ಪುತ್ರನ ಗೆಳೆಯನನ್ನು, ಸಿದ್ದರಾಮಯ್ಯ ಬಿಜೆಪಿಗೆ ಕಳುಹಿಸಿರುವ ಮರ್ಮ ಕಾಂಗ್ರೆಸ್ಸಿಗರೂ ಬಲ್ಲರು!
ಬೆಂಗಳೂರು, ಅ. 06: ವೈಯಕ್ತಿಕ ನೆಲೆಯಲ್ಲಿ ಸ್ನೇಹ ವಿಶ್ವಾಸವೇ ಬೇರೆ, ಆದರೆ, ಉಪ ಚುನಾವಣೆ ಘೋಷಣೆಯಾದ ನಂತರ ಪುತ್ರನ ಸ್ನೇಹಿತನನ್ನು ದಾಳವಾಗಿ ಬಳಸಿಕೊಂಡು ಮತ್ತೊಂದು ಪಕ್ಷಕ್ಕೆ ಕಳುಹಿಸುವ ಜಾಯಮಾನ ನನ್ನದಲ್ಲ. ಪುತ್ರನ ಗೆಳೆಯನನ್ನು, ಸಿದ್ದರಾಮಯ್ಯ ಅವರು ಬಿಜೆಪಿಗೆ ಕಳುಹಿಸಿರುವ ಮರ್ಮವನ್ನು ಕಾಂಗ್ರೆಸ್ಸಿಗರೂ ಬಲ್ಲರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಮಾಡಿರುವ ಟ್ವೀಟ್ ಕುತೂಹಲ ಮೂಡಿಸಿದೆ. ಜೊತೆಗೆ ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಚ್ಡಿಕೆ ಈ ಮಾತನ್ನಾಡಿದ್ದಾರೆ ಎಂಬ ಗೊಂದಲಗಳೂ ಎದ್ದಿವೆ.
ಕುಮಾರಸ್ವಾಮಿ ಅವರು ನೇರವಾಗಿ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಹೀಗೆ ವಾಗ್ದಾಳಿ ಮಾಡಿರುವುದಕ್ಕೆ ಕಾರಣವಿದೆ. ಅದು ಶಿರಾ ಕ್ಷೇತ್ರದ ಉಪ ಚುನಾವಣೆ. ಅಲ್ಲಿ ಅನುಕಂಪದ ಆಧಾರದ ಮೇಲೆ ಗೆಲ್ಲುವ ಭರವಸೆಯನ್ನು ಜೆಡಿಎಸ್ ಇಟ್ಟುಕೊಂಡಿದೆ. ಆದರೆ ಇದೀಗ ಸಿದ್ದರಾಮಯ್ಯ ಅವರ ರಾಜಕೀಯ ದಾಳದಿಂದ ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾಗಿ ಕುಮಾರಸ್ವಾಮಿ ಅವರು ಗರಂ ಆಗಿದ್ದಾರೆ.
ಸಿದ್ದರಾಮಯ್ಯ 'ದೋಸ್ತಿ ದಾಳ'
ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿ(ಎಸ್) ಒಳಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸುವ ಸಿದ್ದರಾಮಯ್ಯ ಅವರ ಬಳಿ ಇದಕ್ಕೆ ಯಾವ ಸಾಕ್ಷಿ ಇದೆ ? "ದೋಸ್ತಿ ದಾಳ" ವನ್ನು ರಾಜಕೀಯವಾಗಿ ಬಳಸಿಕೊಂಡು ತಾವು ಬೆಳೆದ ಪಕ್ಷಗಳಿಗೆ ಕುತ್ತು ತರುವ ಚಾಳಿ ಅವರಿಗೆ ಹೊಸತೇನಲ್ಲ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನನಗೂ ಪಕ್ಷಾತೀತವಾಗಿ ಹಿರಿಯ, ಕಿರಿಯ ಸ್ನೇಹಿತರಿದ್ದಾರೆ. ಪವಿತ್ರ ಸ್ನೇಹವನ್ನು ನಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿಲ್ಲ. ಆದರೆ, ಸಿದ್ದರಾಮಯ್ಯ ಅವರಿಗೆ ಇದೊಂದು ಅಂಟುಜಾಡ್ಯ ಎಂಬುದನ್ನು ಸಾಬೀತು ಪಡಿಸುತ್ತಲೆ ಬಂದಿದ್ದಾರೆ. ಉಪ ಚುನಾವಣೆ ಘೋಷಣೆಯಾದ ನಂತರ ಪುತ್ರನ ಗೆಳೆಯನನ್ನು ಬಿಜೆಪಿಗೆ ಕಳುಹಿಸಿರುವ ಮರ್ಮವನ್ನು ಕಾಂಗ್ರೆಸ್ಸಿಗರೂ ಬಲ್ಲರು ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ಮೇಲೆ ಕಾಂಗ್ರೆಸ್ಸಿಗರು ಅನುಮಾನಕ್ಕೆ ಒಳಗಾಗುವಂತೆ ಮಾತನಾಡಿದ್ದಾರೆ.
ಶಿರಾ ಉಪ ಚುನಾವಣೆ
ಇಷ್ಟೆಲ್ಲ ಆರೋಪ-ಪ್ರತ್ಯರೋಪಗಳಿಗೆ ಕಾರಣವಾಗಿರುವುದು ಶಿರಾ ಉಪ ಚುನಾವಣೆಯ ಬಿಜೆಪಿ ಸಂಭಾವ್ಯ ಅಭ್ಯರ್ಥಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್.ಆರ್. ಗೌಡ ಅವರ ಬದಲು ರಾಜೇಶ್ ಗೌಡ ಅವರಿಗೆ ಟಿಕೆಟ್ ಕೊಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈ ರಾಜೇಶ್ ಗೌಡ ಅವರು ಚಿತ್ರದುರ್ಗ ಕ್ಷೇತ್ರದ ಮಾಜಿ ಕಾಂಗ್ರೆಸ್ ಸಂಸದ ಸಿ.ಪಿ. ಮೂಡಲಗಿರಿಯಪ್ಪ ಅವರ ಪುತ್ರ. ಹಾಗೂ ಸಿದ್ದರಾಮಯ್ಯ ಅವರ ಪುತ್ರ, ಶಾಸಕ ಡಾ. ಯತೀಂದ್ರ ಅವರೊಂದಿಗೆ ರಾಜೇಶ್ ಗೌಡ ಉದ್ಯಮ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಅಣತಿಯಂತೆಯೆ ಈ ಎಲ್ಲ ಬೆಳವಣಿಗೆ ಆಗುತ್ತಿದೆ ಎಂಬುದು ಕುಮಾರಸ್ವಾಮಿ ಅವರ ಆರೋಪ.
ಜಯಚಂದ್ರ ಅವರಿಗೆ ಪರ್ಯಾಯ
ರಾಜೇಶ್ ಗೌಡ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಲ್ಲಿ ಅದರ ಲಾಭ ಕಾಂಗ್ರೆಸ್ ಪಕ್ಷಕ್ಕೆ ಆಗುತ್ತದೆ. ಆದರೆ ಭವಿಷ್ಯದಲ್ಲಿ ರಾಜೇಶ್ ಗೌಡ ಅವರು ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರಿಗೆ ಪರ್ಯಾವಾಗಿ ಬೆಳೆಯಲು ಸಹಾಯಕವಾಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಅವರು ಈ ರಾಜಕೀಯ ತಂತ್ರಗಾರಿಕೆ ಮಾಡಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಇದೇ ಕಾಂಗ್ರೆಸ್ಸಿಗರಿಗೂ ಗೊತ್ತಿರುವ ಮರ್ಮ ಎಂಬುದು ಕುಮಾರಸ್ವಾಮಿ ಅವರು ಟ್ವೀಟ್ ಒಳಾರ್ಥ ಎನ್ನಲಾಗುತ್ತಿದೆ.
Recommended Video
ಬಿಜೆಪಿಯಲ್ಲಿಯೂ ಅಸಮಾಧಾನ
ರಾಜೇಶ್ ಗೌಡ ಅವರು ಶಿರಾ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು, ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಕಾಂಗ್ರೆಸ್ ಟಿಕಟ್ ಸಿಗದಿದ್ದಿದ್ದಕ್ಕೆ ಜೆಡಿಎಸ್ನಿಂದ ಸ್ಪರ್ಧೆ ಮಾಡಲೂ ಅವರು ಪ್ರಯತ್ನಿಸಿದ್ದರು. ಆದರೆ ಎರಡೂ ಪಕ್ಷಗಳ ಟಿಕೆಟ್ ಸಿಗದಿದ್ದುದರಿಂದ ಇದೀಗ ಬಿಜೆಪಿ ಸೇರಲು ರಾಜೇಶ್ ಗೌಡ ಮುಂದಾಗಿದ್ದಾರೆ. ಇದು ಬಿಜೆಪಿ ಪಳೆಯದಲ್ಲಿ ಅಸಮಾಧಾನ ಮೂಡಿಸಿದೆ.
ಇಷ್ಟು ದಿನಗಳ ಕಾಲ ಪಕ್ಷದಲ್ಲಿ ಇಲ್ಲದವರನ್ನು ಕರೆದು ಪ್ರಾಥಮಿಕ ಸದಸ್ಯತ್ವ ಕೊಟ್ಟು ಅಭ್ಯರ್ಥಿಯನ್ನು ಮಾಡುತ್ತಿದ್ದೀರಿ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್.ಆರ್. ಗೌಡ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಮಂಜುನಾಥ್ ಅವರು ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಇದೀಗ ಬಿಜೆಪಿಯಲ್ಲಿ ಕೂಡ ಅಸಮಾಧಾನ ಶುರುವಾಗಿದೆ ಎನ್ನಲಾಗಿದೆ.