ಜುಲೈ 2ರಿಂದ ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನ
ಬೆಂಗಳೂರು,ಜೂ,22: ಹದಿನೈದನೇ ವಿಧಾನ ಸಭೆಯ ಮೊದಲ ಜಂಟಿ ಅಧಿವೇಶನವನ್ನು ರಾಜ್ಯಪಾಲರ ಭಾಷಣದೊಂದಿಗೆ ಜುಲೈ 2 ರಂದು ಆರಂಭಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿದೆ.
ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮಿಶ್ರ ಸರ್ಕಾರದ ಪೂರ್ಣ ಪ್ರಮಾಣದ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಮೂಲಕ ನೂತನ ಸರ್ಕಾರದ ಧ್ಯೇಯೋದ್ಧೇಶಗಳನ್ನು ಪ್ರಕಟಿಸಲು ಸಂಪುಟ ಸಮ್ಮತಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಗೊಳಿಸಿದರು.
ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಯವರು ಜುಲೈ 5 ರಂದು 2018-19 ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ ಅಧಿವೇಶನವು ಜುಲೈ 12 ರ ವರೆಗೂ ನಡೆಯಲಿದೆ ಎಂದು ಸಚಿವರು ಹೇಳಿದರು.
ರಾಜ್ಯ ವಿಧಾನ ಪರಿಷತ್ನಲ್ಲಿ ಸಭಾಪತಿ ಹಾಗೂ ಉಪಸಭಾಪತಿಯವರ ಹುದ್ದೆ ಖಾಲಿ ಇರುವುದರಿಂದ ಕಲಾಪ ಮತ್ತಿತರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಹಂಗಾಮಿ ಸಭಾಪತಿಯವರನ್ನಾಗಿ ನೇಮಕ ಮಾಡಲು ಸಂಪುಟ ಅನುಮೋದನೆ ನೀಡಿದೆ.
ಚಿಂತಕರ ಚಾವಡಿ ಬಿಟ್ಟು ಹೊರಟ ಡಿ.ಎಚ್.ಶಂಕರಮೂರ್ತಿ!
ಸಭಾಪತಿ ಸ್ಥಾನ ಅಲಂಕರಿಸಿದ್ದ ಡಿ ಹೆಚ್ ಶಂಕರ ಮೂರ್ತಿ ಅವರು ಗುರುವಾರ ನಿವೃತ್ತಿ ಹೊಂದಿದ್ದರು. ಅಲ್ಲದೆ, ಉಪಸಭಾಪತಿ ಸ್ಥಾನದಲ್ಲಿದ್ದ ಮರಿತಿಬ್ಬೇಗೌಡ ಅವರು ಪುನರಾಯ್ಕೆಯಾಗಿರುವುದರಿಂದ ಆ ಹುದ್ದೆಯೂ ತೆರವಾಗಿದೆ. ಈ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಅವರನ್ನು ಮೇಲ್ಮನೆಗೆ ಹಂಗಾಮಿ ಸಭಾಪತಿಯನ್ನಾಗಿ ನಿಯುಕ್ತಿಗೊಳಿಸಲು ಸಂಪುಟ ಸಭೆ ಸಮ್ಮತಿಸಿದೆ ಎಂದು ಸಚಿವರು ವಿವರಿಸಿದರು.
ರಾಜ್ಯ ಸರ್ಕಾರದ ಅಧಿಕಾರಿ ಮತ್ತು ಸಿಬ್ಬಂದಿಯ ಎಲ್ಲಾ ವರ್ಗಾವಣಾ ಪ್ರಕ್ರಿಯೆಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಲು ಸಚಿವ ಸಂಪುಟ ಸಮ್ಮತಿಸಿದೆ. ಸಾಮಾನ್ಯ ವರ್ಗಾವಣಾ ಪ್ರಕ್ರಿಯೆಯ ಮಾರ್ಗಸೂಚಿಯಂತೆ ಇಲಾಖಾವಾರು ಬಲದ ಶೇಕಡಾ ಆರರ ಬದಲು ಶೇಕಡಾ ನಾಲ್ಕರಷ್ಟು ಮಾತ್ರ ವರ್ಗಾವಣೆಯನ್ನು ಮಾಡಲು ಸಂಪುಟ ಅನುಮೋದನೆ ನೀಡಿದೆ.