರೋಗ್ಯ ಇನ್ಸಪೆಕ್ಟರ್ ಮೇಲೆ ಹಲ್ಲೆಗೆ ಮುಂದಾಗಿದ್ದ ನಸೀರ್ನನ್ನು ಬಂಧಿಸಿ ಐಪಿಸಿ ಸೆಕ್ಷನ್ 353, 354, 504, 506 ಹಾಗೂ 509 ಅಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ.