ಟೆಕ್ಕಿ ಖಾತೆಯಿಂದ 56 ಸಾವಿರ ದೋಚಿದ ಹ್ಯಾಕರ್
ಬೆಂಗಳೂರಿನ ವಿದ್ಯಾಣ್ಯಪುರದಲ್ಲಿ ವಾಸಿಸುತ್ತಿರುವ ರಮೇಶ್ ಆರ್.ಮಾಗಡಿ ಎಂಬ ಸಾಫ್ಟ್ವೇರ್ ಇಂಜಿನಿಯರ್ ಇತ್ತೀಚೆಗೆ ಅಮೆರಿಕಾದಿಂದ ಮರಳಿದ್ದರು. ನಂತರ ತಮ್ಮ ಆಕ್ಸಿಸ್ ಬ್ಯಾಂಕ್ ಅಕೌಂಟ್ ನಂ ಮೂಲಕ, ಆನ್ ಲೈನ್ ನಲ್ಲಿ ತಿರುಪತಿಗೆ 2 ಕೆಎಸ್ಆರ್ ಟಿಸಿ ಟಿಕೆಟ್ ಬುಕ್ ಮಾಡಿದ್ದಾರೆ.
ಎರಡು ದಿನಗಳ ನಂತರ ರಮೇಶ್ ತಿರುಪತಿಯಲ್ಲಿ ಶಾಪಿಂಗ್ ಮಾಡಿದ ಹಣವನ್ನು ಪಾವತಿಸಲು ಹೋದಾಗ ಅಕೌಂಟ್ ನಲ್ಲಿ ಹಣವಿಲ್ಲ ಎಂಬ ಮಾಹಿತಿ ತಿಳಿಯಿತು. ಅಕೌಂಟ್ ನಲ್ಲಿ 56,000ರೂ ಹಣವಿದ್ದರೂ ಅದು ಬರಿದಾಗಿದ್ದು, ಹೇಗೆ? ಎಂದು ರಮೇಶ್ ತಲೆಕೆಡಿಸಿಕೊಂಡಿದ್ದಾರೆ.
ತಕ್ಷಣ ಬ್ಯಾಂಕ್ ಗೆ ರಮೇಶ್ ಕರೆ ಮಾಡಿದ್ದಾರೆ. ಆಗ ಜು.27ರ ನಂತರ 25 ಬಾರಿ ನಿಮ್ಮ ಅಕೌಂಟಿನಿಂದ ಆನ್ ಲೈನ್ ಪೇಮೆಂಟ್ ಮಾಡಲಾಗಿದೆ. ಆದ್ದರಿಂದ ಹಣ ಖಾಲಿಯಾಗಿದೆ ಎಂದು ಬ್ಯಾಂಕಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ಯಾಂಕಿಗೆ ಈ ಕುರಿತು ದೂರು ನೀಡಿದಾಗ ಜಮ್ಮ ಮತ್ತು ಕಾಶ್ಮೀರ, ವಡೋದರಾ ಮತ್ತು ಮಹಾರಾಷ್ಟ್ರದಲ್ಲಿ ರಮೇಶ್ ಅಕೌಂಟ್ ನಿಂದ ಆನ್ ಲೈನ್ ಪೇಮೆಂಟ್ ಮಾಡಿರುವುದು ತಿಳಿದುಬಂದಿದೆ. ಆಗ ರಮೇಶ್ ಅವರ ಅಕೌಂಟ್ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ.
ಸದ್ಯ ದೂರು ಪಡೆದಿರುವ ಬ್ಯಾಂಕಿನ ಅಧಿಕಾರಿಗಳು ಖಾತೆಯಲ್ಲಿದ್ದ ಹಣವನ್ನು ಮರುಪಾವತಿ ಮಾಡುವುದಾಗಿ ಹೇಳಿದ್ದಾರೆ. ರಮೇಶ್ ಅಕೌಂಟಿನ ಹಣ ವಿಮಾ ಪಾಲಿಸಿ, ಆನ್ ಲೈನ್ ಶಾಂಪಿಗ್ ಮುಂತಾದವುಗಳಿಗೆ ಬಳಕೆಯಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.
ರಮೇಶ್ ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹ್ಯಾಕರ್ ಗಳಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.