ಬೈಕ್ ಸವಾರರ ಹಿಂದೆ ಬಿದ್ದಿರುವ ಯಮನ ಯಮ ಯಾತನೆಯೇನು?
ಬೆಂಗಳೂರು, ಜು.23: ಹೆಲ್ಮೆಟ್ ಹಾಕದಿದ್ದರೆ ಯಮ ಬರ್ತಾನೆ, ನಿಮ್ಮ ಬೈಕ್ ಹಿಂದೆ ಕೂರ್ತಾನೆ ಈ ಸುದ್ದಿಯನ್ನು ಎಲ್ಲರೂ ಓದಿರ್ತೀರಾ, ಆದರೆ ಈ ಯಮನ ವೇಷತೊಟ್ಟು ಇಡೀ ಬೆಂಗಳೂರಿನಲ್ಲಿ ರಸ್ತೆ ನಿಯಮಗಳು, ಹೆಲ್ಮೆಟ್ ಧರಿಸುವ ಕುರಿತು ಜಾಗೃತಿ ಮೂಡಿಸುತ್ತಿರುವ ಈ ಯಮ ಯಾರು ಅವರ ಹಿಂದಿರುವ ಕತೆ, ವ್ಯಥೆ ಏನು ಎಂದು ಯಾರಿಗೂ ತಿಳಿದಿಲ್ಲ.
ಇಲ್ಲಿದೆ ಓದಿ ಈ ಅಭಿಯಾನದ ಹಿಂದಿರುವ ಕಾರಣ, ವೀರೇಶ ಮುಟ್ಟಿನಮಠ ಇವರು ಒಬ್ಬ ಕಲಾವಿದರು, ನಾಟಕಗಳನ್ನು ನಿರ್ದೇಶಿಸಿ ತಾವೇ ಸ್ವತಃ ಅಭಿನಯಿಸಿದ ಅನುಭವವೂ ಇವರಿಗಿದೆ, ಅವರು ಪುಟ್ಟಗೌರಿ ಮದುವೆ, ಕುಲವಧು ಇನ್ನಿತರೆ ಟಿವಿ ದಾರವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಯಮ ಬರ್ತಾನೆ, ನಿಮ್ಮ ಬೈಕ್ ಹಿಂದೆ ಕೂರ್ತಾನೆ, ಹೆಲ್ಮೆಟ್ ಹಾಕ್ತೀರಾ ಇಲ್ವಾ?
ಆದರೆ ಕೆಲವು ದಿನಗಳಿಂದ ವೀರೇಶ್ ಅವರು ನಗರದ ರಸ್ತೆಗಳಲ್ಲಿ ಯಮನ ವೇಷ ತೊಟ್ಟು ತಿರುಗಾಡುತ್ತಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಸಂಚಾರ ನಿಯಮಗಳನ್ನು ಪಾಲಿಸದಿದ್ದವರನ್ನು ಅಲ್ಲಿಯೇ ತಡೆದು ಅವರಿಗೆ ಸಂಚಾರ ನಿಯಮಗಳನ್ನು ಹೇಳಿ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಈ ಕಾರ್ಯದಿಂದ ಪೊಲೀಸರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.
2017ರ ಜೂನ್ 21ರಂದು ವೀರೇಶ್ ಅವರ ಅಣ್ಣ ಮರಿಸ್ವಾಮಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರು ಬೈಕ್ ಓಡಿಸುವಾಗ ಹೆಲ್ಮೆಟ್ ಧರಿಸಿದೇ ಇರುವುದೇ ಅವರ ಸಾವಿಗೆ ಕಾರಣವಾಗಿತ್ತು. ತಲೆಗೆ ಹೆಚ್ಚು ಪಟ್ಟು ಬಿದ್ದಿದ್ದರಿಂದ ಕೋಮಾಕ್ಕೆ ಹೋಗಿ ಬಳಿಕ ಜು.23ರಂದು ಮೃತಪಟ್ಟಿದ್ದರು.
ವೈದ್ಯರು ಅವರ ಸಾವಿಗೆ ಕಾರಣವನ್ನು ತಿಳಿಸಿದಾಗ ತನ್ನ ಅಣ್ಣನನ್ನು ತಾನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ ಆದರೆ ಉಳಿದವರ ಪ್ರಾಣವನ್ನಾದರೂ ಈ ರೀತಿ ಜಾಗೃತಿ ಮೂಡಿಸುವ ಮೂಲಕ ಉಳಿಸಿಕೊಳ್ಳಬಹುದೇನೋ ಎಂಬ ನಿರ್ಧಾರ ಮಾಡಿದರು.
ಬಳಿಕ ಬೆಂಗಳೂರಿನ ರಸ್ತೆಯಲ್ಲಿ ಓಡಾಡುವಾಗ ಸಾವಿರಾರು ಮಂದಿ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದುದನ್ನು ಗಮನಿಸಿದ ಅವರು ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದರು. ನಮಗೆ ತಿಳಿಯದೆ ಸಾವಿರಾರು ಪ್ರಯಾಣಿಕರ ಜೀವವನ್ನು ಅವರು ಉಳಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.