ಕೊವಿಡ್19 ಆಸ್ಪತ್ರೆಯಲ್ಲೇ ಕಡತ ಪರಿಶೀಲಿಸಿದ ಆರೋಗ್ಯ ಸಚಿವ ಶ್ರೀರಾಮುಲು
ಬೆಂಗಳೂರು, ಆಗಸ್ಟ್.11: ನೊವೆಲ್ ಕೊರೊನಾವೈರಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆ ಕೊವಿಡ್-19 ಆಸ್ಪತ್ರೆಗೆ ದಾಖಲಾಗಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರು ಆಸ್ಪತ್ರೆಯಲ್ಲಿಯೇ ಅಗತ್ಯ ಕಡತಗಳ ಪರಿಶೀಲನೆ ನಡೆಸಿದ್ದಾರೆ.
Recommended Video
"ಕೊರೊನ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ, ಸೂಕ್ತ ಸುರಕ್ಷಿತ ಕ್ರಮಗಳ ನಡುವೆ ಕೆಲವು ಕಡತಗಳ ಪರಿಶೀಲನೆ ಮಾಡಲಾಯಿತು. ಅಗತ್ಯ ಸಾರ್ವಜನಿಕ ಕೆಲಸಗಳು ನಿಲ್ಲಬಾರದೆಂಬ ದೃಷ್ಟಿಯಿಂದ ಕೆಲವು ತುರ್ತು ಕೆಲಸಗಳನ್ನು ಆಸ್ಪತ್ರೆಯಿಂದಲೇ ನಿರ್ವಹಿಸುತ್ತಿದ್ದೇನೆ. ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು" ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ಸಚಿವ ಶ್ರೀರಾಮುಲುಗೆ ಕೋವಿಡ್ ಸೋಂಕು; ಸರ್ಕಾರಿ ಆಸ್ಪತ್ರೆಗೆ ದಾಖಲು
ಕಳೆದ ಆಗಸ್ಟ್.09ರಂದು ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿತ್ತು. ಈ ವೇಳೆ ಬೆಂಗಳೂರಿನಲ್ಲೇ ಇದ್ದ ಸಚಿವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ರಾಜ್ಯದಲ್ಲಿ ಜನಪ್ರತಿನಿಧಿಗಳಿಗೆ ಕೊರೊನಾವೈರಸ್:
ರಾಜ್ಯದಲ್ಲಿ ಜನಪ್ರತಿನಿಧಿಗಳಿಗೆ ಕೊರೊನಾವೈರಸ್ ಸೋಂಕು ಬೆನ್ನು ಬಿಡದ ಭೂತದಂತೆ ಕಾಡುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ಬಿ. ಸಿ. ಪಾಟೀಲ್, ಸಾಗರ ಶಾಸಕ ಹರತಾಳು ಹಾಲಪ್ಪ, ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಮಾಜಿ ಸಂಸದ ಎಸ್ ಎಸ್ ಮಲ್ಲಿಕಾರ್ಜುನ್ ಸೇರಿದಂತೆ ಕರ್ನಾಟಕದ ಹಲವು ಶಾಸಕರು ಮತ್ತು ಸಚಿವರಿಗೆ ಈವರೆಗೆ ಕೊವಿಡ್-19 ಸೋಂಕು ತಗುಲಿತ್ತು.