ಎಚ್ಡಿಕೆ ಎರಡನೇ ಮದುವೆ ಕುರಿತು ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ
ಮಾಗಡಿ, ಜುಲೈ 31: ಎಚ್.ಡಿ.ಕುಮಾರಸ್ವಾಮಿ ಎರಡನೇ ಮದುವೆಯಾಗಿ, ಹೆಣ್ಣುಮಗು ಹುಟ್ಟಿದರೆ ಮತ್ತೆ ಎಚ್.ಡಿ.ದೇವೇಗೌಡರು ಪ್ರಧಾನಮಂತ್ರಿ ಆಗುತ್ತಾರೆ ಎಂದು ಯಾರೋ ಜ್ಯೋತಿಷಿಗಳು ಹೇಳಿದ್ದರಿಂದ ಕುಮಾರಸ್ವಾಮಿ ಎರಡನೇ ಮದುವೆ ಆಗಿದ್ದಾರೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ವಿವಾದ ಎಬ್ಬಿಸಿದ್ದಾರೆ.
ಜಮೀರ್ ಜೆಡಿಎಸ್ ಬಿಟ್ಟಿದ್ಯಾಕೆ, ರೇವಣ್ಣ ಕಂಡುಕೊಂಡ ಸತ್ಯ ಇದೇನಾ?
ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದ ಬಳಿಕ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜ್ಯೋತಿಷ್ಯವನ್ನಾಗಲಿ, ಜಾತಕವನ್ನಾಗಿ ನಂಬುವುದಿಲ್ಲ ಭಾವನಾತ್ಮಕವಾಗಿ ಜನಗಳನ್ನು ಹಿಡಿದಿಟ್ಟುಕೊಳ್ಳುವ ತಂತ್ರ ಅದು ಎಂದು ಅವರು ವ್ಯಂಗ್ಯವಾಗಿ ನುಡಿದರು.
ಕುಮಾರಸ್ವಾಮಿ ಅವರಿಗೆ ಎರಡನೇ ಮದುವೆಯಾಗಿ, ಹೆಣ್ಣುಮಗು ಹುಟ್ಟಿದೆ. ಆದರೆ ಈಗ ಮಾಜಿ ಪ್ರಧಾನಿ ದೇವೇಗೌಡರು ಮತ್ತೆ ಪ್ರಧಾನ ಮಂತ್ರಿಗಳಾದರಾ, ಜ್ಯೋತಿಷಿ ಹೇಳಿದ್ದು ಏನಾಯಿತು ಎಂದು ಪ್ರಶ್ನಿಸಿದ್ದು, ಈ ಹೇಳಿಕೆ ಭಾರೀ ಬಿರುಗಾಳಿ ಎಬ್ಬಿಸುವ ಸಾಧ್ಯತೆಗಳಿವೆ.
ತಮ್ಮನ್ನು ಜಾತ್ಯತೀತ ಜನತಾದಳದಲ್ಲಿ ಸರಿಯಾಗಿ ನಡೆಸಿಕೊಂಡಿಲ್ಲ, ಬೇಕಾದ ಸ್ಥಾನಮಾನ ಕೊಟ್ಟಿಲ್ಲವೆಂದು ಮುನಿಸಿಕೊಂಡಿರುವ ಮಾಗಡಿ ಶಾಸಕ ಬಾಲಕೃಷ್ಣ ಮತ್ತಿತರರು ದೇವೇಗೌಡರು ಮತ್ತು ಕುಮಾರಸ್ವಾಮಿ ವಿರುದ್ಧ ದಂಗೆಯೆದ್ದಿದ್ದಾರೆ. ದಿನಕ್ಕೊಂದರಂತೆ ಪುಂಖಾನು ಪುಂಖವಾಗಿ ಮಾತನಾಡುತ್ತಿದ್ದಾರೆ.
ಕುಮಾರಸ್ವಾಮಿ ಜಾತಕದ ಪ್ರಕಾರ
ಕುಮಾರಸ್ವಾಮಿ ಜಾತಕದ ಪ್ರಕಾರ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತಾರೆಂದು ದೇವೇಗೌಡರು ಹೇಳಿಕೆ ನೀಡಿದ್ದಾರಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಖೋಟಾ ಮುಗಿದಿದೆ. ಈಗ ಏನಿದ್ದರೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಮಯ. ಡಿ.ಕೆ.ಶಿವಕುಮಾರ್ ಜಾತಕದಲ್ಲೂ ಕೂಡ ಮುಖ್ಯಮಂತ್ರಿ ಆಗುತ್ತಾರೆಂದು ಬಂದಿದೆ ಎಂದರು.
ಜಾತಕದಲ್ಲಿ ಇದೆ ಎಂದು ಮನೆಯಲ್ಲಿ ಕೂತರೆ ಆಗುತ್ತಾರಾ?
ಜಾತಕದಲ್ಲಿ ಇದೆ ಎಂದು ಮನೆಯಲ್ಲಿ ಕೂತರೆ ಆಗುತ್ತಾರಾ? ಅದಕ್ಕಾಗಿ ಎಷ್ಟು ಶ್ರಮ ಪಡಬೇಕೋ ಅಷ್ಟು ಶ್ರಮ ಪಟ್ಟರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬಹುದು. ಜಾತಕವನ್ನೇ ನಂಬಿಕೊಂಡು ರಾಜಕೀಯ ಮಾಡಲು ಸಾಧ್ಯವಿಲ್ಲ. ನಾನು ಜಾತಕವನ್ನು ನಂಬುವುದಿಲ್ಲ ಎಂದು ಇದೇ ವೇಳೆ ಅವರು ಹೇಳಿದರು.
ಎಲ್ಲಿ ಶಾಸಕರನ್ನು ಅಪಹರಣ ಮಾಡುತ್ತಾರೋ ಎಂಬ ಭೀತಿ
ಎಲ್ಲಿ ಶಾಸಕರನ್ನು ಅಪಹರಣ ಮಾಡುತ್ತಾರೋ ಎಂಬ ಭೀತಿ ಹಿನ್ನೆಲೆಯಲ್ಲಿ ಗುಜರಾತ್ ಶಾಸಕರು ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಬಂದಿದ್ದಾರೆ, ಮೋಜು ಮಸ್ತಿಗೆ ಬಂದಿಲ್ಲ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸದಸ್ಯರನ್ನು ಅಪಹರಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಮತ ಹಾಕಿಸಿಕೊಳ್ಳುತ್ತಾರೆ. ಕೆಳ ಹಂತದಿಂದಲೂ ಅಪಹರಣದ ಭೀತಿ ಇರುವ ಕಾರಣ ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ಕರ್ನಾಟಕಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಮಾತ್ರವಲ್ಲ, ಎಲ್ಲ ಪಕ್ಷದಲ್ಲೂ ಈ ಪ್ರಕ್ರಿಯೆ
ಕಾಂಗ್ರೆಸ್ ಪಕ್ಷದಲ್ಲಿ ಮಾತ್ರವಲ್ಲ, ಎಲ್ಲ ಪಕ್ಷದಲ್ಲೂ ಈ ಪ್ರಕ್ರಿಯೆ ನಡೆದುಕೊಂಡು ಬರುತ್ತಿದೆ. ಪ್ರವಾಹ ಬಂದರೆ ಶಾಸಕರು ಏನು ಮಾಡುತ್ತಾರೆ? ಗುಜರಾತ್ ಸರಕಾರ ಕ್ರಮ ಕೈಗೊಳ್ಳುತ್ತದೆ. ಇಲ್ಲಿಗೆ ಬಂದಿರುವ ಶಾಸಕರ ಕಾರ್ಯಕರ್ತರು ಅಲ್ಲೂ ಕೂಡ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮಗಳು ಈ ವಿಚಾರವನ್ನೇ ದೊಡ್ಡದಾಗಿ ಬಿಂಬಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.