ಸಾಲಮನ್ನಾ ಕುರಿತು ಸುಮಲತಾ ಜನರ ದಾರಿ ತಪ್ಪಿಸುತ್ತಿದ್ದಾರೆ: ಕುಮಾರಸ್ವಾಮಿ
ಬೆಂಗಳೂರು, ಏಪ್ರಿಲ್ 5: ಸಾಲಮನ್ನಾ ಕುರಿತು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸುಮಲತಾ ಅವರ ವಿರುದ್ಧ ಪರೋಕ್ಷವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹಣಕಾಸು ಇಲಾಖೆ ಅಧಿಕಾರಿಗಳು ರೈತರ ಸಾಲಮನ್ನಾ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾದ ಅವರ ಹೇಳಿಕೆಯು ಸತ್ಯಕ್ಕೆ ದೂರವಾದುದು. ಈ ಹೇಳಿಕೆಯು ಸತ್ಯಕ್ಕೆ ದೂರವಾದುದು ಎಂದು ಸ್ವತಃ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳೇ ಸ್ಪಷ್ಟ ಪಡಿಸಿದ್ದಾರೆ.
ಸಾಲ ಮನ್ನಾ ಮಾಡುವುದು ಕಷ್ಟ ಅನ್ನೋದು ಅಂಬರೀಶ್ಗೆ ಗೊತ್ತಿತ್ತು: ಸುಮಲತಾ
ಈ ಬಗ್ಗೆ ನಾನು ಕೂಡ ಅವರೊಂದಿಗೆ ಚರ್ಚಿಸಿದ್ದು ತಾವು ಅಂಥ ಮಾತುಗಳನ್ನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯು ಇಂತಹ ಗೊಂದಲಕಾರಿ ಹೇಳಿಕೆ ನೀಡಿ ನಾಡಿನ ಜನರ ಅದರಲ್ಲೂ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.
ಮಂಡ್ಯದ ಪಕ್ಷೇತರ ಅಭ್ಯರ್ಥಿ ಯಾವುದೇ ಮಾಹಿತಿ ಇಲ್ಲದೆ ಜನರ ದಿಕ್ಕು ತಪ್ಪಿಸುವ ಮಾತಾಡಿದ್ದಾರೆ.
ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕುಗಳ 15.58 ಲಕ್ಷ ರೈತರಿಗೆ 6223.48 ಕೋಟಿ ರೂ. ಸಾಲ ಮನ್ನಾ ಮೊತ್ತ ಮಂಜೂರು ಮಾಡಲಾಗಿದೆ. 2019-20 ರ ಆಯವ್ಯಯದಲ್ಲಿ 12000 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಮಾಹಿತಿ ವೆಬ್ ಸೈಟಿನಲ್ಲಿಯೂ ಲಭ್ಯವಿದೆ.
ಕೃಷಿಕರ ಕುರಿತು ನನ್ನ ಬದ್ಧತೆಯ ಕುರಿತು ಅವರು ಮಾತನಾಡುವ ಅಗತ್ಯವಿಲ್ಲ. ಕಳೆದ ಎರಡು ಆಯವ್ಯಯ ಗಳಲ್ಲಿ ಘೋಷಿಸಿ ಜಾರಿಗೊಳಿಸುತ್ತಿರುವ ದೂರಾದೃಷ್ಟಿಯ ಕಾರ್ಯಕ್ರಮಗಳೇ ನಮ್ಮ ರೈತಪರ ಕಾಳಜಿಗೆ ಸಾಕ್ಷಿ.
ಮಂಡ್ಯದ ಜನರ ಆಶಯದಂತೆ ಭವಿಷ್ಯದ ರಾಜಕೀಯ ನಿರ್ಧಾರ: ಸುಮಲತಾ ಸ್ಪಷ್ಟನೆ
ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ನಮ್ಮ ಮೈತ್ರಿ ಸರ್ಕಾರ ಕೈಗೊಂಡಿರುವ ಕ್ರಮ ಸಾಲ ಮನ್ನಾ ಒಂದೇ ಅಲ್ಲ. ಬಿತ್ತನೆಯಿಂದ ಬೆಳೆ ಸಂಸ್ಕರಣೆ, ಸಂಗ್ರಹಣೆ ವರೆಗೆ ಎಲ್ಲ ಹಂತದಲ್ಲೂ ನೆರವು ನೀಡಲು ನಮ್ಮ ಸರ್ಕಾರ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 46 ಸಾವಿರ ಕೋಟಿ ರೂ. ಗಳಿಗೂ ಅಧಿಕ ಮೊತ್ತ ನಮ್ಮ ಸರ್ಕಾರ ಒದಗಿಸಿದೆ ಎಂದು ಅವರು ತಿಳಿಸಿದ್ದಾರೆ.
ಸುಮ್ಮನೆ ಹುರುಳಿಲ್ಲದ ಗಂಭೀರ ಆರೋಪ ಮಾಡುವ ಮುನ್ನ ವಸ್ತು ಸ್ಥಿತಿ ಅರಿತು ಮಾತನಾಡುವುದು ಸೂಕ್ತ ಎಂದು ಅವರು ತಿಳಿಸಿದ್ದಾರೆ.